
ಪಟ್ಟಣದ ಪ್ರಮುಖ ರಸ್ತೆಗಳ ಎರಡೂ ಬದಿಗೆ ಪಾದಾಚಾರಿ ಮಾರ್ಗಗಳನ್ನು ನಿರ್ಮಿಸಿ , ಅವುಗಳಿಗೆ ಗ್ರಿಲ್ ಅಳವಡಿಸಿ, ಅದರ ಪಕ್ಕದಲ್ಲಿಯೇ ಗಿಡಗಳನ್ನು ನೆಟ್ಟು ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಿದ್ದು, ಇದಕ್ಕೆ ಸರಕಾರದಿಂದ ಕೋಟ್ಯಾಂತರ ರೂಪಾಯಿ ಹಣ ಖರ್ಚಾಗಿತ್ತು. ಇದರಿಂದಾಗಿ ವಿಜಯಪುರ, ಇಂಡಿ,ಸಿಂದಗಿ ಅಗರಖೇಡ ಮುಂತಾದ ರಸ್ತೆಗಳು ಅಗಲೀಕರಣಗೊಂಡು ದೀಪಾಲಂಕಾರಗಳಿಂದ ಪ್ರಜ್ವಲಿಸುತ್ತಿತ್ತು.
ಆದರೆ, ಇದೀಗ ಇಂಡಿ ಪಟ್ಟಣದಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಿದ ರಸ್ತೆ ಅಲ್ಲದೇ ವಾಹನ ಸಂಚಾರಕ್ಕಾಗಿರುವ ಅರ್ಧ ರಸ್ತೆಯನ್ನು ಬೀದಿ ವ್ಯಾಪಾರಸ್ಥರು ಆಕ್ರಮಿಸಿಕೊಂಡಿದ್ದಾರೆ. ಇದರಿಂದಾಗಿ ಪಾದಾಚಾರಿಗಳು ಓಡಾಡಲು ಅನಾನುಕೂಲವಾಗಿದೆ. , ಪಾದಾಚಾರಿಗಳು ವಾಹನ ಓಡಾಡುವ ಜಾಗದಲ್ಲೇ ನಡೆದಾಡುವ ಪರಿಸ್ಥಿತಿಯು ಎದುರಾಗಿದೆ.
ಶಾಲಾ ಮಕ್ಕಳು ಶಾಲಾ ವಾಹನಗಳು ಬರುವವರೆಗೂ ಮಕ್ಕಳು ನಡುರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದುಕೊಂಡು ನಿಲ್ಲಬೇಕಾಗುತ್ತದೆ. ಇದರಿಂದಾಗಿ ಪೋಷಕರಿಗೆ ಆತಂಕವುಂಟಾಗಿದೆ. ನಾಲ್ಕು ರಸ್ತೆಗಳು ಸೇರುವ ಬಸವೇಶ್ವರ ವೃತ್ತದಲ್ಲಿ ಪೊಲೀಸ್ ಚೌಕಿ ಇದೆ. ಅಲ್ಲಿ ಪೊಲೀಸರೂ ಇದ್ದಾರೆ, ಆದರೆ ನಾಮಕಾವಸ್ಥೆಗಷ್ಟೇ ಅವರು ಇರುವುದು ಎಂಬಂತಾಗಿದೆ. ಎಂದು ಅಕ್ಷಯ್ ಪಾಟೀಲ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇಂಡಿ ಪಟ್ಟಣದ ಬಸವೇಶ್ವರ ಸರ್ಕಲ್ನಲ್ಲಿ ಬಸ್ ನಿಲ್ದಾಣವಿದ್ದು ಬಸ್ಗಳು ನಿಲ್ದಾಣಕ್ಕೆ ವೇಗವಾಗಿ ಒಳಗೆ ಹೊರಗೆ ಹೋಗುತ್ತಿರುತ್ತವೆ. ಆದರೂ ವ್ಯಾಪಾರಿಗಳಿಗೆ ಕ್ಯಾರೇ ಇಲ್ಲದಂತೆ ವರ್ತಿಸುತ್ತಾರೆ. ಇದರಿಂದ ಸಾರ್ವಜನಿಕರಿಗೆ, ಚಾಲಕರಿಗೆ, ಪ್ರವಾಸಿಗರಿಗೆ ಅತೀವ ತೊಂದರೆಯಾಗಿದೆ ಎಂದು ನಿಂಬರಗಿಯವರು ದೂರಿದ್ದಾರೆ.
ಇಡೀ ರಸ್ತೆಯನ್ನು ತರಕಾರಿ ವ್ಯಾಪಾರಿಗಳು, ಬೀಡಾ, ಗುಟ್ಕಾ, ಬೀಡಿ, ಸಿಗರೇಟ್, ಸೋಡಾ, ಐಸ್ ಕ್ರೀಮ್, ಚಿಕನ್ ಅಂಗಡಿಗಳು, ಹೂವಿನ ಅಂಗಡಿಗಳು, ಸ್ಟೌ ರಿಪೇರಿ, ಹಗ್ಗದ ವ್ಯಾಪಾರಿಗಳು ಸುಣ್ಣದ ವ್ಯಾಪಾರಿಗಳು ಇವೇ ಮುಂತಾದ ಹಲವಾರು ವ್ಯಾಪಾರಿಗಳು ಆಕ್ರಮಿಸಿವೆ. ಆದ್ದರಿಂದ ಇಂಡಿಗೆ ಸಂಬಂಧಿಸಿದ ಶಾಸಕರೇ ಇದನ್ನು ಸರಿಪಡಿಸಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.
.