
ಬಾಗಲಕೋಟೆ: ಇತ್ತೀಚೆಗಂತೂ ಈ ಸಾವು ಎಂಬ ಮಾಯೆ ಯಾವಾಗ ಯಾರನ್ನು ಹೇಗೆ ಆವರಿಸಿಕೊಳ್ಳುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಸಾವಿರಾರು ಕನಸುಗಳ ಜೊತೆ ನವಜೀವನಕ್ಕೆ ಪಾದಾರ್ಪಣೆ ಮಾಡಲು ಸಕಲ ಸಿದ್ದತೆಗಳೊಂದಿಗೆ ತಯಾರಾಗಿತ್ತು ಈ ನವಜೋಡಿ. ವರನು ತಾಳಿಯನ್ನೂ ಕಟ್ಟಿದ್ದಾನೆ. ಆದರೆ ವಿಧಿ ಲಿಖಿತವೇ ಬೇರಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಮನ ಕರಗುವ ಘಟನೆಯೊಂದು ಇಂದು ನಡೆದಿದೆ. ಮದುವೆಯ ಮನೆ ಸಾವಿನ ಮನೆಯಾಗಿದೆ.

j3tvkannada.in
ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭವೊಂದು ನಡೆಯುತ್ತಿದ್ದು, ವಧುವಿಗೆ ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕುಂಬಾರಹಳ್ಳ ಗ್ರಾಮದ ನಿವಾಸಿ ಪ್ರವೀಣ ಕುರ್ನೆ ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ . ಕಲ್ಯಾಣ ಮಂಟಪದಲ್ಲಿ ಪ್ರವೀಣ ಕುರ್ನೆ ಹಾಗೂ ಪೂಜಾ ಮದುವೆ ಸಮಾರಂಭ ನಡೆಯುತ್ತಿತ್ತು. ಆದರೆ, ಕೆಲವೇ ಕ್ಷಣದಲ್ಲಿ ಅಲ್ಲಿ ಸೂತಕದ ಛಾಯೆ ಆವರಿಸಿದೆ. ತಾಳಿ ಕಟ್ಟಿದ ಮರುಕ್ಷಣವೇ ಪೂಜಾ ವಿಧವೆಯಾಗಿದ್ದಾಳೆ. ಕಂಡ ಕನಸು ನುಚ್ಚು ನೂರಾಗಿದೆ. ಸಂತಸ ಸಡಗರದಲ್ಲಿದ್ದ ಕುಟುಂಬ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ.