
ಬೆಂಗಳೂರನ್ನು ವಿಸ್ತರಿಸಲು ಉದ್ದೇಶಿಸಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ವಿಧಾನಸಭೆಯಲ್ಲಿ ವರದಿ ಇತ್ತೀಚೆಗೆ ಮಂಡನೆಯಾಗಿದೆ. ಬೆಂಗಳೂರಿಗೆ ಹೆಚ್ಚುವರಿಯಾಗಿ 9200 ಹೆಕ್ಟೇರ್ ಭೂಪ್ರದೇಶವನ್ನು ಒಳಗೊಂಡ 22 ಗ್ರಾಮಗಳನ್ನು ಈ ಪ್ರಾಧಿಕಾರದ ವ್ಯಾಪ್ತಿಗೆ ತರಲು ಮುಂದಾಗಿದೆ. ಇದು ಪಕ್ಕದ ರಾಮನಗರ ಜಿಲ್ಲೆಯ ಕೆಲವು ಗ್ರಾಮಗಳನ್ನೂ ಒಳಗೊಳ್ಳಲಿದ್ದು, ಬಿಡದಿ ಪಟ್ಟಣ ಸೇರಿದಂತೆ ಒಟ್ಟು 92 ಸಾವಿರ ಜನಸಂಖ್ಯೆ ಇರುವ 59 ಗ್ರಾಮಗಳು ಸೇರ್ಪಡೆಯಾಗಿವೆ. ಆ ಗ್ರಾಮಗಳ ವಿವರ ಇಲ್ಲಿದೆ.
ರಾಮನಗರ ತಾಲ್ಲೂಕಿನ ಕಸಬಾ ಹೋಬಳಿಯ ಹಳ್ಳಿಮಾಳ, ಹರೀಸಂದ್ರ, ಬೊಮ್ಮಚನಹಳ್ಳಿ, ಕೂಟಗಲ್ ಹೋಬಳಿ ವ್ಯಾಪ್ತಿಯ ದೊಡ್ಡಸೂಲಿಕೆರೆ, ಲಕ್ಷ್ಮೀಪುರ, ಲಕ್ಕಸಂದ್ರ, ಸುಗ್ಗನಹಳ್ಳಿ, ಚಿಕ್ಕಸೂಲಿಕೆರೆ ಗ್ರಾಮಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಯೋಜನೆಯ ವ್ಯಾಪ್ತಿಗೆ ಬರಲಿವೆ. ಈ ಹಿಂದೆ ಈ ಗ್ರಾಮಗಳು ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರದ ಸ್ಥಳೀಯ ಯೋಜನಾ ವ್ಯಾಪ್ತಿಗೆ ಒಳಪಟ್ಟಿದ್ದವು. ಇದೀಗ 13 ಸಾವಿರ ಜನಸಂಖ್ಯೆ ಹೊಂದಿರುವ 8 ಗ್ರಾಮಗಳ 5,921 ಹೆಕ್ಟೇರ್ ಭೂಪ್ರದೇಶ ಹೊಸದಾಗಿ ಸೇರ್ಪಡೆಯಾಗಲಿದೆ.
