
ಸಿರುಗುಪ್ಪ : ತಾಲೂಕಿನ ಕುಡದರಹಾಳು ಮತ್ತು ಮಾಟುರ್ ಗ್ರಾಮದ ಬಳಿ ಇರುವ ನದಿಯಿಂದ ಅಕ್ರಮ ಮರಳು ದಂದೆ ಅವ್ಯಾವತವಾಗಿ ಮುಂದುವರೆದಿದ್ದು, ಇಡೀ ನದಿ ಬಟಾ ಬಯಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸದರಿ ಹಳ್ಳದಲ್ಲಿ ಕಿಲೋಮಿಟರ್ ಕಟ್ಟಲೇ ಮರಳನ್ನು ಬಗೆಯುವುದರಿಂದ ನದಿಯಲ್ಲಿ ಗುಂಡಿಗಳು ನಿರ್ಮಾಣಗೊಂಡಿವೆ. ಸಾಕಷ್ಟು ಪ್ರಮಾಣದಲ್ಲಿ ಮರಳು ಬಗೆಯುವುದರಿಂದ ಹಳ್ಳದಲ್ಲಿ ನೀರು ನಿಲ್ಲದೆ ಭಣಗುಡುತ್ತಿದೆ. ಸದಾ ನೀರು ಜಿನುಗುತ್ತಿದ್ದ ನದಿಯು ತಳಕಂಡಿದೆ. ಜನಜಾನುವಾರು ಪಶು, ಪಕ್ಷಿಗಳಿಗೆ, ನೀರಿನ ಆಸರೆ ಇಲ್ಲದಂತಾಗಿದೆ ಎಂದು ಜನ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮರಳು ಬಗೆಯುವುದಕ್ಕಾಗಿ ಬಹಳಷ್ಟು ಟ್ಯಾಕ್ಟರ್ ಗಳು ದಿನನಿತ್ಯ ರಾತ್ರೋರಾತ್ರಿ ನದಿಯಲ್ಲಿರುವ ಮರಳನ್ನು ಬಗೆದು ಸಾವಿರಾರು ರೂಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಟ್ಯಾಕ್ಟರ್ ಕರ್ಕಶ ಶಬ್ದದಿಂದ ನಿದ್ದೆ ಮಾಡಲು ಆಗುತ್ತಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.
ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರು ಪೋಲಿಸ್ ಇಲಾಖೆ ಮತ್ತು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಮೌನ ವಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.