ಮಹಿಳಾ ಪ್ರೀಮಿಯರ್ ಲೀಗ್ ನ ಪ್ರಾರಂಭದ 2 ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ನಿರಂತರ ಮೂರನೇ ಪಂದ್ಯದಲ್ಲಿ ಸೋಲು ಕಂಡಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದ ಗುಜರಾತ್ ತಂಡದ ನಾಯಕಿ ಆಶ್ಲೆ ಗಾರ್ಡನರ್ ಅವರು ಸ್ಮೃತಿ ಮಂದಾನ ಬಳಗದ ಹ್ಯಾಟ್ರಿಕ್ ಸೋಲಿಗೆ ಕಾರಣಕರ್ತೆಯಾದರು. ಸದ್ಯ ಅಂಕ ಪಟ್ಟಿಯಲ್ಲಿ ಮುಂಬೈ, ದಿಲ್ಲಿ ಬಳಿಕ ಮೂರನೇ ಸ್ಥಾನದಲ್ಲಿ ಆರ್. ಸಿ.ಬಿ ಇದೆ. ಎಲಿಮಿನೇಟರ್ ಗೂ ಮುನ್ನ ಆರ್. ಸಿ.ಬಿ.ಗೆ 3 ಪಂದ್ಯಗಳು ಬಾಕಿ ಉಳಿದಿದ್ದು ಎಲ್ಲದರಲ್ಲೂ ಉತ್ತಮ ಪ್ರದರ್ಶನ ನೀಡಬೇಕಿದೆ.

ಆಶ್ಲೆ ಗಾರ್ಡನರ್ ಅವರ ಅಮೋಘ ಅರ್ಧ ಶತಕದ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ ರಾಯಲ್ ಚಾಲೆಂಜರ್ಸ್ ತಂಡವನ್ನು 6 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿದೆ. ಈ ಮೂಲಕ ಸ್ಮೃತಿ ಮಂಧಾನ ನೇತೃತ್ವದ ಆರ್. ಸಿ.ಬಿ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಹ್ಯಾಟ್ರಿಕ್ ಸೋಲನ್ನು ಕಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 126 ರನ್ ಗಳ ಗುರಿ ಪಡೆದ ಗುಜರಾತ್ ಜೈಂಟ್ಸ್ ಇನ್ನೂ 21 ಎಸೆತಗಳು ಬಾಕಿ ಇರುವಂತೆಯೇ ವಿಜಯಶಾಲಿಯಾಯಿತು. ಸಾಧಾರಣ ಮೊತ್ತವನ್ನು ಬೆಂಬತ್ತಲು ಶುರು ಮಾಡಿದ ಗುಜರಾತ್, ಎಚ್ಚರಿಕೆಯ ಆರಂಭ ಮಾಡಿತು. ಆರಂಭಕಾರ್ತಿಯಾಗಿರುವ ವಿಕೆಟ್ ಕೀಪರ್ ಬ್ಯಾಟರ್ 20 ಎಸೆತಗಳಿಂದ 17 ಮತ್ತು ದಯಾಲನ್ ಹೇಮಲತಾ 15 ಎಸೆತಗಳಿಂದ 11 ರನ್ ಗಳಿಸಿದರು. 32 ರನ್ ಗೆ 2 ವಿಕೆಟ್ ಕಬಳಿಸಿದ ಆರ್. ಸಿ.ಬಿ ಒಂದು ಹಂತದಲ್ಲಿ ಗೆಲುವಿನ ಆಸೆ ಇರಿಸಿಕೊಂಡಿತ್ತು. ಹರ್ಮನ್ ಡಿಯೋಲ್ ಸಹ ಕೇವಲ 5 ರನ್ ಗಳಿಸಿ ಪೇವಿಲಿಯನ್ ಸೇರಿಕೊಂಡಾಗಲೂ ತಂಡಕ್ಕೆ ಗೆಲುವಿನ ವಿಶ್ವಾಸವಿತ್ತು.
