
ವಿಜಯಪುರ: ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ ಮಾಹಿತಿ ನೀಡಲು ವಿಜ್ಞಾನಿಗಳೇ ರೈತರ ಮನೆಯ ಬಾಗಿಲಿಗೆ ಬರುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ. ಎಲ್. ಪಾಟೀಲ, ಹೇಳಿದರು.

j3tvkannada.in
ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ತೋಟಗಾರಿಕೆ ಮತ್ತು ಸಂಬಂಧಿತ ಇಲಾಖೆಗಳು ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಬಾದಾಮಿ ತಾಲೂಕಿನ ಖಾನಾಪುರ ಎಸ್. ಕೆ. ಗ್ರಾಮದಲ್ಲಿ ಆಯೋಜಿಸಲಾದ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ ಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಲ ಮುಂಗಾರು ಹಂಗಾಮು ಉತ್ತಮವಾಗಿ ಆರಂಭವಾಗಿದ್ದು, ರೈತ ಬಾಂಧವರು ಅಗತ್ಯ ಪರಿಕರಗಳನ್ನು ಸಿದ್ದ ಮಾಡಿಕೊಳ್ಳಬೇಕು. ವಿಜ್ಞಾನಿಗಳ ಸಲಹೆ ಪಡೆದು ಬೇಸಾಯ ಕೈಗೊಳ್ಳಬೇಕು, ತಮ್ಮ ಆಧಾಯ ದ್ವಿಗುಣಗೊಳಿಸಿಕೊಳ್ಳಬೇಕು, ಜಾನುವಾರು ಸಂಪತ್ತು ಹೆಚ್ಚಿಗೆ ಮಾಡಿಕೊಳ್ಳಬೇಕು ಮತ್ತು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ವಿಸ್ತರಣಾ ನಿರ್ದೇಶಕ ಡಾ. ಎಮ್. ವಿ. ಮಂಜುನಾಥ ಮಾತನಾಡಿ, ರೈತರು ಮಳೆಯ ನೀರನ್ನು ಕೃಷಿ ಹೊಂಡ, ಚೆಕ್ ಡ್ಯಾಂಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ಮಣ್ಣು ಮತ್ತು ನೀರು ಸಂರಕ್ಷಣೆಗೆ ಹೆಚ್ಚಿನ ಅದ್ಯತೆ ನೀಡಬೇಕೆಂದರು. ಪ್ರಾಧ್ಯಾಪಕ ಡಾ. ಸಿ. ಆರ್. ಪಾಟೀಲ, ಮಾತನಾಡಿ, ರೈತರು ಜೈವಿಕ ಗೊಬ್ಬರ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬೆಳೆಗಳಿಗೆ ತಪ್ಪದೇ ಬೀಜೋಪಚಾರ ಮಾಡಬೇಕೆಂದರು.
ಪ್ರಧಾನ ವಿಜ್ಞಾನಿ ಡಾ. ಬಿ.ಜಿ. ಶಿವಕುಮಾರ ಮಾತನಾಡಿ, ರೈತರು ಪಶು ಸಂಗೋಪನೆ ಮಾಡಬೇಕು, ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸಬೇಕು. ಧಾರವಾಡ ಮೇವು ಸಂಶೋಧನಾ ಸಂಸ್ಥೆಯಿಂದ ಹಲವಾರು ಮೇವಿನ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಅವುಗಳ ಸದುಪಯೋಗ ಪಡೆಯಬೇಕೆಂದರು. ಉಪ ಕೃಷಿ ನಿರ್ದೇಶಕ ಡಾ. ಎಲ್.ಆಯ್. ರೂಡಗಿಯವರು ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ, ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ತೋ.ವಿ.ವಿ. ಪ್ರಾಧ್ಯಾಪಕ ಡಾ. ಶಶಿಕುಮಾರ ಎಸ್., ವಿಜ್ಞಾನಿ ಡಾ. ಎನ್. ಎನ್. ರಾಜಗೋಪಾಲ ಅವರು ರೈತರನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಣುಕಾ ವಿ. ಹಿರಗಣ್ಣವರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿಜ್ಞಾನಿ ಡಾ. ಗುರುದತ್ತ ಎಮ್. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಿದ್ದಪ್ಪ ಬಿ. ಅಂಗಡಿ ನಿರೂಪಿಸಿದರು. ಡಾ. ಭವ್ಯಾ ಎಮ್. ಆರ್. ವಂದಿಸಿದರು. ವಿಜ್ಞಾನಿಗಳಾದ ಡಾ. ಕುಶಾಲ್, ಡಾ. ವೆಂಕಣ್ಣ ಬಳಗಾನೂರ, ಡಾ. ರಮಿತಾ. ಬಿ.ಇ., ಗ್ರಾಮ ಪಂಚಾಯತ್ ಸದಸ್ಯರಾದ ಲಲಿತಾ ಪೂಜಾರಿ, ಶೇಖಪ್ಪ ಪವಾಡಿನಾಯ್ಕರ್, ಲಕ್ಷ್ಮಣ ದಾದನಟ್ಟಿ ಸೇರಿದಂತೆ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಅಧಿಕಾರಿಗಳು, ಪ್ರಗತಿಪರ ರೈತರು, ರೈತ ಮಹಿಳೆಯರು, ಕೃಷಿ ಸಖಿಯರು ಭಾಗವಹಿಸಿದ್ದರು.