
ಶಿವಮೊಗ್ಗ: ವಾಯುಭಾರ ಕುಸಿತದ ಪರಿಣಾಮ ಒಂದು ವಾರದಿಂದ ಸುರಿಯುತ್ತಿರುವ ಮಳೆಯು ವೈಶಾಖದಲ್ಲೇ ಆಷಾಢ ಮಾಸವನ್ನು ಸೃಷ್ಟಿಸಿದೆ. ಶಿವಮೊಗ್ಗ ಜಿಲ್ಲೆಯ ಜಲಾಶಯಗಳಿಗೆ ಒಳಹರಿವು ಹೆಚ್ಚಳವಾಗಿದ್ದು, ಗಾಜನೂರಿನ ತುಂಗಾ ಜಲಾಶಯ ಬಹುತೇಕ ಭರ್ತಿಯಾಗಿದೆ.

ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ಗಾಜನೂರು ಜಲಾಶಯ ತುಂಬುವ ಹಂತ ತಲುಪಿದ್ದು, ಶೀಘ್ರದಲ್ಲೇ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಆಷಾಢ ಮಾಸವೆಂದರೆ ಜೋರು ಮಳೆಯಾಗಿ ಇಳೆಯು ತಂಪುಗೊಂಡು ಥಂಡಿ ಗಾಳಿ ಬೀಸುವ ಸಮಯ. ಆಷಾಢ ಆಗಮನಕ್ಕೆ ಇನ್ನೂ ತಿಂಗಳು ಇರುವಾಗಲೆ ಮಲೆನಾಡಿನಲ್ಲಿಆಷಾಢದ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಮಲೆನಾಡು ಪ್ರದೇಶದಲ್ಲಿ ಎರಡು ದಿನಗಳಿಂದ ಜೋರು ಗಾಳಿಯೊಂದಿಗೆ ಬಿರುಸಿನ ಮಳೆ ಸುರಿಯುತ್ತಿದೆ. ಅರೆಮಲೆ ನಾಡಿನ ತಾಲೂಕುಗಳಲ್ಲಿ ದಟ್ಟ ಮೋಡ ಕವಿದು ಆಗಾಗ್ಗೆ ಸೋನೆ ಸುರಿಯುತ್ತಿದೆ.
ಸಾಮಾನ್ಯವಾಗಿ ಜಿಲ್ಲೆಯ ನದಿಗಳಿಗೆ ಜೂನ್ ಮಧ್ಯದಲ್ಲಿ ಹೊಸ ನೀರು ಬರುತ್ತದೆ. ಆದರೆ, ಈ ಬಾರಿ ನೈಋುತ್ಯ ಮಾನ್ಸೂನ್ ಆಗಮನದ ಮುನ್ನವೇ ಮಲೆನಾಡಿನ ಹಳ್ಳ ಮತ್ತು ನದಿಗಳಿಗೆ ಹೊಸ ನೀರು ಬಂದಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಮಂಗಳವಾರದಿಂದ ಒಳಹರಿವು ಆರಂಭವಾಗಿದೆ. ಶನಿವಾರ ಬೆಳಗ್ಗೆ ಜಲಾಶಯದ ಒಳಹರಿವು 7145 ಕ್ಯೂಸೆಕ್ ಇತ್ತು. ಈ ವರ್ಷ ಮೊದಲ ಬಾರಿಗೆ ನೀರಿನ ಮಟ್ಟ ಶನಿವಾರ ಎರಡು ಇಂಚು ಏರಿಕೆ ಕಂಡಿದೆ.

ಯಾವ ಕ್ಷಣದಲ್ಲಾದರೂ ಗೇಟ್ನಿಂದ ನೀರು ಬಿಡುಗಡೆ
ಶಿವಮೊಗ್ಗ ಜಿಲ್ಲೆಯ ಅತಿಸಣ್ಣ ಜಲಾಶಯವಾದ ಗಾಜನೂರು (ತುಂಗಾ) ಜಲಾಶಯಕ್ಕೆ ನಾಲ್ಕು ದಿನಗಳಿಂದ ಒಳಹರಿವು ಏರಿಕೆಯಾಗಿದೆ. 3 ಟಿ ಎಂ ಸಿ ಸಾಮರ್ಥ್ಯದ ಜಲಾಶಯದಲ್ಲಿ ಸದಾ 1.50 ಟಿಎಂಸಿ ನೀರು ಸಂಗ್ರಹ ಇರುತ್ತದೆ. ಹೀಗಾಗಿ, ಜಲಾಶಯ ತುಂಬುವ ಹಂತಕ್ಕೆ ತಲುಪಿದ್ದು ಇನ್ನೆರಡು ದಿನ ಇದೇ ರೀತಿ ಮಳೆ ಮುಂದುವರೆದಲ್ಲಿ ಯಾವುದೇ ಕ್ಷಣದಲ್ಲಿ ಕ್ರಸ್ಟ್ಗೇಟ್ಗಳ ಮೂಲಕ ಹೆಚ್ಚುವರಿ ನೀರನ್ನು ಹೊರಹರಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ನೀರಾವರಿ ನಿಗಮದ ಪ್ರಕಟಣೆ ತಿಳಿಸಿದೆ.
ಶನಿವಾರ ಬೆಳಗ್ಗೆ 8ಗಂಟೆಗೆ ಅಂತ್ಯವಾದಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 24 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಸರಾಸರಿಯಂತೆ ಸಾಗರ 38.6 ಮಿ.ಮೀ., ಹೊಸನಗರ 35.8, ತೀರ್ಥಹಳ್ಳಿ 28.8 ಮಿ.ಮೀ, ಸೊರಬ 11.9 ಮಿ.ಮೀ, ಶಿವಮೊಗ್ಗ 9.8 ಮಿ.ಮೀ, ಶಿಕಾರಿಪುರ 7.4 ಮಿ.ಮೀ ಮತ್ತು ಭದ್ರಾವತಿಯಲ್ಲಿ3.6 ಮಿ.ಮೀ ಮಳೆಯಾಗಿದೆ. ಮಾಸ್ತಿಕಟ್ಟೆಯಲ್ಲಿ ಅತಿ ಹೆಚ್ಚು 145 ಮಿ.ಮೀ., ಹುಲಿಕಲ್ನಲ್ಲಿ 139 ಮಿ.ಮೀ, ಆಗುಂಬೆ 80 ಮಿ.ಮೀ ಹಾಗೂ ಲಿಂಗನಮಕ್ಕಿಯಲ್ಲಿ52 ಮಿ.ಮೀ. ಮಳೆಯಾಗಿದೆ.