
ಪುತ್ತೂರು: ಈಗಾಗಲೇ 1,110 ಕೋಟಿ ರೂ. ವೆಚ್ಚದ ಬಹು ಗ್ರಾಮ ಕುಡಿಯುವ ನೀರು ಯೋಜನೆ ಪುತ್ತೂರು, ಸುಳ್ಯ, ಕಡಬ ಮತ್ತು ಬಂಟ್ವಾಳ ತಾಲೂಕಿನ ಬಹು ಪಾಲು ಹಾಗೂ ಬೆಳ್ತಂಗಡಿ ತಾಲೂಕಿನ ಆಂಶಿಕ ಭಾಗವನ್ನು ಆವರಿಸಿಕೊಂಡು ಕಾರ್ಯಗತಗೊಳ್ಳುತ್ತಿದೆ. ಇದರ ನಡುವೆಯೇ, ಮತ್ತೊಂದು ಮೆಗಾ ನೀರಾವರಿ ಯೋಜನೆ ಕಾರ್ಯಗತಗೊಳ್ಳಲು ಅಣಿಯಾಗುತ್ತಿದೆ. ಅದೇ ಕಟಾರಾ ಮೆಗಾ ಅಣೆಕಟ್ಟು ಯೋಜನೆ.

ಇದಕ್ಕೆ ರಾಜ್ಯ ಸರಕಾರದ ಅನುಮೋದನೆ ಬಾಕಿಯಿದ್ದು, ಅನುಷ್ಠಾನಗೊಂಡಲ್ಲಿ ಗ್ರಾಮೀಣ ದಕ್ಷಿಣ ಕನ್ನಡದ ಬೃಹತ್ ನೀರಾವರಿ ಯೋಜನೆ ಎಂಬ ಖ್ಯಾತಿ ಪಡೆಯಲಿದೆ. ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಬರುವ ದಾರಂದಕುಕ್ಕು ಎಂಬಲ್ಲಿಂದ ಬಲಕ್ಕೆ ಕವಲೊಡೆದ ಕಟಾರ ರಸ್ತೆಯಲ್ಲಿ5 ಕಿ.ಮೀ. ಸಾಗಿದರೆ ಕುಮಾರಧಾರಾ ನದಿ ಸಿಗುತ್ತದೆ. ಇಲ್ಲಿ ರಸ್ತೆ ಕೊನೆಗೊಳ್ಳುತ್ತಿದ್ದು, ಇದೇ ಭಾಗದಲ್ಲಿ ಕಟಾರಾ ಮೆಗಾ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಸಂಜೀವ ಮಠಂದೂರು ಶಾಸಕರಾಗಿದ್ದಾಗಲೇ ಕಟಾರ ಅಣೆಕಟ್ಟು ಯೋಜನೆ ರೂಪಿಸಲಾಗಿತ್ತು. ಅವರ ಶಾಸಕತ್ವ ಅವಧಿ ಮುಗಿದಾಗ ಯೋಜನೆ ನನೆಗುದಿಗೆ ಬಿದ್ದಿತ್ತು. ಹಾಲಿ ಶಾಸಕ ಅಶೋಕ್ ರೈ ಈ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಹಿಂದಿನ ಸರಕಾರಕ್ಕೆ ಅಂದಿನ ಶಾಸಕರು ಸಲ್ಲಿಸಿದ್ದ ಪ್ರಸ್ತಾವನೆಗೆ ಮರುಜೀವ ನೀಡಿರುವ ಅಶೋಕ್ ರೈ ಈಗಾಗಲೇ ಜಲಸಂಪನ್ಮೂಲ ಖಾತೆ ಸಚಿವರು ಮತ್ತು ಇಲಾಖಾ ಮಟ್ಟದ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ.

ಕಟಾರ ಅಣೆಕಟ್ಟು ಯೋಜನೆಗೆ 270 ಕೋಟಿ ರೂ. ಅಂದಾಜಿಸಲಾಗಿದ್ದು, ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಸಕರ ಪ್ರಕಾರ ಶೀಘ್ರದಲ್ಲೇ ಡಿ.ಪಿ.ಆರ್ ತಯಾರಾಗಲಿದೆ. 9 ಮೀ. ಎತ್ತರದ ಅಣೆಕಟ್ಟು ಇದಾಗಲಿದ್ದು, ಇಲ್ಲಿ ಸಂಗ್ರಹಗೊಳ್ಳುವ ನೀರು ಸುಮಾರು 12 ಕಿ.ಮೀ. ದೂರದವರೆಗೂ ಶೇಖರಣೆಯಾಗಲಿದೆ. ಕಟಾರದಿಂದ ಹಿಂದಕ್ಕೆ ವೀರಮಂಗಲ, ಶಾಂತಿಗೋಡು, ಸವಣೂರುವರೆಗೂ ನದಿಯಲ್ಲಿ ಜಲ ಸಂಗ್ರಹಗೊಳ್ಳಲಿದೆ.
