
ಬಾಗಲಕೋಟೆ: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯರಾದ ತಳವಾರು ಸಾಬಣ್ಣ, ಪಿ.ಹೆಚ್.ಪೂಜಾರ್ ಅವರು ಮಾತಾಡಿ, ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾಲಯವನ್ನು ಮುಚ್ಚುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಬಾಗಲಕೋಟೆ ತೋಟಗಾರಿಕೆ ವಿವಿ ಮುಚ್ಚಬಾರದು. ರಾಜ್ಯದ ಅತಿ ದೊಡ್ಡ ತೋಟಗಾರಿಕೆ ವಿಶ್ವ ವಿದ್ಯಾಲಯ ಇದಾಗಿದೆ. 18 ವರ್ಷಗಳಿಂದ ವಿ.ವಿ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದೆ.

ಬಾಗಲಕೋಟೆ ವಿ.ವಿಯಲ್ಲಿ ಈಗ ಇರುವ ತೋಟಗಾರಿಕೆ ಕಾಲೇಜುಗಳನ್ನು ಮಂಡ್ಯ ವಿ.ವಿಗೆ ಸೇರ್ಪಡೆ ಮಾಡಲಾಗುತ್ತಿದೆ. ಸರ್ಕಾರದ ಈ ವ್ಯವಸ್ಥೆ ಸರಿಯಲ್ಲ. ಬಾಗಲಕೋಟೆ ತೋಟಗಾರಿಕೆ ವಿ.ವಿ ಕಾಲೇಜುಗಳನ್ನ ಬೇರೆ ವಿ.ವಿಗೆ ಹಂಚಿಕೆ ಮಾಡಬಾರದು. ತೋಟಗಾರಿಕೆ ವಿ.ವಿಯನ್ನು ವಿಭಾಗ ಮಾಡುವುದು ರೈತರಿಗೆ ಬರೆಯುವ ಮರಣ ಶಾಸನ ಆಗಿದೆ. ತೋಟಗಾರಿಕೆ ವಿ.ವಿ ಕಾಲೇಜನ್ನು ಮಂಡ್ಯ ವಿ.ವಿಗೆ ಸೇರ್ಪಡೆ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದು ಖಾರವಾಗಿ ಹೇಳಿದ್ದಾರೆ.
ಇದಕ್ಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉತ್ತರಿಸಿ, ಮಂಡ್ಯದಲ್ಲಿ ಜನ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು ವಿ.ವಿ ಪ್ರಾರಂಭ ಮಾಡಲಾಗುತ್ತಿದೆ. ಬಾಗಲಕೋಟೆ ದೂರ ಆಗುತ್ತದೆ, ಮಂಡ್ಯದಲ್ಲಿ ವಿ.ವಿ ಮಾಡಿ ಎಂದು ಸಿ.ಎಂಗೆ ಮನವಿ ಮಾಡಿದ್ದರು. ಅದರಂತೆ ಬಾಗಲಕೋಟೆ ವಿ.ವಿಯ ಕೆಲವು ಕಾಲೇಜುಗಳನ್ನ ಮಂಡ್ಯ ವಿ.ವಿಗೆ ಸೇರ್ಪಡೆ ಮಾಡುವ ತೀರ್ಮಾನ ಮಾಡಿ, ಕ್ಯಾಬಿನೆಟ್ನಲ್ಲಿ ಒಪ್ಪಿಗೆ ಕೊಡಲಾಗಿದೆ ಎಂದು ಹೇಳಿದರು.
ಸಚಿವರ ಈ ಮಾತಿಗೆ ಬಿಜೆಪಿ ಸದಸ್ಯರು ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸಿದರು. ತೋಟಗಾರಿಕೆ ವಿಶ್ವವಿದ್ಯಾಲಯ ಕಾಲೇಜುಗಳನ್ನ ಮಂಡ್ಯ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಹಂಚಿಕೆ ಮಾಡಬಾರದು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದು ಸರ್ಕಾರಕ್ಕೆ ಆಗ್ರಹಿಸಿದರು.