
ಮೈಸೂರು : ಪರಿಹಾರ ಮೊತ್ತ 25 ಲಕ್ಷ ಅಲ್ಲ, ಇಡೀ ಬಜೆಟ್ ಅನ್ನು ಪರಿಹಾರವಾಗಿ ಕೊಟ್ಟರೂ ಹೋಗಿರುವ ಜೀವ ವಾಪಸ್ ಬರುತ್ತಾ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

j3tvkannada
ಚಿನ್ನಸ್ವಾಮಿ ಕಾಲ್ತುಳಿತದ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡೀ ಘಟನೆಯಿಂದ ಬೆಂಗಳೂರಿಗೆ ಅತ್ಯಂತ ಕೆಟ್ಟ ಹೆಸರು ಬಂದಿದೆ. ಸಿ.ಎಂ ಪಟಲಾಂ ಮಾಡಿದ ಎಡವಟ್ಟಿನಿಂದ ಇಷ್ಟೆಲ್ಲಾ ಘಟನೆಗಳು ನಡೆದಿವೆ. ಸಿದ್ದರಾಮಯ್ಯ ಅವರಿಂದ ನಾವು ಇಂತಹ ಆಡಳಿತ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ನಿಮ್ಮ ಒಳಜಗಳ, ನಿಮ್ಮ ಒಳ ಒಪ್ಪಂದಗಳು, ನಿಮ್ಮ ನಡುವಿನ ಗೊಂದಲಗಳಿಂದ ಅಮಾಯಕರ ಜೀವ ಹೋಗಿದೆ. ಇದಕ್ಕೆ ಯಾರು ಹೊಣೆ ಮೊದಲು ಹೇಳಿ. ಸಿದ್ದರಾಮಯ್ಯನವರೇ ಇದಕ್ಕೆ ಹೊಣೆ ಅಲ್ವಾ ಎಂದು ವಾಗ್ದಾಳಿ ನಡೆಸಿದರು.
ಕಾಲ್ತುಳಿತ ಘಟನೆಗೆ ಡಾ.ರಾಜ್ಕುಮಾರ್ ಅವರ ಸಾವಿನ ಘಟನೆಯನ್ನ ಹೇಗೆ ಹೋಲಿಕೆ ಮಾಡುತ್ತೀರಾ. ರಾಜ್ಕುಮಾರ್ ಅವರ ಸಾವಿನ ಸಂಧರ್ಭವೇ ಬೇರೆ, ಅವತ್ತಿನ ಪರಿಸ್ಥಿತಿಯೇ ಬೇರೆ ಇವತ್ತಿನ ಪರಿಸ್ಥಿತಿಯೇ ಬೇರೆ. ನೀವು ಈಗ ಮಾಡಿರುವುದು ಪಾಪದ ಕೆಲಸ. ಮೊದಲು ಅದನ್ನು ನೀವು ಒಪ್ಪಿಕೊಳ್ಳಬೇಕು. ಕುರ್ಚಿಗೆ ಅಂಟಿಕೊಂಡು ಸಿದ್ದರಾಮಯ್ಯ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಕೊಟ್ಟಿರುವ ಫ್ರೀ ನೆಸ್ ಬೇರೆ ರಾಜ್ಯದ ಯಾವ ಸಿ.ಎಂಗೂ ಕೊಟ್ಟಿಲ್ಲ. ಆದರೂ ಸಿದ್ದರಾಮಯ್ಯ ಇಂತಹ ಕೆಟ್ಟ ಆಡಳಿತ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.
ಒಂದು ಅರ್ಧ ದಿನ ಪ್ರಧಾನ ಮಂತ್ರಿಗಳ ಕಚೇರಿಗೆ ಬನ್ನಿ, ಪ್ರಧಾನ ಮಂತ್ರಿಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನ ನೋಡಿ. ನೀವು ಕಾಂಗ್ರೆಸ್ ಮುಖ್ಯಮಂತ್ರಿಯಾಗಿರಬಹುದು, ಪ್ರಧಾನಿ ಆಡಳಿತವನ್ನು ಸ್ವಲ್ಪ ಗಮನಿಸಿ ನೋಡಿ. ರಾಜ್ಯ ಸರ್ಕಾರಕ್ಕೆ ಹಳಿಗಳೇ ಇಲ್ಲ. ಸಿ.ಎಂ-ಡಿ.ಸಿ.ಎಂ ನಡುವೆ ಹೊಂದಾಣಿಕೆಯೇ ಇಲ್ಲ. ಹಳಿ ಇಲ್ಲದ ಕಾರಣ ಎಲ್ಲೆಲ್ಲೋ ಮುಗ್ಗರಿಸುತ್ತಿದೆ, ಅಪಘಾತ ಮಾಡುತ್ತಿದೆ. ಇವರ ಈ ಅಧ್ವಾನದಲ್ಲಿ ಅಮಾಯಕರ ಜೀವ ಹೋಗುತ್ತಿದೆ. ಇದು ನನಗೆ ಬೇಸರ ತರಿಸಿದೆ. ಬೆಂಗಳೂರಿನ ಕಾಲ್ತುಳಿತಕ್ಕೆ ದೇಶದ ಬೇರೆ ಬೇರೆ ಭಾಗದ ಘಟನೆಯನ್ನ ನೀವು ಹೇಗೆ ಸಮರ್ಥನೆಗೆ ಬಳಸುತ್ತಿದ್ದೀರಿ ನೀವು ಮಾಡಿರುವುದು ಪಾಪದ ಕೆಲಸ. ಇದಕ್ಕೆ ಸಮರ್ಥನೆಗಳು ಬೇಡ. ಮೊದಲು ನೈತಿಕ ಹೊಣೆ ಹೊತ್ತುಕೊಳ್ಳಿ ಎಂದರು.
ನನಗೆ ಸಿದ್ದರಾಮಯ್ಯ ಮೇಲೆ ವೈಯಕ್ತಿಕವಾಗಿ ಗೌರವ ಇದೆ. ಆದರೆ ಆಡಳಿತ ಯಾವ ಪರಿಸ್ಥಿತಿಯಲ್ಲಿದೆ ನೋಡಿ. ಎರಡೂವರೆ ವರ್ಷದ ಸರ್ಕಾರದದಲ್ಲಿ ಈ ರಾಜ್ಯಕ್ಕೆ ಯಾವ ಮೈಲಿಗಲ್ಲು ಕೊಟ್ಟಿದ್ದೀರಾ ನೀವೇ ನೋಡಿಕೊಳ್ಳಿ. ನಿಮ್ಮ ಪಟಲಾಮ್ ಮಾಡಿದ ತಪ್ಪಿಗೆ ಅಧಿಕಾರಿಗಳನ್ನ ತಪ್ಪಿತಸ್ಥರನ್ನಾಗಿ ಮಾಡಿದ್ದು ಎಷ್ಟು ಸರಿ. ಆರ್.ಸಿ.ಬಿ ಅವರು ಗೆದ್ದರು. ಅದರ ಕ್ರೆಡಿಟ್ ಪಡೆಯಲು ನೀವು ಪೈಪೋಟಿ ನಡೆಸಲು ಹೋಗಿ ಈ ಅವಘಡ ಮಾಡಿಕೊಂಡಿದ್ದೀರಿ. ಬೇರೆ ಇನ್ಯಾರೋ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ ಎಂದು ನೀವೆ ಅಚಾತುರ್ಯ ಮಾಡಿ ಅಮಾಯಕರನ್ನು ಬಲಿ ಕೊಟ್ಟಿದ್ದೀರಿ ಎಂದು ಗುಡುಗಿದರು.