ಸವಣೂರಿನಿಂದ 4 ಕಿ.ಮೀ. ದೂರದ ಶಾಂತಿ ಮುಗೇರ್ನಲ್ಲಿಈಗಾಗಲೇ ಕಿಂಡಿ ಅಣೆಕಟ್ಟು ಕಾರ್ಯಾಚರಿಸುತ್ತಿದೆ. ಇಲ್ಲಿಸಂಗ್ರಹಗೊಳ್ಳುವ ನೀರನ್ನೇ ಬಳಸಿಕೊಂಡು ಆಲಂಕಾರು ವಲಯ ಬಹು ಗ್ರಾಮ ಕುಡಿಯುವ ನೀರು ಯೋಜನೆ ಕಾರ್ಯ ರೂಪಕ್ಕೆ ಬರುತ್ತಿದೆ. ಶಾಂತಿ ಮೊಗೇರ ಅಣೆಕಟ್ಟಿನಿಂದಾಗಿ ಅದಕ್ಕಿಂತಲೂ ಹಿಂದಿನ 3 ಕಿ.ಮೀ. ದೂರಕ್ಕೆ ಜಲ ಸಂಗ್ರಹ ಪ್ರಯೋಜನ ಸಿಗುತ್ತಿದೆ. ಕಟಾರ ಅಣೆಕಟ್ಟು ನೀರು ಸಂಗ್ರಹದ ಜೊತೆಗೆ ಸೇತುವೆಯಾಗಿಯೂ ಕಾರ್ಯ ನಿರ್ವಹಿಸಲಿದೆ.
ಇದು ಕಾರ್ಯಗತಗೊಂಡರೆ ಪುತ್ತೂರು ಭಾಗದಿಂದ ಹಿರೇಬಂಡಾಡಿ ಮೂಲಕ ಕಡಬಕ್ಕೆ ಹೋಗಲು ಹತ್ತಿರವಾಗಲಿದೆ. ಪ್ರಸ್ತುತ ನೇತ್ರಾವತಿ ನದಿಗೆ ಬಂಟ್ವಾಳದ ಶಂಭೂರಿನಲ್ಲಿಅಣೆಕಟ್ಟು ನಿರ್ಮಿಸಲಾಗಿದ್ದು, ಅದಕ್ಕಿಂತ ಹಿಂದಿನ ಬಿಳಿಯೂರಿನಲ್ಲಿ ಮತ್ತೊಂದು ಹೊಸ ಅಣೆಕಟ್ಟು ಕಾರ್ಯನಿರ್ವಹಿಸುತ್ತಿದೆ. ಬಿಳಿಯೂರು ನೀರು ಶೇಖರಣೆ ಪರಿಣಾಮ ಉಪ್ಪಿನಂಗಡಿ ಸಂಗಮ ಕ್ಷೇತ್ರದವರೆಗೆ ಬೇಸಿಗೆಯಲ್ಲಿ ನೇತ್ರಾವತಿ ಜಲರಾಶಿಯಿಂದ ಕಂಗೊಳಿಸುತ್ತಿದ್ದಾಳೆ.
ಉಪ್ಪಿನಂಗಡಿಯಲ್ಲಿ ಸಂಗಮಿಸುವ ಕುಮಾರಧಾರ ನದಿಗೆ ನೆಕ್ಕಿಲಾಡಿಯಲ್ಲಿಅಣೆಕಟ್ಟು ನಿರ್ಮಿಸಲಾಗಿದ್ದು, ಯಶಸ್ವಿಯಾಗಿದೆ. ಸಂಗಮ ತಾಣದಲ್ಲೇ 360 ಕೋಟಿ ರೂ. ವೆಚ್ಚದ ಇನ್ನೊಂದು ಅಣೆಕಟ್ಟು ಯೋಜನೆಯೂ ಕಾರ್ಯರೂಪ ಹಂತದಲ್ಲಿದೆ. ಎತ್ತಿನಹೊಳೆ ಯೋಜನೆ ಮೂಲಕ ರಾಜ್ಯದ ಪೂರ್ವ ಬಯಲುಸೀಮೆಗೆ ನೀರುಣಿಸಲು ಸರಕಾರ ಯೋಜನೆ ಕಾರ್ಯಗತಗೊಳಿಸುತ್ತಿದೆ. ಇದಕ್ಕೆ ಪರ್ಯಾಯವಾಗಿ ದಕ್ಷಿಣ ಕನ್ನಡಕ್ಕೆ ನೀರಾವರಿ ಯೋಜನೆ ಕೊಡುವಂತೆ ಸರಕಾರದ ಮೇಲೆ ಒತ್ತಡ ಹಾಕಿದ್ದೇನೆ. 270 ಕೋಟಿ ರೂ. ವೆಚ್ಚದ ಕಟಾರ ಯೋಜನೆ ಶೀಘ್ರ ಅನುಮೋದನೆ ಪಡೆಯುವ ನಿರೀಕ್ಷೆ ಇದೆ. ಇದು ಅನುಷ್ಠಾನಗೊಂಡರೆ ಕುಮಾರಧಾರಾ ನದಿಯ ಮೆಗಾ ಅಣೆಕಟ್ಟು ಇದಾಗಲಿದೆ.