
ಬೆಳಗಾವಿ: ಇತೀಚೆಗೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ನಡೆದಿದ್ದು ಇಡೀ ವಿಶ್ವದಾದ್ಯಂತದಿಂದ ಕೋಟ್ಯಾನುಕೋಟಿ ಜನ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿದ್ದರು. 45 ದಿನಗಳ ಕಾಲ ನಡೆದ ಮಹಾ ಕುಂಭಮೇಳದಲ್ಲಿ ಮೌನಿ ಅಮವಾಸ್ಯೆಯಂದು ಪುಣ್ಯಸ್ನಾನಕ್ಕೆ ಯಾತ್ರಾರ್ಥಿಗಳು ಹೋಗುತ್ತಿದ್ದ ಸಂದರ್ಭದಲ್ಲಿ ಕಾಲ್ತುಳಿತದ ದುರಂತವು ಸಂಭವಿಸಿತ್ತು. ದುರಾದೃಷ್ಟಕರವಾಗಿ ಇದರಲ್ಲಿ ಬೆಳಗಾವಿ ಮೂಲದ ನಾಲ್ವರು ಮೃತಪಟ್ಟಿದ್ದರು. ಮೃತರಿಗೆ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಒಟ್ಟು ಒಂದು ಕೋಟಿ ರೂಪಾಯಿ ಪರಿಹಾರ ಧನವನ್ನು ಘೋಷಣೆ ಮಾಡಿದೆ.

j3tvkannada.in
ಬೆಳಗಾವಿ ಮೂಲದ ನಾಲ್ವರು ಯಾತ್ರಾರ್ಥಿಗಳ ಕುಟುಂಬಸ್ಥರಿಗೆ ತಲಾ ಒಬ್ಬರಿಗೆ ರೂಪಾಯಿ 25 ಲಕ್ಷದಂತೆ ಒಟ್ಟು 1 ಕೋಟಿ ಪರಿಹಾರ ವಿತರಣೆ ಮಾಡಲಾಗುವುದು ಎಂದು ತಿಳಿಸಿದೆ. ಬೆಳಗಾವಿಯ ತಾಯಿ ಮಗಳು ಜೋತಿ ಹತ್ತರವಾಠ ಮತ್ತು ಮೇಘಾ ಹತ್ತರವಾಠ, ಅರುಣ ಕೋಪರ್ಡೆ, ಮಹಾದೇವಿ ಬಾವನೂರ ಮುಂತಾದವರು ಕಾಲ್ತುಳಿತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಯು.ಪಿ ಸರ್ಕಾರ ನೀಡುವ ಹಣವು ನೇರವಾಗಿ ಬೆಳಗಾವಿ ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಗೆ ಶೀಘ್ರವೇ ಜಮೆ ಆಗಲಿದೆ ಎಂದು ಯು.ಪಿ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ಹಣ ತಮ್ಮ ಖಾತೆಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ರಿಂದ ಮೃತರ ಕುಟುಂಬಸ್ಥರಿಗೆ ಪರಿಹಾರ ಮೊತ್ತ ಜಮೆ ಆಗಲಿದೆ. ಕುಟುಂಬಸ್ಥರ ಬ್ಯಾಂಕ್ ಖಾತೆಗೆ ಆರ.ಟಿ.ಜಿ.ಎಸ್ ಮೂಲಕ ಪರಿಹಾರ ಮೊತ್ತವನ್ನು ಜಮೆ ಮಾಡುತ್ತೇವೆ ಎಂಬ ಮಾಹಿತಿ ಲಭ್ಯವಾಗಿದೆ.

j3tvkannada.in
ಜಿಲ್ಲಾಧಿಕಾರಿಗಳಿಗೆ ಬಂದ ಬೇಡಿಕೆಯನ್ನು ಆಧರಿಸಿ ಕರ್ನಾಟಕ ಸರ್ಕಾರವು ಪರಿಹಾರ ನೀಡುವಂತೆ ಡಿ.ಸಿ ಅವರಿಂದ ಸರ್ಕಾರಕ್ಕೆ ವರದಿ ರವಾನಿಸಿತ್ತು. ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಅಮೂಲ್ಯ ಜೀವಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಯು.ಪಿ ಸರ್ಕಾರ ಸ್ಪಂದಿಸಿದೆ.
ಪರಿಹಾರ ವಿತರಿಸುವ ಮೂಲಕ ತನ್ನ ಮಾನವೀಯ ಬದ್ಧತೆಯನ್ನು ಮೆರೆದಿದೆ. ಇದಕ್ಕಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕರ್ನಾಟಕ ಸರ್ಕಾರವು ಕೃತಜ್ಞತೆಗಳನ್ನು ಸಮರ್ಪಿಸಿದೆ. ರಾಜ್ಯ ಅಥವಾ ಹೊರಗಿನ ರಾಜ್ಯದವರು ಎನ್ನುವುದನ್ನು ಲೆಕ್ಕಿಸದೇ ಕುಂಭಮೇಳದಲ್ಲಿ ಭಾಗವಹಿಸಿದವರೆಲ್ಲರೂ ಈ ದೇಶದ ಸತ್ತಪ್ರಜೆಗಳು ಎಂದು ಪರಿಗಣಿಸಿ ತನ್ನ ಪರಿಹಾರವನ್ನು ಘೋಷಿಸಲಾಗಿದೆ.