
ದಕ್ಷಿಣ ಕನ್ನಡ(ಕೊಣಾಜೆ): ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಕೊಪ್ಪಲ ಕೋಡಿಯಲ್ಲಿ ಇತ್ತೀಚೆಗೆ ಗುಡ್ಡ ಕುಸಿದು ಸಂಭವಿಸಿದ ದುರಂತಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಆರೋಪಿಸಿ ಸಂತ್ರಸ್ತ ಕುಟುಂಬಸ್ಥರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕೆಲವು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರೂ ಇನ್ನೂ ಎಫ್.ಐ.ಆರ್ ದಾಖಲಾಗಿಲ್ಲ. ವಿದೇಶ ಪ್ರವಾಸದಿಂದ ಬಂದು ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಸಂತೈಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಸಂತ್ರಸ್ತ ಕುಟುಂಬಸ್ಥರ ಮನವಿಯಂತೆ ಕೊಣಾಜೆ ಠಾಣಾಧಿಕಾರಿಗೆ ಕರೆ ಮಾಡಿ ಎಫ್.ಐ.ಆರ್ ದಾಖಲೆ ಕುರಿತು ಪ್ರಶ್ನಿಸಿದ್ದರು. ಮೇಲಾಧಿಕಾರಿಗಳು ಹೇಳಿದ ಬಳಿಕ ಎಫ್.ಐ.ಆರ್ ದಾಖಲಿಸುವುದಾಗಿ ಕೊಣಾಜೆ ಠಾಣೆ ಅಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದ್ದರು.

j3tvkannada
ಗುಡ್ಡ ಕುಸಿದು ಬಿದ್ದ ಪರಿಣಾಮ ಅಜ್ಜಿ ಹಾಗೂ ಅವರ ಇಬ್ಬರು ಮೊಮ್ಮಕ್ಕಳು ಮೃತಪಟ್ಟಿದ್ದರು. ಮಕ್ಕಳ ತಾಯಿ ಅಶ್ವಿನಿ ಅವರ ಎರಡು ಕಾಲುಗಳು ಮತ್ತು ಅವರ ಮಾವ ಕಾಂತಪ್ಪ ಪೂಜಾರಿ ಅವರ ಒಂದು ಕಾಲನ್ನು ವೈದ್ಯರು ಕತ್ತರಿಸಿದ್ದು, ಇಬ್ಬರು ಶಾಶ್ವತ ಅಂಗವೈಕಲ್ಯತೆಗೆ ಒಳಗಾಗಿದ್ದಾರೆ. ಮನೆಯ ಹಿಂದೆ ನಡೆಯುತ್ತಿದ್ದ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಯಾವುದೇ ಸುರಕ್ಷತ ಕ್ರಮಗಳಿಲ್ಲದೆ ಗುಡ್ಡವನ್ನು ಕಡಿಯಲಾಗಿತ್ತು. ಇದೇ ಕಾರಣದಿಂದ ಗುಡ್ಡ ಕುಸಿದು ಬಿದ್ದು ದುರಂತ ನಡೆದಿದೆ. ಕುಟುಂಬದ ಮೂವರು ಸಾವಿಗೀಡಾಗಿದ್ದು ಇಬ್ಬರು ಶಾಶ್ವತ ಅಂಗವೈಕಲ್ಯತೆಗೆ ಒಳಗಾಗಿ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ದೂರು ನೀಡಿದ್ದರು.
