
ಮೈಸೂರು: 2028ರ ಬಳಿಕ ಚುನಾವಣೆ ರಾಜಕೀಯಕ್ಕೆ ಗುಡ್ ಬೈ ಎಂದು ಕೆ.ಎನ್ ರಾಜಣ್ಣ ಘೋಷಿಸಿದ್ದಾರೆ. ಮುಂಬರುವ ಚುನಾವಣೆ ರಾಜಕೀಯದಿಂದ ನಿವೃತ್ತಿಯಾಗುವ ಬಗ್ಗೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದ್ದು, ಇದಕ್ಕೆ ಕಾರಣ ಏನೆಂಬುದನ್ನೂ ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದು, ಇದಕ್ಕೆ ವಯಸ್ಸಿನ ಕಾರಣ ನೀಡಿದ್ದಾರೆ. ನನಗೆ ಈಗಾಗಲೇ 75 ವರ್ಷ ಆಗಿದೆ.

ಮುಂದಿನ ಚುನಾವಣೆಗೆ ನಾನು ನಿಲ್ಲಲ್ಲ. ಮುಂದಿನ ಚುನಾವಣೆ ಬರುವ ವೇಳೆಗೆ ನನಗೆ 78 ವರ್ಷ ಆಗುತ್ತೆ. ಚುನಾವಣೆಗೆ ನಿಂತು ಗೆದ್ದರೂ ಆರೋಗ್ಯದ ದೃಷ್ಟಿಯಿಂದ ಜನರ ಸೇವೆ ಮಾಡುವುದಕ್ಕೆ ಆಗುವುದಿಲ್ಲ. ಯುವಕರಿಗೆ ಅವಕಾಶ ನೀಡಬೇಕು ಅನ್ನೋದು ನನ್ನ ಅಭಿಪ್ರಾಯ. ಚುನಾವಣೆ ರಾಜಕಾರಣಕ್ಕೆ ನಾನು ಗುಡ್ ಬೈ ಹೇಳುತ್ತೇನೆ. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದಿದ್ದಾರೆ.
ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ. ಇಂದು ಕಾಂಗ್ರೆಸ್ ಸಾಧನೆ ಸಮಾವೇಶ ಹಿನ್ನೆಲೆ, ಯಾವ ಸಾಧನೆ ಮಾಡಿ ಸಮಾವೇಶ ಮಾಡ್ತಿದ್ದಾರೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಸಚಿವ ರಾಜಣ್ಣ ಪ್ರತಿಕ್ರಿಯೆ ನೀಡಿ, ಬಿಜೆಪಿ ಒಂದು ವಿರೋಧ ಪಕ್ಷವಾಗಿ ಟೀಕೆ ಮಾಡ್ತಿದ್ದಾರೆ. ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಗೃಹಲಕ್ಷ್ಮಿ ಹಣ ಬಿಡುಗಡೆ ಕುರಿತು ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಡಿ.ಕೆ ಶಿವಕುಮಾರ್ ಆ ರೀತಿ ಹೇಳಿರೋದು ಸಂಶಯ ಇದೆ. ಮಾಧ್ಯಮಗಳು ಅದನ್ನು ತಿರುಚಿರಬಹುದು. ಡಿ.ಕೆ ಶಿವಕುಮಾರ್ ಆ ರೀತಿ ಹೇಳಿರೋದಿಲ್ಲ, ನಾನು ಕೂಡ ಸಚಿವ ಸಂಪುಟ ಸದಸ್ಯ ಇದ್ದೇನೆ. ಜನವರಿ ಪೆಬ್ರವರಿ ತಿಂಗಳಿನಲ್ಲಿ ಆಪ್ ಬದಲಾವಣೆ ಆದಾಗ ತಡ ಆಯಿತು. ಅದನ್ನು ಬಿಟ್ಟರೆ ಈಗಲೂ ಅನೇಕರಿಗೆ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿದೆ. ಈ ಬಗ್ಗೆ ಫಲಾನುಭವಿಗಳನ್ನೇ ಬೇಕಿದ್ರು ಕೇಳಿ ಎಂದಿದ್ದಾರೆ.