
ಬೀದರ್: ತುಷ್ಠೀಕರಣ, ಓಲೈಕೆ ರಾಜಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಿ.ಜೆ.ಪಿ ಶಾಸಕರು, ಮುಖಂಡರು, ಹಿಂದು ಹೋರಾಟಗಾರರ ವಿರುದ್ಧ ಕೇಸ್ ಹಾಕುವ, ಗಡಿಪಾರು ಮಾಡುವ ಕೆಲಸದಲ್ಲಿ ತೊಡಗಿದೆ. ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಇದು ರಾಜ್ಯದಲ್ಲಿ ಕಾಂಗ್ರೆಸ್ ಅವನತಿಗೆ ನಾಂದಿ ಹಾಡಲಿದೆ ಎಂದು ಬಿ.ಜೆ.ಪಿ ರಾಜ್ಯ ಕಾರ್ಯದರ್ಶಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಬಿ.ಜೆ.ಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹೇಳಿದ್ದಾರೆ.

j3tvkannada
ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಪ್ರತಿಪಕ್ಷ ಹಾಗೂ ಹಿಂದುತ್ವದ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕರಾವಳಿ ಭಾಗದ ಜಿಲ್ಲೆಗಳು ಸೇರಿದಂತೆ ವಿವಿಧೆಡೆ ಸರ್ಕಾರವೇ ಗೂಂಡಾ ವರ್ತನೆಗೆ ಇಳಿದಿದೆ. ಇದು ಈ ಸರ್ಕಾರದ ನಿಜ ಬಣ್ಣವನ್ನು ಬಯಲು ಮಾಡಿದೆ. ಸರ್ಕಾರ ಎಷ್ಟೇ ಅಧಿಕಾರ ದುರ್ಬಳಕೆ ಮಾಡಿಕೊಂಡರೂ ನಮ್ಮ ಜನಪರ, ಸಮಾಜಪರ, ರಾಷ್ಟ್ರಪರ ವಿಚಾರದ ಕೆಲಸ, ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಹಳಿ ತಪ್ಪಿದೆ. ಸಮಾಜ ಘಾತುಕರು, ದುಷ್ಟರು ಭಯವಿಲ್ಲದೆ ವಿವಿಧ ದುಷ್ಕ್ರತ್ಯಗಳಲ್ಲಿ ತೊಡಗಿದ್ದಾರೆ. ಕೊಲೆ, ದರೋಡೆ, ಅತ್ಯಾಚಾರ, ಸುಲಿಗೆ ಹೆಚ್ಚಾಗಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಕೇವಲ ತುಷ್ಠೀಕರಣ ರಾಜಕಾರಣದಲ್ಲಿ ತೊಡಗಿ ಒಬ್ಬರನ್ನು ಎತ್ತಿಕಟ್ಟುತ್ತ, ಮತ್ತೊಬ್ಬರನ್ನು ತುಳಿಯುತ್ತ ಸರ್ಕಾರವೇ ಸಮಾಜದಲ್ಲಿ ಕೋಮು ದ್ವೇಷದ ಭಾವನೆ ಬೆಳೆಸುತ್ತಿದೆ. ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ಸಾಥ್ ನೀಡುವ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರನ್ನು ಬೆಂಬಲಿಸುವ ಇವರ ಮನಸ್ಥಿತಿ ಏನು ಎಂಬುದು ತೋರಿಸಿ ಕೊಟ್ಟಿದೆ. ಈ ಭಂಡ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸುವ ದಿನ ಹತ್ತಿರವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ಜನ ವಿರೋಧಿ, ರೈತ ವಿರೋಧಿ, ಸಮಾಜ ವಿರೋಧಿ ಕ್ರಮದ ಬಗ್ಗೆ ಧ್ವನಿ ಎತ್ತುವವರ ಮೇಲೆ ಎಫ್.ಐ.ಆರ್ ಅಸ್ತ್ರವನ್ನು ಪ್ರಯೋಗಿಸಲಾಗುತ್ತಿದೆ. ಟಾರ್ಗೆಟ್ ಕಿಲ್ಲಿಂಗ್ ನಡೆಯುತ್ತಿವೆ. ವಿಧಾನ ಪರಿಷತ್ ಸಭಾಪತಿ ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ, ಹರೀಶ್ ಪೂಂಜಾ, ಪುತ್ತಿಲ ಸೇರಿ ವಿಪಕ್ಷ ನಾಯಕರ ಮೇಲೆ ಖಟ್ಲೆ ಹೂಡಲಾಗುತ್ತಿದೆ. ಹಿಂದು ಹೋರಾಟಗಾರರಿಗೆ ಗಡಿಪಾರು ಮಾಡಲಾಗುತ್ತಿದೆ. ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ತರಹ ಕೆಲಸ ಮಾಡುತ್ತಿದ್ದಾರೆ. ಇಷ್ಟಾದರೂ ಗೃಹ ಸಚಿವ ಡಾ. ಪರಮೇಶ್ವರ ಅವರು ಮೌನಕ್ಕೆ ಜಾರಿದ್ದಾರೆ. ಇಂಥ ನಿಷ್ಕ್ರಿಯ ಗೃಹ ಸಚಿವರನ್ನು ಕನ್ನಡ ನಾಡು ಹಿಂದೆಂದೂ ಕಂಡಿಲ್ಲ ಎಂದು ಕಿಡಿಕಾರಿದ್ದಾರೆ.