ನಾಯಕಿ ಆಶ್ಲೆ ಗಾರ್ಡನರ್(58) ಮತ್ತು ಫೋಬ್ ಲಿಚ್ ಫೀಲ್ಡ್ (30 ನಾಟೌಟ್) ಅವರು ವೇಗವಾಗಿ ರನ್ ಧಾರಣೆಯನ್ನು ಹೆಚ್ಚಿಸುವುದರೊಂದಿಗೆ ಎದುರಾಳಿ ತಂಡದ ಕೈಯಿಂದ ಗೆಲುವನ್ನು ಕಸಿದುಕೊಂಡರು. 16ನೇ ಓವರ್ ನಲ್ಲಿ ವಾರ್ ಹೆಮ್ ಅವರು ಗಾರ್ಡನರ್ ಅವರ ವಿಕೆಟ್ ಕಬಳಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಉಳಿದ ಕೆಲವನ್ನು ಲಿಚ್ ಫೀಲ್ಡ್ ಅವರು ಆರಾಮವಾಗಿ ಮುಗಿಸುತ್ತಾರೆ. 31 ಎಸೆತಗಳಿಂದ 6 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದ 58 ರನ್ ಗಳಿಸಿದ ಗಾರ್ಡನರ್ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆರ್. ಸಿ.ಬಿ ಕೇವಲ 25 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್ ಹಾಟ್ಜ್(4), ಕಳೆದ ಪಂದ್ಯದ ಹೀರೋಯಿನ್ ಎಲ್ಲಿಸ್ ಪೆರ್ರಿ(0) ಇಬ್ಬರೂ ಉತ್ತಮ ಆಟ ಪ್ರದರ್ಶಿಸುವಲ್ಲಿ ವಿಫಲರಾದರು. ನಾಯಕಿ ಸ್ಮೃತಿ ಮಂದಾನ(10) ಎರಡಂಕಿ ತಲುಪಿದ್ದೇ ದೊಡ್ಡ ಸಾಧನೆಯಾಯಿತು. ಹೀಗಾಗಿ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳ ಮೇಲೆ ಒತ್ತಡ ಉಂಟಾಗಿ ರನ್ ಧಾರಣೆ ಕುಸಿಯಿತು.
ಮಧ್ಯಮ ಕ್ರಮಾಂಕದಲ್ಲಿ ಕನಿಕಾ ಅಹುಜಾ(33), ರಾಘ್ವಿ ಬಿಸ್ಟ್(22) ಜಾರ್ಜಿಯಾ ವಾರೆಹಮ್(20) ಕೊಂಚ ಇನ್ನಿಂಗ್ಸ್ ಗೆ ಬಲ ತುಂಬಿದರು. ಹೀಗಾಗಿ ತಂಡ ಅಂತಿಮವಾಗಿ ಏಳು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಲಷ್ಟೇ ಶಕ್ತವಾಯಿತು. ಗುಜರಾತ್ ಜೈಂಟ್ಸ್ ಬೌಲರ್ ಗಳು ಪ್ರಾರಂಭದಿಂದ ಕೊನೆಯವರೆಗೂ ಬಿಗು ಬೌಲಿಂಗ್ ದಾಳಿ ನಡೆಸಿದ್ದರಿಂದ ಆರ್. ಸಿ.ಬಿ ಎಲ್ಲೂ ದೊಡ್ಡ ಮೊತ್ತಕ್ಕೆ ಪ್ರಯತ್ನಿಸಲು ಸಾಧ್ಯವೇ ಆಗಲಿಲ್ಲ. ಗುಜರಾತ್ ಪರ ಡಾಟಿನ್ ಮತ್ತು ತನುಜಾ ಕನ್ವರ್ ತಲಾ 2 ವಿಕೆಟ್ ಕಬಳಿಸಿದರು. ಆಶ್ಲೆ ಗಾರ್ಡನರ್ ಮತ್ತು ಕಾಶ್ವಿ ಗೌತಮ್ ತಲಾ 1 ವಿಕೆಟ್ ಗಳಿಸಿದರು.