
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಗೆಳತಿಯನ್ನು ಬೆಂಗಳೂರಿನಿಂದ ಗೋವಾಕ್ಕೆ ಕರೆದುಕೊಂಡು ಹೋದ ಪ್ರಿಯಕರ ಆಕೆಯ ಗಂಟಲು ಸೀಳಿ ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ.

j3tvkannada
ಗೋವಾದ ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ಬೆಂಗಳೂರಿನ ರೋಶಿನಿ ಮೋಸೆಸ್ (22) ಅವರ ಮೃತದೇಹ ದೊರೆತಿದೆ. ಕೊಲೆಯ ಆರೋಪದ ಮೇರೆಗೆ ರೋಶಿನಿಯ 22 ವರ್ಷದ ಪ್ರಿಯಕರ ಸಂಜಯ್ ಕೆವಿನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇವರಿಬ್ಬರು ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಯಾಗಲೆಂದು ಗೋವಾಗೆ ಬಸ್ನಲ್ಲಿ ತೆರಳಿದ್ದರು. ಈ ವೇಳೆ ಇವರಿಬ್ಬರ ನಡುವೆ ಇದ್ದಕ್ಕಿದ್ದಂತೆ ಜಗಳ ನಡೆದಿತ್ತು. ಬಳಿಕ ಗೋವಾದ ಪಿಲಿಯೆಮ್-ಧರ್ಬಂದೋರಾದಲ್ಲಿ ಇಬ್ಬರು ಬಸ್ನಿಂದ ಇಳಿದಿದ್ದರು. ಸಂಜಯ್, ರೋಶಿನಿಯನ್ನು ಕಾಡಿಗೆ ಕರೆದುಕೊಂಡು ಹೋಗಿ, ಚಾಕುವಿನಿಂದ ಆಕೆಯ ಗಂಟಲು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ.
ಗೋವಾದ ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿತ್ತು. ಶವ ಪರಿಶೀಲನೆ ನಡೆಸುವ ವೇಳೆ ಮಹಿಳೆಯ ಪರ್ಸ್ನಲ್ಲಿ ಹುಬ್ಬಳ್ಳಿಯಿಂದ ಗೋವಾ ಬಸ್ ಹತ್ತಿದ ಟಿಕೆಟ್ ಲಭ್ಯವಾಗಿತ್ತು. ಬಳಿಕ ಪೊಲೀಸರಿಗೆ ಸಿಕ್ಕ ಫೋಟೊ ಹಾಗೂ ದಾಖಲೆಗಳಿಂದ ಮೃತಪಟ್ಟಿರುವ ಯುವತಿ ಬೆಂಗಳೂರಿನ ರೋಶಿನಿ ಎಂದು ಪತ್ತೆಯಾಗಿದೆ. ಸಂಜಯ್ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು ಹುಬ್ಬಳ್ಳಿಯಲ್ಲಿ ಆತನನ್ನು ಬಂಧಿಸಿದ್ದಾರೆ.