
ವಿಜಯನಗರ: ಕರ್ನಾಟಕದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾದ ಹೊಸಪೇಟೆ – ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸಾರಿಗೆ ಇಲಾಖೆಯಿಂದ 50 ಕೋಟಿ ರೂ. ಮಂಜೂರಾಗಿದೆ.

j3tvkannada
ವಿಜಯನಗರ ಜಿಲ್ಲೆ ಹೊಸಪೇಟೆ ಸಮೀಪದ ಮರಿಯಮ್ಮನಹಳ್ಳಿಯಿಂದ ಈ ರಾಷ್ಟ್ರೀಯ ಹೆದ್ದಾರಿ ಆರಂಭವಾಗಲಿದ್ದು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ಹೊನ್ನಾಳಿ ಮೂಲಕ ಶಿವಮೊಗ್ಗಕ್ಕೆ ವಿಸ್ತರಿಸಿದೆ. ದ್ವಿಪಥವಿದ್ದ ಈ ಮಾರ್ಗ ಸಾಕಷ್ಟು ಹದಗೆಟ್ಟಿತ್ತು. ವಾಹನ ಸಂಚಾರ ದೊಡ್ಡ ಸವಾಲಾಗಿತ್ತು. ಸದ್ಯ ಅಭಿವೃದ್ಧಿಯಾಗುತ್ತಿರುವುದು ವಿಜಯನಗರ, ಬಳ್ಳಾರಿ, ದಾವಣಗೆರೆ ಹಾಗೂ ಶಿವಮೊಗ್ಗ ಭಾಗದ ವಾಹನ ಸವಾರರಿಗೆ ಅನುಕೂಲವಾಗಲಿದೆ.
ಈ ಬಗ್ಗೆ ಬಳ್ಳಾರಿ ಲೋಕಸಭಾ ಸಂಸದ ತುಕಾರಾಮ್ ಕೊಟ್ಟೂರು ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಹಿತಿ ನೀಡಿದರು. ಸಂಸದರಾದ ಬಿ.ವೈ.ರಾಘವೇಂದ್ರ, ಪ್ರಭಾ ಮಲ್ಲಿಕಾರ್ಜುನ ಹಾಗೂ ತಾವು ಒಟ್ಟಾಗಿ ಎನ್.ಎಚ್ ಅಭಿವೃದ್ಧಿಗೊಳಿಸುವ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದು, ನಮ್ಮ ಮನವಿಗೆ ಸ್ಪಂದಿಸಿ ಅನುದಾನ ಮಂಜೂರು ಮಾಡಿದ್ದಾರೆ. ಅದರಂತೆ ಮೊಣಕಾಲ್ಮೂರು, ಕೂಡ್ಲಿಗಿ, ಕೊಟ್ಟೂರು ಮೂಲಕ ಹರಪನಹಳ್ಳಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೂ ಮನವಿ ಮಾಡಲಾಗಿದೆ ಎಂದು ಬಳ್ಳಾರಿ ಸಂಸದರು ತಿಳಿಸಿದರು.
ಈ ರಸ್ತೆಗಳು ಅಭಿವೃದ್ಧಿಯಾದಲ್ಲಿ ಪ್ರಯಾಣಿಕರ ಸಮಯ ಉಳಿಯಲಿದೆ. ಎಲ್ಲಾ ಕಡೆ ಸಂಪರ್ಕ ಕಲ್ಪಿಸುವ ರಸ್ತೆಗಳು ಅಭಿವೃದ್ಧಿಯಾದರೆ ಶಿಕ್ಷಣ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಉದ್ದೇಶದಿಂದಲೇ ಲೋಕಸಭೆ ಕ್ಷೇತ್ರ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ, ಎಂದು ತುಕಾರಾಮ್ ಹೇಳಿದರು.
ಲೋಕಸಭೆ ಕ್ಷೇತ್ರದಲ್ಲಿನ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇನೆ. ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರ 100 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದೆ. ಆಸ್ಪತ್ರೆ ಕಟ್ಟಡ ನಿರ್ಮಾಣ ಬಗ್ಗೆ ನಂತರದಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಕೊಟ್ಟೂರು ಆಸ್ಪತ್ರೆಗೆ ಆಂಬ್ಯುಲೆನ್ಸ್ ಮಂಜೂರು ಮಾಡುವೆ ಎಂದು ಹೇಳಿದರು.