ಗಾಯಾಳು ಅಶ್ವಿನಿ ಅವರ ತಮ್ಮ ತೇಜು ಕುಮಾರ್ ಅವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವ ಕೃತ್ಯ) ಮತ್ತು 106 (ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುವ ಕೃತ್ಯ) ಅಡಿಯಲ್ಲಿಎಫ್.ಐ.ಆರ್ ದಾಖಲಿಸುವಂತೆ ದೂರು ನೀಡಿದ್ದಾರೆ. ಆದರೆ ಸುಪ್ರೀಂ ಕೋರ್ಟ್ನ ಆದೇಶದಂತೆ ದೂರು ಸ್ವೀಕರಿಸಿದ ತಕ್ಷಣ ಎಫ್ಐಆರ್ ದಾಖಲಿಸಬೇಕಾದರೂ, ಪೊಲೀಸರು ಇಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲಎಂದು ತೇಜು ಕುಮಾರ್ ಆರೋಪಿಸಿದ್ದಾರೆ. ಸರಕಾರ ಮತ್ತು ಜಿಲ್ಲಾಡಳಿತ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಕುಟುಂಬದ ಆಶ್ರಯಕ್ಕೆ ಶಾಶ್ವತ ಮನೆ ನಿರ್ಮಿಸಿ ಕೊಡಬೇಕು, ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರಿಗೆ ಪುನರ್ವಸತಿ ಕಲ್ಪಿಸುವಂತೆ ಮನೆ ಮಾಲೀಕ ಕಾಂತಪ್ಪ ಪೂಜಾರಿ ಕುಟುಂಬ ಒತ್ತಾಯಿಸಿದೆ.

j3tvkannada
ಕೊಣಾಜೆ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸದ ಬಗ್ಗೆ ಕುಟುಂಬಸ್ಥರು ಸ್ಪೀಕರ್ ಯು.ಟಿ.ಖಾದರ್ ಅವರಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬುಧವಾರ ದುರಂತದಲ್ಲಿ ಮೃತಪಟ್ಟವರ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಯು.ಟಿ.ಖಾದರ್ ಅವರು ಭಾಗವಹಿಸಿ ಶ್ರದ್ದಾಂಜಲಿ ಸಲ್ಲಿಸಿ ಸಂತಾಪದ ಮಾತುಗಳನ್ನಾಡುತ್ತಿದ್ದರು. ಈ ಸಂದರ್ಭ ದುರಂತಕ್ಕೆ ಕಾರಣಕರ್ತರಾಗಿರುವ ಅಕಾರಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ದೂರು ನೀಡಿದರೂ ಕೊಣಾಜೆ ಠಾಣೆ ಪೊಲೀಸ್ ಅಕಾರಿಗಳು ಎಫ್.ಐ.ಆರ್ ದಾಖಲಿಸುತ್ತಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಠಾಣೆಗೆ ಕರೆಮಾಡಿ ಎಫ್.ಐ.ಆರ್ ದಾಖಲಿಸುವಂತೆ ಸಂಬಧ ಅಧಿಕಾರಿಗೆ ಸ್ಪೀಕರ್ ಸೂಚನೆ ನೀಡಿದರು.
ದುರಂತ ನಡೆದು ಎರಡು ವಾರ ಕಳೆದರೂ ಎಫ್.ಐ.ಆರ್ ದಾಖಲಿಸದಿರುವುದೇ ದುರಂತ. ಈ ರೀತಿಯಾದರೆ ಜನರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆ ನಂಬಿಕೆ ಬರುವುದಾದರೂ ಹೇಗೆ ಎಂದಿದ್ದಾರೆ ರಮೇಶ್ ಬೆದ್ರೊಳಿಕೆ. ಬಿಜೆಪಿ ಮಂಡಲ ಕಾರ್ಯದರ್ಶಿ ಮೃತರ ಸದ್ಗತಿಗಾಗಿ ಬುಧವಾರ ಉತ್ತರಕ್ರಿಯೆ ಕಾರ್ಯಕ್ರಮ ನಡೆದಿದೆ. ದುರಂತ ಘಟನೆ ಮನಸ್ಸಿನಿಂದ ಮಾಸದಂತಾಗಿದೆ. ತಂದೆ ಹಾಗೂ ಪತ್ನಿ ಶಾಶ್ವತ ಅಂಗವೈಕ್ಯಕ್ಕೆ ಒಳಗಾಗಿದ್ದು ಐ.ಸಿ.ಯು ನಲ್ಲಿ ಚಿಕಿತ್ಸೆ ಮುಂದುವರಿದಿದೆ. ದೂರ ಹೋಗಿ ಬದುಕು ಕಟ್ಟಿಕೊಳ್ಳೋಣ ಅಂದರೂ ಬದುಕಲು ದಾರಿ ಇಲ್ಲದಾಗಿದೆ ಎಂದಿದ್ದಾರೆ ಸೀತಾರಾಮ ಮೃತ ಮಕ್ಕಳ ತಂದೆ.