
ಶಿವಮೊಗ್ಗ: ಅರ್ಹ ದಾಖಲಾತಿ ಹೊಂದಿರುವ ಆಸ್ತಿಗೆ ಇ -ಸ್ವತ್ತು ದಾಖಲೆ ನೀಡುವ ಕುರಿತು ಗ್ರಾಮ ಪಂಚಾಯಿತಿ ವ್ಯಾಪ್ತಿ ಅಭಿಯಾನ ಹಮ್ಮಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಬಡತನ ಮುಕ್ತ ಸಮಾಜ ನಿರ್ಮಾಣ ಗುರಿಯಡಿ ಸರ್ಕಾರ ಇ-ಸ್ವತ್ತು ಅಭಿಯಾನದ ಮಹತ್ವ ನಿರ್ಧಾರ ಕೈಗೊಂಡಿದೆ. 2025-2026ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿದಂತೆ ಅತೀ ಶೀಘ್ರವಾಗಿ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿರುವ ಅರ್ಹ ದಾಖಲೆಯುಳ್ಳ ಆಸ್ತಿಗಳನ್ನು ಗುರುತಿಸಿ ಇ-ಸ್ವತ್ತು ದಾಖಲೆ ವಿತರಿಸುವುದು ಗ್ರಾಮ ಪಂಚಾಯಿತ್ ಆಡಳಿತದ ಜವಾಬ್ದಾರಿ. ಅಭಿಯಾನಕ್ಕೆ ತಗಲುವ ವೆಚ್ಚವನ್ನು ಗ್ರಾಮ ಪಂಚಾಯಿತ್ ಆಡಳಿತ ಭರಿಸಬೇಕು ಎಂದು ಸರಕಾರ ಆದೇಶಿಸಿದೆ.

j3tvkannada
ಆಸ್ತಿ ದಾಖಲೆ ಕ್ರಮಬದ್ಧಗೊಳಿಸುವ ಕ್ರಮದಿಂದ ಬಡತನ ಮುಕ್ತ ಸಮಾಜ ನಿರ್ಮಾಣ ಸಾಧ್ಯ. ಸುಸ್ಥಿರ ಆರ್ಥಿಕ ಬೆಳವಣಿಗೆಯಲ್ಲಿಆಸ್ತಿದಾಖಲೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಗೌರವಯುತ ದುಡಿಮೆ, ಅಭಿವೃದ್ಧಿಗೆ ಇ – ಸ್ವತ್ತು ದಾಖಲೆ ಪೂರಕವಾಗಿದೆ ಎಂಬ ಹಿನ್ನೆಲೆಯಲ್ಲಿ ಸರಕಾರ ಅಭಿಯಾನ ರೂಪಿಸಿದೆ. ಕ್ರಮಬದ್ಧ ಆಸ್ತಿಗೆ ನಮೂನೆ 09 ಹಾಗೂ 11(ಎ) ಮತ್ತು ಕ್ರಮ ಬದ್ಧವಲ್ಲದ ಆಸ್ತಿಗೆ ನಮೂನೆ -11(ಬಿ) ದಾಖಲೆಯನ್ನು ಇ-ಸ್ವತ್ತು ತಂತ್ರಾಂಶದಿಂದ ವಿತರಿಸಲು ಗ್ರಾಮ ಪಂಚಾಯಿತ್ ಆಡಳಿತಕ್ಕೆ ಷರತ್ತಿನ ನಿಯಮವನ್ನು ಗಮನಿಸಿ ಕ್ರಮ ಕೈಗೊಳ್ಳಲು ಸರಕಾರ ಅವಕಾಶ ನೀಡಿದೆ.

j3tvkannada
ಇ-ಸ್ವತ್ತು ಅಭಿಯಾನ ಹಮ್ಮಿಕೊಳ್ಳುವ ಸಂಬಂಧ 2025 ಮೇ 17ರಂದು ಸರಕಾರ ಆದೇಶ ಹೊರಡಿಸಿದೆ. ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಕ್ರಮ ಬದ್ಧವಲ್ಲದ ಆಸ್ತಿಗಳು ಈವರೆಗೂ ಸ್ಪಷ್ಟ ಸಂಖ್ಯೆಯಲ್ಲಿ ಗುರುತಾಗಿಲ್ಲ. ಸೂಕ್ತ ದಾಖಲಾತಿ ಇಲ್ಲದ ಆಸ್ತಿಗೆ ಇ-ಸ್ವತ್ತು ದಾಖಲೆ ವಿತರಣೆ ಮಾಡಿದ ಪ್ರಕರಣಗಳಿವೆ. ಕ್ರಮಬದ್ಧ ಇರುವ ಆಸ್ತಿಗೆ ಇ-ಸ್ವತ್ತು ದಾಖಲೆ ನೀಡುವಂತೆ ಕೋರಿಕೆ ಅರ್ಜಿ ಸಲ್ಲಿಸಿದರೂ ಕೆಲವು ಗ್ರಾಮ ಪಂಚಾಯಿತ್ ಆಡಳಿತದಲ್ಲಿ ಇ-ಸ್ವತ್ತು ದಾಖಲೆ ನೀಡಲು ನಿರಾಕರಿಸುತ್ತಿರುವ ದೂರು ಸಾಕಷ್ಟು ಇವೆ.
ವೈಯುಕ್ತಿಕ ಉದ್ದೇಶದಲ್ಲಿ ಸದಸ್ಯರಿಂದ ಆಕ್ಷೇಪಣೆ ಇದೆ ಎಂದು ಇ-ಸ್ವತ್ತು ದಾಖಲೆ ನೀಡಲು ಸತಾಯಿಸುತ್ತಿರುವುದರಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ಸರಕಾರ ಅಭಿಯಾನ ಕಾರ್ಯಕ್ರಮ ಹಮ್ಮಿ ಕೊಂಡಿರುವ ಹಿನ್ನೆಲೆಯಲ್ಲಿಇ-ಸ್ವತ್ತು ದಾಖಲೆ ಸುಲಭವಾಗಿ ಸಾರ್ವಜನಿಕರ ಕೈ ಸೇರುವ ಅವಕಾಶ ಹೆಚ್ಚಿದೆ. 2015 ರಲ್ಲಿ ಅಸ್ತಿತ್ವಕ್ಕೆ ಬಂದ ಇ-ಸ್ವತ್ತು ದಾಖಲೆ ನೀಡುವ ತಂತ್ರಾಂಶದಲ್ಲಿ ಸಾಕಷ್ಟು ಗೊಂದಲ ಆಗಿತ್ತು. ಇ-ಸ್ವತ್ತು ದಾಖಲೆ ಪಡೆಯಲು ಸಾರ್ವಜನಿಕರು ಭಗೀರಥ ಪ್ರಯತ್ನ ಮಾಡುತ್ತಿದ್ದರು. ಕೆಲವು ಗ್ರಾಮ ಪಂಚಾಯಿತ್ ಆಡಳಿತದಲ್ಲಿ ಇ-ಸ್ವತ್ತು ದಾಖಲೆ ಪಡೆಯಲು ಸಾರ್ವಜನಿಕರು ಸಾವಿರಾರು ರೂ. ಖರ್ಚು ಮಾಡಬೇಕಿದೆ.
ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ, ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಸೇರಿದಂತೆ ಅನೇಕರಿಗೆ ಹಣ ಕೊಡಬೇಕು ಎಂದು ಅರ್ಜಿದಾರರಿಂದ ಹಣ ವಸೂಲಿ ಮಾಡುತ್ತಿರುವ ಪ್ರಕರಣಕ್ಕೆ ಕೊನೆ ಇಲ್ಲದಂತಿದ್ದು ಸರಕಾರ ಇದನ್ನು ಗಂಭೀರವಾಗಿ ಗಮನಿಸಬೇಕಿದೆ. ಆಸ್ತಿಗೆ ಕ್ರಮಬದ್ಧ ದಾಖಲೆ ಒದಗಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಇ-ಸ್ವತ್ತು ಅಭಿಯಾನ ಕಾರ್ಯಕ್ರಮ ಸಾರ್ವಜನಿಕರಿಗೆ ಉಪಯುಕ್ತವಾಗಿದೆ. ದಾಖಲೆಗಳು ಕ್ರಮಬದ್ಧವಾಗಿದ್ದಾಗ ಆರ್ಥಿಕ ನೆರವು ಪಡೆದು ಪ್ರಗತಿ ಹೊಂದಲು ಕಾರಣವಾಗುತ್ತದೆ. ಭೂಮಿ ಹಕ್ಕು ಕ್ರಮ ಬದ್ಧವಾಗಿಸುವ ರಾಜ್ಯ ಸರಕಾರದ ಉದ್ದೇಶ ಶ್ಲಾಘನೀಯ ಎನ್ನುತ್ತಾರೆ ತೀರ್ಥಹಳ್ಳಿ ಗ್ರಾಮಾಂತರ ಕಾಂಗ್ರೆಸ್ ಘಟಕ ಅಧ್ಯಕ್ಷ ಮುಡುಬ ರಾಘವೇಂದ್ರ.