
ಚಾಮರಾಜನಗರ: ಖಾರ, ಸುವಾಸನೆ ಹಾಗೂ ವಿಶಿಷ್ಟ ರುಚಿಗೆ ಹೆಸರಾಗಿರುವ ಸಣ್ಣ ಈರುಳ್ಳಿ ಕೊಯ್ಲಿಗೆ ಬಂದಿದ್ದು, ಉತ್ತಮ ಇಳುವರಿ ಜೊತೆಗೆ ಉತ್ತಮ ಧಾರಣೆಯೂ ಸಿಗುತ್ತಿದೆ. ಇದರಿಂದ ರೈತರಲ್ಲಿ ಸಂತಸ ಮೂಡಿದೆ.

j3tvkannada
ಕಳೆದ ಬಾರಿ ನಷ್ಟ ಅನುಭವಿಸಿದ್ದರಿಂದ, ಪ್ರಸಕ್ತ ವರ್ಷ ಈರುಳ್ಳಿ ನಾಟಿಗೆ ಹೆಚ್ಚಿನ ರೈತರು ಹಿಂಜರಿದಿದ್ದರು. ಕೆಲವರಷ್ಟೇ ಬಿತ್ತನೆ ಮಾಡಿದ್ದರು. ಬಹುತೇಕ ಗುಣಮಟ್ಟದ ಈರುಳ್ಳಿ ಬೆಳೆದಿದ್ದು, ಕಟಾವು ಮಾಡಿದ ಈರುಳ್ಳಿ ತಾಲೂಕಿನ ಬಳಿಗೆ ಬಂದು ವ್ಯಾಪಾರಿಗಳು ಖರೀದಿಸುತ್ತಿದ್ದಾರೆ. ಬೆಲೆ ಸ್ಥಿರವಾಗಿ ಒಂದೆರಡು ತಿಂಗಳು ಮುಂದುವರಿದರೆ ಹೆಚ್ಚಿನ ಲಾಭ ದೊರೆಯಲಿದೆ.
ಬೇಸಿಗೆ ಹಂಗಾಮಿನಲ್ಲಿ ಒಂದೂವರೆ ಎಕರೆಯಲ್ಲಿ ಈರುಳ್ಳಿ ನಾಟಿ ಮಾಡಿದ್ದೆವು. ಆರಂಭದಲ್ಲಿ ಉಷ್ಣಾಂಶ ಹೆಚ್ಚಿತ್ತು. ಒಂದೆರಡು ಬಾರಿ ಮಳೆಯಾಗಿದ್ದೂ ಬೆಳೆಗೆ ಪೂರಕವಾಯಿತು. ಈಗ ಈರುಳ್ಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಹೊನ್ನೂರು ಹೊರವಲಯದ ಬೆಳೆಗಾರ ರವಿ.
1 ಎಕರೆಗೆ 50 ಸಾವಿರ ಖರ್ಚಾಗಿದ್ದು, 60 ಕ್ವಿಂಟಲ್ ಇಳುವರಿ ಸಿಗಬಹುದು. ಕ್ವಿಂಟಲ್ ಗೆ 5,000 ದರವಿರುವುದರಿಂದ ಉತ್ತಮ ಲಾಭ ದೊರೆಯುವ ನಿರೀಕ್ಷೆ ಇದೆ ಎಂದರು.
ಮುಂಗಾರು ಹಂಗಾಮಿನಲ್ಲೂ ಈರುಳ್ಳಿ ನಾಟಿ ಸಿದ್ಧತೆ ನಡೆಸಿದ್ದಾರೆ. ಕೆಲವು ವ್ಯಾಪಾರಿಗಳು ಗುಣಮಟ್ಟದ ನಾಟಿ ಈರುಳ್ಳಿ ಖರೀದಿಸಿ ಸಂಗ್ರಹಿಸುತ್ತಿದ್ದು, ಬಿತ್ತನೆ ಬೀಜವಾಗಿ ಮಾರುತ್ತಾರೆ. ಹಾಗಾಗಿ ಬೇಡಿಕೆ ಹೆಚ್ಚಿದೆ ಎಂದು ದಲ್ಲಾಳಿಗಳಾದ ಮಹದೇವ ಮತ್ತು ನಂಜುಂಡ ಹೇಳಿದರು.
ತಮಿಳುನಾಡು ಮತ್ತು ಕೇರಳದಲ್ಲಿ ಈರುಳ್ಳಿ ಆಮದು ಕಡಿಮೆಯಾಗಿರುವುದರಿಂದ ಧಾರಣೆ ಹೆಚ್ಚಾಗಿದೆ ಎಂದು ಬೆಳೆಗಾರ ಕಟ್ಟೆ ಗಣಿಗನೂರು ರಂಗಸ್ವಾಮಿ ಹೇಳಿದರು.