
ಹುಬ್ಬಳ್ಳಿ:ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದವನನ್ನೇ ಮದುವೆಯಾಗಬೇಕು ಎನ್ನುವುದು ಯುವತಿಯ ಉದ್ದೇಶ ಆದರೆ, ಹುಡುಗನ ಜಾತಿ ಬೇರೆ ಎಂಬ ಕಾರಣಕ್ಕೆ ಪೋಷಕರಿಂದ ಇದಕ್ಕೆ ವಿರೋಧವಿತ್ತು. ಎಲ್ಲರನ್ನೂ ಎದುರಿಸಿ ಮದುವೆಯಾಗಿ ಜೀವನ ನಡೆಸುತ್ತಿದ್ದಾಕೆಯನ್ನು ಗೋಣಿಚೀಲದಲ್ಲಿ ಎತ್ತಿಕೊಂಡು ಬಂದ ಘಟನೆ ಭೈರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಸದ್ಯ ನವನಗರ ಠಾಣೆ ಪೊಲೀಸರ ಮಧ್ಯ ಪ್ರವೇಶದಿಂದ ಪ್ರಕರಣವು ಸುಖಾಂತ್ಯ ಕಂಡಿದೆ.

j3tvkannada.in
ಸುಷ್ಮಿತಾ ಮತ್ತು ನಿರಂಜನ್ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಯಾದ ನಂತರ ಪೋಷಕರ ವಿರೋಧ ಹೆಚ್ಚಾಯಿತು. ಇದರಿಂದ ಬೇಸತ್ತು ಇಬ್ಬರೂ ದೂರವಾಗಿದ್ದರು. ಆದರೆ, ಪ್ರಿಯಕರನನ್ನು ಬಿಟ್ಟು ಇರಲು ಸಾಧ್ಯವಾಗದೆ ಸುಷ್ಮಾ ಮತ್ತೆ ನಿರಂಜನ ಮನೆಗೆ ಬಂದಿದ್ದಳು. ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಪೋಷಕರು ಬಲವಂತವಾಗಿ ಎತ್ತಿಕೊಂಡು ಹೋಗಿದ್ದಾರೆ. ಎರಡು ವರ್ಷಗಳ ಹಿಂದೆಯೇ ಅವರು ಗದಗದಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡು, ನಂತರ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಮದುವೆ ಮಾಡಿಕೊಂಡು ಸುಖ ಜೀವನ ನಡೆಸುತ್ತಿದ್ದರು.
ಆನಂತರ ಸುಷ್ಮಿತಾ ಮನೆಯವರು ಹುಬ್ಬಳ್ಳಿಯ ನವನಗರ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದರು. ಒಂದೂವರೆ ತಿಂಗಳು ಬೇರೆಡೆ ಇದ್ದ ಈ ಜೋಡಿ ನಂತರ ನವನಗರ ಠಾಣೆಗೆ ಬಂದರು. ಆಗ ಸುಷ್ಮಿತಾ ಪೋಷಕರು, ಆಕೆಯ ತಾಯಿಗೆ ಆರೋಗ್ಯ ಸರಿಯಿಲ್ಲ. ಕೆಲ ದಿನಗಳ ಕಾಲ ಇಟ್ಟುಕೊಂಡು ಕಳುಹಿಸುತ್ತೇವೆ ಎಂದು ಹೋದರು. ನಂತರ ಸುಷ್ಮಾ ತಂದೆ ಪರಶುರಾಮ ಮತ್ತು ಆಕೆಯ ಚಿಕ್ಕಪ್ಪಂದಿರಾದ ಮಹಾಂತೇಶ್ ಹಾಗೂ ಮಂಜು ಎಂಬುವವರು ಸುಷ್ಮಾಳನ್ನು ಬೆದರಿಸಿದ್ದಾರೆ.
ಗಂಡನ ಮನೆಯಲ್ಲಿದ್ದ ಸುಷ್ಮಿತಾರನ್ನು ಬಲವಂತವಾಗಿ ಎತ್ತಿಕೊಂಡು ಹೋಗುವಾಗ, ಇದನ್ನು ತಡೆಯಲು ಹೋದ ನಿರಂಜನ್ಗೆ, ಈಕೆಯ ತಂಟೆಗೆ ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸುಷ್ಮಿತಾ ಪೋಷಕರು ಬೆದರಿಕೆ ಹಾಕಿ ಸುಷ್ಮಾಳನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ಕುಟುಂಬಸ್ಥರು ಎತ್ತಿಕೊಂಡು ಹೋದರು. ರಕ್ಷಣೆಗಾಗಿ ನಿರಂಜನ ಈಗ ಹುಬ್ಬಳ್ಳಿಯ ಪೊಲೀಸರ ಸಹಾಯ ಕೋರಿದ್ದಾನೆ.
ಸುಷ್ಮಿತಾರನ್ನು ಎತ್ತಿಕೊಂಡು ಹೋಗುವ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಸುಷ್ಮಿತಾ ಹೆತ್ತವರನ್ನು ಮತ್ತು ನಿರಂಜನನನ್ನು ಠಾಣೆಗೆ ಕರೆಸಿಕೊಂಡ ನವನಗರ ಪೊಲೀಸರು, ಇಬ್ಬರ ವಿಚಾರಣೆ ನಡೆಸಿದರು. ಇಬ್ಬರ ಪೋಷಕರೊಂದಿಗೆ ಪೊಲೀಸರು ಮಾತನಾಡಿದರು. ಈ ವೇಳೆ ಸುಷ್ಮಿತಾ ಪೋಷಕರು ಅಳಿಯ ನಿರಂಜನ ಮನೆಗೆ ಕಳುಹಿಸಲು ಒಪ್ಪಿಕೊಂಡರು. ಹೀಗಾಗಿ, ಯಾವುದೇ ದೂರನ್ನು ದಾಖಲಿಸಲಿಲ್ಲ. ನಿರಂಜನ ಪತ್ನಿ ಸುಷ್ಮಿತಾರನ್ನು ತನ್ನ ಜೊತೆ ಕರೆದುಕೊಂಡು ಹೋದರು.
ಸದ್ಯ ನವನಗರ ಠಾಣೆಯಲ್ಲಿ ಪ್ರಕರಣ ಸುಖಾಂತ್ಯ ಕಂಡಿದೆ. ಹೆತ್ತವರು, “ನಾವು ಸುಷ್ಮಿತಾ ಮತ್ತು ನಿರಂಜನ ತಂಟೆಗೆ ಹೋಗುವುದಿಲ್ಲ” ಎಂದು ಪೊಲೀಸರ ಮುಂದೆ ಹೇಳಿದ್ದಾರೆ. ಹೀಗಾಗಿ, ಹೆತ್ತವರ ವಿರೋಧದಿಂದ ಪ್ರೀತಿಸಿ ದೂರವಾಗಿದ್ದ ಜೋಡಿ, ಇದೀಗ ಮತ್ತೆ ಒಂದಾಗಿದೆ.