
ಬೆಳಗಾವಿ : ಅಂಧತ್ವ ಮುಕ್ತಿ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ನಡೆಸಿ ತಪಾಸಣೆಯಲ್ಲಿ ಒಂದೇ ವರ್ಷದಲ್ಲಿ ಬರೊಬ್ಬರಿ 6,340 ಮಕ್ಕಳಲ್ಲಿ ದೃಷ್ಟಿ ದೋಷ ಕಾಣಿಸಿಕೊಂಡಿದ್ದು ಆತಂಕ ಮೂಡಿಸಿದೆ. ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಂಧತ್ವ ಮುಕ್ತಿ ಕಾರ್ಯಕ್ರಮದಡಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ ಹಾಗೂ ಇತರ ಸಂಸ್ಥೆಗಳು ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿನ 1 ರಿಂದ 10ನೆ ತರಗತಿಯ ಮಕ್ಕಳಿಗೆ ಕಣ್ಣಿನ ಜತೆಗೆ ರಕ್ತಹೀನತೆ, ಅಪೌಷ್ಟಿಕತೆ ಸೇರಿ ವಿವಿಧ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದೆ.
2024- 25 ನೇ ಸಾಲಿನಲ್ಲಿ ಜಿಲ್ಲಾದ್ಯಂತ ವಿವಿಧ ಶಾಲೆಗಳಲ್ಲಿ 4,33,585 ಮಕ್ಕಳಿಗೆ ತಪಾಸಣೆ ನಡೆಸಿದಾಗ 6,340 ಮಕ್ಕಳಲ್ಲಿ ದೃಷ್ಟಿದೋಷ ಕಾಣಿಸಿಕೊಂಡಿದೆ. ಇಂಥ ಎಲ್ಲ ಮಕ್ಕಳಿಗೆ ಕನ್ನಡಕ ವಿತರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವಿಟಮಿನ್ ‘ಸಿ’ ಕೊರತೆಯಿಂದ ಬಹುತೇಕ ಮಕ್ಕಳಲ್ಲಿ ದೂರ ಹಾಗೂ ಸಮೀಪ ದೃಷ್ಟಿದೋಷ, ಇರುಳು ಕುರುಡು ಬಾಧಿಸುತ್ತಿದೆ. ಕೆಲ ಮಕ್ಕಳು ‘ರಿಫ್ರ್ಯಾಕ್ಟಿವ್ ಎರರ್’ನಿಂದ ಅಕ್ಷರಗಳನ್ನು ಗುರುತಿಸಲು ವಿಫಲರಾಗುತ್ತಿದ್ದು, ವಕ್ರವಾಗಿ ಅಕ್ಷರಗಳನ್ನು ಗುರುತಿಸುತ್ತಾರೆ. ಕೆಲ ಪೋಷಕರಿಗೆ ಆರ್ಥಿಕ ಕಾರಣಗಳಿಂದಾಗಿ ಸಕಾಲಕ್ಕೆ ಚಿಕಿತ್ಸೆ ಹಾಗೂ ಕನ್ನಡಕಗಳನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ 10 ನೇ ತರಗತಿವರೆಗಿನ ಎಲ್ಲ ಮಕ್ಕಳನ್ನು ತಪಾಸಣೆಗೆ ಒಳಪಡಿಸಿ ಕನ್ನಡಕ ನೀಡಲಾಗುತ್ತದೆ. ಇದರಿಂದ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಬಹುದು ಎನ್ನುತ್ತಾರೆ ಅಂಧತ್ವ ನಿವಾರಣಾ ಅಧಿಕಾರಿಗಳು.

ಗೋಕಾಕ ತಾಲೂಕಿನಲ್ಲಿ ತಪಾಸಣೆಗೊಳಗಾದ 73,681 ಮಕ್ಕಳ ಪೈಕಿ 2,354 ಮಕ್ಕಳಲ್ಲಿ, ಬೆಳಗಾವಿ ತಾಲೂಕಿನಲ್ಲಿ 1,204 ಮಕ್ಕಳಲ್ಲಿ ದೃಷ್ಟಿ ದೋಷ ಪತ್ತೆಯಾಗಿದೆ. ಉಭಯ ತಾಲೂಕುಗಳಲ್ಲಿ ಗರಿಷ್ಠ ಪ್ರಕರಣಗಳು ಕಂಡುಬಂದಿದ್ದು, ಅಥಣಿಯಲ್ಲಿ 96, ಹುಕ್ಕೇರಿಯಲ್ಲಿ 49 ಮಕ್ಕಳಲ್ಲಿ ಮಾತ್ರ ದೋಷ ಕಂಡುಬಂದಿದೆ. ಇತ್ತೀಚಿನ ನಾಲ್ಕೈದು ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದ್ದು, ಪಾಲಕರು ಜಾಗೃತಿ ವಹಿಸಬೇಕೆಂಬುದು ತಜ್ಞರ ಸಲಹೆ. ಕೋವಿಡ್ ಮತ್ತು ನಂತರದಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಿದೆ. ಅತಿಯಾದ ಮೊಬೈಲ್ ಫೋನ್ ಬಳಕೆ ಮತ್ತು ಟಿ.ವಿ ವೀಕ್ಷಣೆ ದೃಷ್ಟಿ ಸಮಸ್ಯೆಗೆ ಮುಖ್ಯ ಕಾರಣ. ಮೊಬೈಲ್ ಫೋನ್ ಪರದೆ ದೀರ್ಘಕಾಲ ನೋಡುವುದರಿಂದ ಕಣ್ಣುಗಳಿಗೆ ಗಂಭೀರ ಸಮಸ್ಯೆ ಉಂಟಾಗಬಹುದು. ಮಕ್ಕಳು ದಿನಕ್ಕೆ ಕನಿಷ್ಠ 8 ತಾಸು ನಿದ್ರಿಸಬೇಕು. ಹಣ್ಣು, ತರಕಾರಿ ಸೇವಿಸಬೇಕು. ದೃಷ್ಟಿ ಸಮಸ್ಯೆ ಇರುವ ಮಕ್ಕಳು ಕಡ್ಡಾಯ ಕನ್ನಡಕ ಬಳಸಬೇಕು.ಈ ನಿಟ್ಟಿನಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳ ದೃಷ್ಟಿ ದೋಷ ಇರುವವರ ಸಂಖ್ಯೆ:
ಗೋಕಾಕ: 73,681 2,354
ಬೆಳಗಾವಿ: 38,181 1,204
ರಾಮದುರ್ಗ: 33,110 571
ರಾಯಬಾಗ: 74,420 510
ಬೈಲಹೊಂಗಲ: 36,658 324
ಚಿಕ್ಕೋಡಿ: 37,259 324
ಸವದತ್ತಿ: 45,788 319.
ಜಿಲ್ಲೆಯಲ್ಲಿ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದಾಗ 6,340 ಮಕ್ಕಳಲ್ಲಿ ದೃಷ್ಟಿ ದೋಷ ಕಾಣಿಸಿದ್ದು, ಎಲ್ಲರಿಗೂ ಕನ್ನಡಕ ವಿತರಿಸಲಾಗಿದೆ. ಅತಿಯಾಗಿ ಮೊಬೈಲ್ ಬಳಕೆ ಮಾಡುವುದರಿಂದಲೂ ದೃಷ್ಟಿ ದೋಷ ಎದುರಾಗುತ್ತದೆ.