
ಬೀದರ್ : ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬಾಲ ಭಿಕ್ಷಾಟನೆಯಲ್ಲಿ ಮಕ್ಕಳು ತೊಡಗಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸಲು ಸರಕಾರ ಸಾಕಷ್ಟು ಯೋಜನೆ ಜಾರಿಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಬಾಲಭಿಕ್ಷಾಟನೆ ನಡೆಯುತ್ತಲೇ ಇದೆ. ಕಾಪಿ, ಪೆನ್ನು ಹಿಡಿಯುವ ಕೈಗಳಿಗೆ ಬರೆ ಬೀಳುತ್ತಿದೆ. ಕಲಬುರಗಿ ಸೇರಿ ಒಟ್ಟು 7 ಜಿಲ್ಲೆಯಲ್ಲಿ ಮಕ್ಕಳ ಭಿಕ್ಷಾಟನೆ ಸಂಖ್ಯೆ ಹೆಚ್ಚಿದೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಬಾಲ ಭಿಕ್ಷಾಟನೆ ಹೆಚ್ಚಾಗುತ್ತಿದ್ದು ಕಳೆದ ನಾಲ್ಕು ವರ್ಷಗಳಲ್ಲಿ 340 ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಸರ್ಕಾರವು ಕಾನೂನುಗಳನ್ನು ಜಾರಿಗೆ ತಂದರೂ, ಅಧಿಕಾರಿಗಳ ವೈಫಲ್ಯದಿಂದಾಗಿ ಇದು ನಿಯಂತ್ರಣಕ್ಕೆ ಬರುತ್ತಿಲ್ಲ. ಬಾಲ ಭಿಕ್ಷಾಟನೆ ನಿರ್ಮೂಲನೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಪರಿಣಾಮಕಾರಿ ಕೆಲಸ ಮಾಡುತ್ತಿದೆ.

ಎರಡ್ಮೂರು ವರ್ಷದ ಮಗು, ಅಪ್ರಾಪ್ತ ಮತ್ತು ವಿಶೇಷಚೇತನ ಮಕ್ಕಳನ್ನು ಬಳಸಿ ಭಿಕ್ಷಾಟನೆಯಲ್ಲಿ ತೊಡಗಿಸಿದ್ದು, ಬಾಲಭಿಕ್ಷಾಟನೆ ನಿರ್ಮೂಲನೆಗಾಗಿ ಸರಕಾರ ಸಾಕಷ್ಟು ಕಾನೂನುಗಳು ಜಾರಿಗೆ ತಂದರೂ ಇನ್ನೂ ಮಕ್ಕಳನ್ನು ಭಿಕ್ಷಾಟನೆಗೆ ಬಳಸಲಾಗುತ್ತಿದೆ. ಮಕ್ಕಳ ಹಕ್ಕು ಉಲ್ಲಂಘಿಸುವ ಹಲವು ಘಟನೆಗಳು ನಡೆಯುತ್ತಿವೆ.
ರೈಲು ಮತ್ತು ಬಸ್ ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳಲ್ಲೂ ಮಕ್ಕಳು ಭಿಕ್ಷಾಟನೆ ನಡೆಸುತ್ತಿರುವುದು ವಿಪರ್ಯಾಸ. ಕಳೆದ ನಾಲ್ಕು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಬರೋಬರಿ 340 ಜನರು ಬಾಲ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಬಾಲ ಕಾರ್ಮಿಕ ಪದ್ಧತಿ, ಬಾಲ ಭಿಕ್ಷಾಟನೆ ನಿರ್ಮೂಲನೆ ಕಾನೂನು ಜಾರಿಯಲ್ಲಿದ್ದರೂ ಸಹ ಅವುಗಳನ್ನು ನಿಯಂತ್ರಿಸಲು ಸಂಬಂಧ ಪಟ್ಟವರು ಸತತ ಪ್ರಯತ್ನ ಮಾಡುತ್ತಿದ್ದಾರೆ. ಅಕ್ಷರ ಕಲಿಯಬೇಕಿದ್ದ ಮಕ್ಕಳು ಭಿಕ್ಷಾಟನೆ ಮಾಡಬೇಕಾದ ಸ್ಥಿತಿ ಬಂದೊದಗಿರುವುದು ಈ ಅಂಕಿ-ಅಂಶಗಳೇ ಸಾಕ್ಷಿಯಾಗಿದ್ದು, ಈ ಮಹತ್ವದ ಮಾಹಿತಿ ಸ್ವತಃ ರಾಜ್ಯ ಮಕ್ಕಳ ನಿರ್ದೇಶನಾಲಯ ನೀಡಿದೆ.
ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಹೋಟೆಲ್, ಸಿನಿಮಾ ಥೇಟರ್ ಹಾಗೂ ಶಾಪಿಂಗ್ ಮಾಲ್ ಸೇರಿ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಪುಟ್ಟ ಮಕ್ಕಳ ಹಿಡಿದು ಮಹಿಳೆಯರು ನಿತ್ಯ ಭಿಕ್ಷಾಟನೆ ನಡೆಸುತ್ತಿದ್ದಾರೆ. ಪ್ರಯಾಣಿಕರು ಸೇರಿ ಜನಸಾಮಾನ್ಯರಿಗೆ ಭಿಕ್ಷಾಟನೆ ಸಮಸ್ಯೆಯಾಗಿ ಕಾಡುತ್ತಿದೆ. ಅದರಲ್ಲೂ ಬಾಲ ಭಿಕ್ಷಾಟನೆಗೆ ಕಟ್ಟು ನಿಟ್ಟಿನ ನಿಷೇಧವಿದ್ದರೂ ಇದನ್ನು ಅನುಷ್ಠಾನಕ್ಕೆ ತರಲು ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ.

ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ಹೆಚ್ಚುತ್ತಿರುವ ಕೊನೆ ಯಾವಾಗ ಎಂಬುದು ಪ್ರಶ್ನೆಯಾಗಿ ಉಳಿದಿದೆ. 2021-22 ರಿಂದ 2024-25 ರವರೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿಒಟ್ಟು 340 ಮಂದಿ ಬಾಲ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 123, ಬಳ್ಳಾರಿಯಲ್ಲಿ 77, ಕೊಪ್ಪಳದಲ್ಲಿ 48, ಬೀದರ್ನಲ್ಲಿ 47, ರಾಯಚೂರಿನಲ್ಲಿ 39, ಯಾದಗಿರಿಯಲ್ಲಿ 5 ಹಾಗೂ ವಿಜಯನಗರದಲ್ಲಿ ಬರೀ ಒಂದು ಮಗು ಮಾತ್ರ ಭಿಕ್ಷೆ ಕಾಯಕದಲ್ಲಿ ತೊಡಗಿದ್ದು, ಇದನ್ನು ನಿರ್ಮೂಲನೆಗೆ ಜಿಲ್ಲಾಮಕ್ಕಳ ರಕ್ಷಣಾ ಘಟಕ ಪರಿಣಾಮಕಾರಿ ಕೆಲಸ ಮಾಡುತ್ತಿದೆ. ಅಧಿಕಾರಿಗಳು ಬಾಲಭಿಕ್ಷುಕರನ್ನು ಪತ್ತೆ ಹೆಚ್ಚಿ ಅವರಿಗೆ ಶಿಕ್ಷಣ ಮತ್ತು ಊಟ ಹಾಗೂ ವಸತಿ ವ್ಯವಸ್ಥೆ ಮಾಡುತ್ತಿದೆ. ಆದರೆ ಕೆಲವರು ಇದನ್ನು ದಂಧೆಯನ್ನಾಗಿ ಮಾಡಿಕೊಂಡಿದ್ದರಿಂದ ಇದನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ.