
ಬೆಂಗಳೂರು ಗ್ರಾಮಾಂತರ: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕೈಗಾರಿಕೆ ಇನ್ನಿತರ ವಲಯಗಳಿಂದ ವ್ಯಾಪಕ ಹೂಡಿಕೆ ಹರಿದು ಬರುತ್ತಿದೆ. ಇದೀಗ ಆ ಸಾಲಿಗೆ ವೈಮಾನಿಕ ಸಂಸ್ಥೆ ‘ಇಂಡಿಗೋ’ ಸಂಸ್ಥೆ ಸೇರಿದೆ. ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲು ಮುಂದಾಗಿದೆ. ಇದರಿಂದ ಕರ್ನಾಟಕವನ್ನು ಏಷ್ಯಾದ ‘ಎಂಆರ್ಒ’ ರಾಜಧಾನಿಯನ್ನಾಗಿ ಅಭಿವೃದ್ಧಿ ಪಡಿಸುವ ನಮ್ಮ ಮುನ್ನೋಟ ಬಲಪಡಿಸಲು ಸಹಾಯವಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂಡಿಗೊ ಹೂಡಿಕೆ ನಿರ್ಧಾರವನ್ನು ಸ್ವಾಗತಿಸಿ ಅವರು ಶುಕ್ರವಾರ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶಿ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೊ ವಿಮಾನಗಳ ನಿರ್ವಹಣೆ ದುರಸ್ತಿ ಮತ್ತು ಸಂಪೂರ್ಣ ನವೀಕರಣದ ‘ಎಂಆರ್ಒ’ ಸೌಲಭ್ಯ (ಘಟಕ) ಆರಂಭಿಸಲು ಸಜ್ಜಾಗಿದೆ. ಈ ಸಂಬಂಧ ಬರೋಬ್ಬರಿ ₹1,100 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಸಚಿವರು ವಿವರಿಸಿದರು.
ಎಂಆರ್ಓ ಘಟಕದಿಂದ ಸಿಗುವ ಪ್ರಯೋಜನಗಳು
- 1 ದೊಡ್ಡ ಮತ್ತು 2 ಚಿಕ್ಕ ವಿಮಾನಗಳಿಗೆ ಅವಕಾಶ ಕಲ್ಪಿಸಲಿರುವ ಒಂದು ಪೇಂಟ್ ಹ್ಯಾಂಗರ್ ಇರುತ್ತದೆ.
- 4 ದೊಡ್ಡ ಮತ್ತು 8 ಚಿಕ್ಕ ವಿಮಾನಗಳ ಸರ್ವೀಸ್ಗೆ ಬೇಕಾದ 4 ಹ್ಯಾಂಗರ್ಗಳು ಲಭ್ಯವಾಗುತ್ತವೆ.
- ಇಂಡಿಗೊದ ಪಾಲುದಾರ ವಿಮಾನಯಾನ ಸಂಸ್ಥೆಗಳ ವಿಮಾನಗಳ ಸರ್ವೀಸ್ಗೂ ಅವಕಾಶ ಇಲ್ಲಿ ಸಿಗುತ್ತದೆ.
- ಇಂಡಿಗೊ ಸೇರ್ಪಡೆ ಮಾಡುವ ಬೃಹತ್ ಎ 350 ವಿಮಾನಗಳು ಮತ್ತು ಎ 320/ಎ 321 ಎಕ್ಸ್ಎಲ್ಆರ್ ವಿಮಾನಗಳಿಗೆ ಘಟಕ ಸಹಕಾರಿ.
- ಜಾಗತಿಕ ಹೂಡಿಕೆದಾರರಿಗೆ ಈ ಘಟಕೆ ಆಕರ್ಷಣಿಯವಾಗುತ್ತದೆ.
- ಜಾಗತಿಕ ವಿಮಾನಯಾನ ಕೇಂದ್ರವಾಗಿ ಬೆಂಗಳೂರಿನ ಸ್ಥಾನಮಾನ ಹೆಚ್ಚಾಗುತ್ತದೆ.
- ನಾಗರಿಕ ವಿಮಾನಯಾನ ಕ್ಷೇತ್ರ ಬಲಗೊಳ್ಳಲಿದೆ.
- ಸರಕು ಸಾಗಣೆ, ಉಗ್ರಾಣ ಮತ್ತು ಪೂರಕ ಸೇವಾ ಕ್ಷೇತ್ರಗಳಲ್ಲಿ 750 ನೇರ ಉದ್ಯೋಗ ಸೃಷ್ಟಿ.