ಇನ್ನು ಕನಕಪುರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದ ಹಾರೋಹಳ್ಳಿ ತಾಲ್ಲೂಕಿನ ಗಬ್ಬಾಡಿ, ಗಬ್ಬಾಡಿ ಕಾವಲ್, ಮುಡೇನಹಳ್ಳಿ, ವಡೇರಹಳ್ಳಿ, ಯಡಮಡು ಗ್ರಾಮಗಳು ಕೂಡ ಗ್ರೇಟರ್ ಬೆಂಗಳೂರಿಗೆ ಸೇರಿಕೊಳ್ಳಲಿವೆ. ಅಲ್ಲದೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ, ಕೆ.ಜಿ.ಚೌಡನಹಳ್ಳಿ, ನೆಲಗುಳಿ, ನಾಗನಾಯಕನಹಳ್ಳಿ, ಉತ್ತರಿ, ನೆಟ್ಟಿಗೆರೆ, ರಾವುಗೋಡ್ಲು, ಸೋಮನಹಳ್ಳಿ ಸೇರಿದಂತೆ ಹಲವು ಗ್ರಾಮಗಳು ಇದಕ್ಕೆ ಸೇರ್ಪಡೆಗೊಳ್ಳಲಿವೆ. ಇನ್ನು ನೂತನವಾಗಿ ಸೇರ್ಪಡೆಯಾಗುತ್ತಿರುವ 14 ಗ್ರಾಮಗಳು 25 ಸಾವಿರ ಜನಸಂಖ್ಯೆ ಹಾಗೂ 3,800 ಹೆಕ್ಟೇರ್ ಭೂಪ್ರದೇಶವನ್ನು ಹೊಂದಿವೆ.
ಈಗಾಗಲೇ ಕನಕಪುರ ಸ್ಥಳೀಯ ಯೋಜನಾ ಪ್ರದೇಶ ಹಾಗೂ ಉಪನಗರ ವರ್ತುಲ ರಸ್ತೆ ಸ್ಥಳೀಯ ಯೋಜನಾ ಪ್ರದೇಶದಿಂದ ಗ್ರಾಮಗಳನ್ನು ಹಿಂಪಡೆಯಲಾಗಿದೆ. ಅವುಗಳನ್ನು ಗ್ರೇಟರ್ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳು ಕೂಡ ಕಾರ್ಯಪ್ರವೃತ್ತರಾಗಿದ್ದಾರೆ ಎನ್ನಲಾಗಿದೆ.
ಬೆಂಗಳೂರು ವಿಸ್ತರಣೆಗೊಳ್ಳುತ್ತಿರುವ ಹಿನ್ನೆಲೆ ಭವಿಷ್ಯದ ದೃಷ್ಟಿಯಿಂದ ಗ್ರೇಟರ್ ಬೆಂಗಳೂರನ್ನು ಪರಿಚಯಿಸಲಾಗುತ್ತಿದೆ. ಹಾಗಾಗಿ ರಾಮನಗರವನ್ನು ಮತ್ತೊಂದು ಬೆಂಗಳೂರಿನಂತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆ ಈಗ ಈ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಬಿಡದಿ ಬಳಿ ನಿರ್ಮಿಸಲು ಉದ್ದೇಶಿರುವ ಟೌನ್ಶಿಪ್ ನಿರ್ಮಾಣ ಚುರುಕುಗೊಂಡಿದೆ. ಇಲ್ಲಿ ಟೌನ್ಶಿಪ್ ನಿರ್ಮಾಣಕ್ಕೆ ಹೂಡಿಕೆದಾರರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಕ್ರಮೇಣ ಇಲ್ಲಿನ ಭೂಮಿಯ ಬೆಲೆಯೂ ಹೆಚ್ಚಾಗಲಿದ್ದು, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಲ ನೀಡಲಿದೆ ಎಂದು ಹೇಳಲಾಗುತ್ತಿದೆ.
ಶಿವಾಜಿನಗರದ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರ ಅಧ್ಯಕ್ಷತೆಯ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪರಿಶೀಲಿಸಿ ವರದಿ ನೀಡಲು ರಚಿಸಲಾಗಿತ್ತು. ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ವರದಿಯನ್ನು ಇತ್ತೀಚೆಗೆ ಮಂಡನೆ ಮಾಡಲಾಗಿದೆ. ಈ ಹಿನ್ನೆಲೆ ರಾಮನಗರಕ್ಕೂ ಇದು ವರದಾನವಾಗಲಿದ್ದು, ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬರುವುದು ಗ್ಯಾರಂಟಿ ಎನ್ನಲಾಗಿದೆ.