
ಬೀದರ್: ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತತ್ತರಿಸಿರುವ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಗಾಯದ ಮೇಲೆ ಬರೆ ಎಳೆಯುತ್ತಿವೆ. ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳು ಒಟ್ಟು 42.34 ಕೋಟಿ ರೂ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿವೆ. ಇದರಿಂದ ರೈತರು ಸಂಕ್ಟಕ್ಕೆ ಸಿಲುಕಿದ್ದು, ಹಣಕ್ಕಾಗಿ ಪ್ರತಿನಿತ್ಯ ಕಾರ್ಖಾನೆಗಳ ಸುತ್ತ ಅಲೆದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಕಳೆದ ಸಾಲಿನಲ್ಲಿ ಉತ್ತಮ ಮಳೆಯಿಂದ ಕಬ್ಬಿನ ಇಳುವರಿ ನಿರೀಕ್ಷಿತ ಪ್ರಮಾಣದಲ್ಲಿ ಬಂದಿದೆ. ನಿಗದಿತ ಅವಧಿಗೆ ಕಬ್ಬು ಕಟಾವು ಸಹ ಆಗಿದೆ. ಕಬ್ಬು ಬೆಳೆಯಲು ಲಕ್ಷಾಂತರ ರೂ. ಖರ್ಚು ಮಾಡಿರುವ ರೈತರಿಗೆ ಸಕ್ಕರೆ ಕಾರ್ಖಾನೆಗಳು ನಿಗದಿತ ವೇಳೆಯಲ್ಲಿ ಬಿಲ್ ಪಾವತಿಸಿದರೆ ನಷ್ಟ ಕಡಿಮೆಯಾಗುತ್ತಿತ್ತು.

j3tvkannada
ಜಿಲ್ಲೆಯಲ್ಲಿ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ, ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ, ಬೀದರ್ ಕಿಸಾನ ಸಕ್ಕರೆ ಕಾರ್ಖಾನೆ, ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆ ಹಾಗೂ ಭವಾನಿ ಸಕ್ಕರೆ ಕಾರ್ಖಾನೆಗಳಿವೆ. ಅಕ್ಟೋಬರ್ ನವೆಂಬರ್ನಲ್ಲಿ ಆರಂಭಗೊಂಡ ಕಬ್ಬು ನುರಿಸುವ ಕಾರ್ಯ ಮಾರ್ಚ್ ಅಂತ್ಯಕ್ಕೆ ಸಂಪೂರ್ಣ ಮುಗಿದಿದೆ. ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ 14 ದಿನದೊಳಗೆ ಬೆಳೆಗಾರರಿಗೆ ಬಿಲ್ ಪಾವತಿಸಬೇಕು. ಆದರೂ ಜಿಲ್ಲೆಯ ಎನ್ನೆಸ್ಸೆಸ್ಕೆ, ಬೀದರ್ ಕಿಸಾನ್ ಮತ್ತು ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆಗಳು ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಬ್ಬಿನ ಬಿಲ್ ಪಾವತಿಸಿಲ್ಲ. ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಮತ್ತ ಭವಾನಿ ಸಕ್ಕರೆ ಕಾರ್ಖಾನೆ ಸಂಪೂರ್ಣ ಬಿಲ್ ಪಾವತಿಸಿದೆ.
ಜಿಲ್ಲೆಯಲ್ಲಿ 5 ಸಕ್ಕರೆ ಕಾರ್ಖಾನೆಗಳಿದ್ದು, ಪ್ರಸಕ್ತ ಹಂಗಾಮಿನಲ್ಲಿ 2024-2025ರ ಮಾರ್ಚ್ ಅಂತ್ಯದೊಳಗೆ ಕಬ್ಬು ನುರಿಸಲಾಗಿದೆ. ಎಂಜಿಎಸ್ಸೆಸ್ಕೆ ಮತ್ತು ಭವಾನಿ ಸಕ್ಕರೆ ಕಾರ್ಖಾನೆಯು ಪ್ರತಿ ಟನ್ಗೆ 2,650 ರೂ. ಹಾಗೂ ಎನ್ನೆಸ್ಸೆಸ್ಕೆ, ಬೀದರ್ ಕಿಸಾನ ಮತ್ತು ಭಾಲ್ಕೇಶ್ವರ ಕಾರ್ಖಾನೆಗಳು ಬರೀ 2600 ರೂ ಟನ್ಗೆ ಪಾವತಿವೆ. ಆದರೆ ಟನ್ ಕಬ್ಬಿಗೆ 2700 ರೂ ನೀಡಬೇಕೆಂಬುದು ರೈತರ ಬೇಡಿಕೆಯಾಗಿದೆ. ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಯು 4.44 ಲಕ್ಷ ಮೆ.ಟನ್ ಕಬ್ಬು ನುರಿಸುವ ಮೂಲಕ ಮೊದಲನೇ ಸ್ಥಾನದಲ್ಲಿದೆ. ನಂತರದ ಸರತಿಯಲ್ಲಿ ಮಹಾತ್ಮಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಯು 3.97 ಲಕ್ಷ ಮೆ.ಟನ್, ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ 3.01 ಲಕ್ಷ ಮೆ.ಟನ್, ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆ 2.82 ಲಕ್ಷ ಮೆ.ಟನ್ ಹಾಗೂ ಭವಾನಿ ಸಕ್ಕರೆ ಕಾರ್ಖಾನೆಯು 1.70 ಲಕ್ಷ ಮೆ.ಟನ್ ಕಬ್ಬು ನುರಿಸಿದೆ.

