
ತುಮಕೂರು: ಇತ್ತೀಚೆಗೆ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಅಂತ ಮರುನಾಮಕರಣ ಮಾಡಲಾಯಿತು. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಮನಗರಕ್ಕೆ ಬೆಂಗಳೂರು ದಕ್ಷಿಣ ಮರುನಾಮಕರಣ ಮಾಡಿದ್ದಾರೆ. ಈ ಬೆನ್ನಲ್ಲೇ ಗೃಹ ಸಚಿವ ಜಿ. ಪರಮೇಶ್ವರ್ ಅವರು ತುಮಕೂರಿಗೆ ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡಲು ಮುಂದಾಗಿದ್ದಾರೆ. ಆದರೆ, ತುಮಕೂರಿಗೆ ಬೆಂಗಳೂರು ಉತ್ತರ ಎಂಬ ಮರುನಾಮಕರಣಕ್ಕೆ ವಿರೋಧ ವ್ಯಕ್ತವಾಗಿದೆ.

j3tvkannada
ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಕಲ್ಪತರು ನಾಡು ತುಮಕೂರಿಗೆ ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡಬೇಕೆಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಗೃಹ ಸಚಿವರ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದು, ಇದು ರಿಯಲ್ ಎಸ್ಟೇಟ್ ಮಾಫಿಯಾ ಮಾಡುವ ಕೆಲಸ ಎಂದು ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಆರೋಪಿಸಿದ್ದಾರೆ.
ತುಮಕೂರಿಗೆ ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡಲು ನಾವು ಬಿಡುವುದಿಲ್ಲ ಎಂದು ಸುರೇಶ್ ಗೌಡ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು ಜನರನ್ನು ಯಾಮಾರಿಸುತಿದ್ದಾರೋ ಅಥವಾ ಮಕ್ಮಲ್ ಟೋಪಿ ಹಾಕುತಿದ್ದಾರೋ ಗೊತ್ತಿಲ್ಲ. ಬೆಂಗಳೂರು ಉತ್ತರ ಎಂದ ತಕ್ಷಣ ಅಭಿವೃದ್ಧಿಯಾಗಲ್ಲ. ಕೇವಲ ಹೆಸರು ಮಾತ್ರ ಬದಲಾಗುತ್ತದೆ ಅಷ್ಟೇ. ತುಮಕೂರಿಗೆ ಅದರದ್ದೇ ಆದ ಇತಿಹಾಸವಿದೆ. ತುಮಕೂರಿಗೆ ಬೆಂಗಳೂರು ಉತ್ತರ ಎಂದು ಮರುನಾಮಕರಣ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಭೂಮಿ ನೀಡದ ಕಾರಣ ಕೈಗಾರಿಕೆಗಳು ನೆರೆ ರಾಜ್ಯಗಳಿಗೆ ಹೋಗುತ್ತಿವೆ. ಈ ನಡುವೆ ಬೆಂಗಳೂರು ಉತ್ತರ ಅಂದ ತಕ್ಷಣ ಇಲ್ಲಿ ಬಂದು ಹೂಡಿಕೆ ಮಾಡಲು ಜನರು ಮೂರ್ಖರಲ್ಲ. ಜೊತೆಗೆ ತುಮಕೂರಿನ ಕೆಲ ಹೊರಾಟಗಾರರು ಸಹ ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಬ್ರ್ಯಾಂಡ್ ಬೆಂಗಳೂರಿಗೆ ತುಮಕೂರು ಸೇರಿಸುವ ಬದಲು ತುಮಕೂರನ್ನೇ ಬ್ರ್ಯಾಂಡ್ ಮಾಡಿ. ಯಾವುದೇ ಕಾರಣಕ್ಕೂ ಈ ನಿರ್ಧಾರ ಒಪ್ಪುವಂತದಲ್ಲ. ಇದಕ್ಕೆ ನಮ್ಮ ವಿರೋಧವಿದೆ ಎಂದರು. ಇನ್ನು ವಿದೇಶದಲ್ಲಿರುವವರಿಗೆ ತುಮಕೂರು ಬದಲಿಗೆ ಬೆಂಗಳೂರು ಉತ್ತರ ಎಂದರೆ ತುಂಬಾ ವ್ಯತ್ಯಾಸವಿರುತ್ತೆ ಎಂದು ಗೃಹ ಸಚಿವರ ಹೇಳಿಕೆಗೆ ತಿರುಗೇಟು ಕೊಟ್ಟ ಶಾಸಕ ಸುರೇಶ್, ಇಡೀ ಕರ್ನಾಟಕವನ್ನೇ ಬೆಂಗಳೂರು ಎಂದು ನಾಮಕರಣ ಮಾಡಿ ಘೋಷಿಸಿ. ಕರ್ನಾಟಕದ ಹೆಸರನ್ನೇ ಬದಲಾಯಿಸಿ ಬಿಟ್ಟರೆ ಎಲ್ಲವೂ ಬೆಂಗಳೂರೆಂದೇ ಆಗಿ ಬಿಡತ್ತೆ ಎಂದು ಕೌಂಟರ್ ಕೊಟ್ಟರು.