j3tvkannada
ಕಬ್ಬು ನುರಿಸುವ ಹಂಗಾಮು ಆರಂಭವಾದ ದಿನದಿಂದ ಜನವರಿ ಅಂತ್ಯದೊಳಗೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ಬಹುತೇಕ ಬೆಳೆಗಾರರಿಗೆ ಬಿಲ್ ಅವರ ಖಾತೆಗೆ ಜಮೆ ಮಾಡಲಾಗಿದೆ. ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ಕಬ್ಬು ಬಿಲ್ ಬಾಕಿ ಉಳಿಸಿಕೊಂಡಿವೆ. ಕಬ್ಬಿನ ಬಿಲ್ ಹಣಕ್ಕಾಗಿ ರೈತರು ಕಾರ್ಖಾನೆಗಳಿಗೆ ಅಲೆದಾಡುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಪ್ರಮಾಣದಲ್ಲಿ ಬಿಲ್ ಬಾಕಿ ಇಟ್ಟುಕೊಂಡಿರುವುದರಿಂದ ಕಬ್ಬು ಬೆಳೆಗಾರರು ರೈತ ಸಂಘಟನೆಗಳ ನೇತೃತ್ವದಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ, ಸಂಸದ ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗದಿರುವುದು ವಿಪರ್ಯಾಸ. ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಒಟ್ಟು 42.34 ಕೋಟಿ ರೂ. ಕಬ್ಬಿನ ಬಿಲ್ ಬಾಕಿ ಇದೆ. ಬಾಕಿ ಉಳಿಸಿ ಕೊಂಡಿರುವ ಕಾರ್ಖಾನೆಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಬಿಲ್ ಬಾಕಿ ಉಳಿಸಿರುವ ಕಾರ್ಖಾನೆಗಳಿಗೆ ನೋಟಿಸ್ ನೀಡಿ ರೈತರ ಖಾತೆಗೆ ಹಣ ಜಮೆ ಮಾಡಿಸಬೇಕು ಎನ್ನುತ್ತಾರೆ ರೈತ ಸಂಘದ ಪ್ರಮುಖರು.
ಜಿಲ್ಲೆಯಲ್ಲಿ ಎಲ್ಲಿ ಎಷ್ಟು ಬಾಕಿ?
ಕಾರ್ಖಾನೆಗಳು ಬಾಕಿ (ಕೋಟಿ ರೂ.)
- ಬೀದರ್ ಕಿಸಾನ್: 03.45
- ಭಾಲ್ಕೇಶ್ವರ: 17.90
- ಎನ್ನೆಸ್ಸೆಸ್ಕೆ: 20.98
- ಒಟ್ಟು: 42.34
ಬೀದರ್ ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳಿಂದ ಒಟ್ಟು 42.34 ಕೋಟಿ ರೂ. ಕಬ್ಬಿನ ಬಿಲ್ ಬಾಕಿ ಉಳಿದಿದೆ. ಈಗಾಗಲೇ ಎಲ್ಲ ಕಾರ್ಖಾನೆಗಳ ಅಧ್ಯಕ್ಷ ಮತ್ತು ಮಾಲೀಕರಿಗೂ ಬಾಕಿ ಪಾವತಿಸಲು ಸೂಚನೆ ಮಾಡಲಾಗಿದೆ. ಎನ್ನೆಸ್ಸೆಸ್ಕೆ ಕಾರ್ಖಾನೆ ಉತ್ಪಾದಿಸಿದ ಸಕ್ಕರೆ ಜಪ್ತಿ ಮಾಡಿಕೊಂಡಿದ್ದು, ಅದನ್ನು ಶೀಘ್ರವೇ ಮಾರಾಟ ಮಾಡಿ ಜೂನ್ ಅಂತ್ಯದೊಳಗೆ ರೈತರ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ ಜಿಲ್ಲಾಧಿಕಾರಿ ಬೀದರ್ ಶಿಲ್ಪಾ ಶರ್ಮಾ. ಜಿಲ್ಲೆಯ ಐದು ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿವೆ. ಇದರಲ್ಲಿ ಎಂಜಿಎಸ್ಸೆಸ್ಕೆ ಮತ್ತು ಭವಾನಿ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ಎಲ್ಲ ರೈತರ ಕಬ್ಬಿನ ಬಿಲ್ ಪಾವತಿಸಿವೆ. ಉಳಿದ ಮೂರು ಕಾರ್ಖಾನೆಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ಶೀಘ್ರ ಬಾಕಿ ಬಿಲ್ ಪಾವತಿಸಲು ತಿಳಿಸಲಾಗಿದೆ ಎಂದಿದ್ದಾರೆ ಪ್ರವೀಣ ಉಪನಿರ್ದೇಶಕರು, ಆಹಾರ ಮತ್ತು ಸರಬರಾಜು ಇಲಾಖೆ ಬೀದರ್. ಜಿಲ್ಲೆಯ ಕಬ್ಬು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಕೂಡಲೇ ಕಬ್ಬಿನ ಬಾಕಿ ಬಿಲ್ ಹಣ ರೈತರ ಖಾತೆಗೆ ಜಮೆ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕ ಎಂದಿದ್ದಾರೆ ಮಲ್ಲಿಕಾರ್ಜುನ ಸ್ವಾಮಿ ಜಿಲ್ಲಾಧ್ಯಕ್ಷರು.