
ಚಿಕ್ಕಬಳ್ಳಾಪುರ: ಅದು ಮೊದಲೇ ಪ್ರಕೃತಿ ಸೌಂದರ್ಯವನ್ನು ಹೊದ್ದುಕೊಂಡು ಮಲಗಿರುವ ವಿಶ್ವವಿಖ್ಯಾತ ಗಿರಿಧಾಮ. ಅಲ್ಲಿಗೆ ಹೋಗಿ ಕೆಲಕಾಲ ವಿಹರಿಸಿದರೆ ಅದೇನೊ ಮನಸ್ಸಿಗೆ ಒಂಥರಾ ಆಹ್ಲಾದಕರವಾಗುತ್ತೆ. ಹಾಗಾಗಿ ಬೆಂಗಳೂರಿನ ಜನ, ವೀಕೆಂಡ್ ಬಂದರೆ ಸಾಕು, ಅಲ್ಲಿಗೆ ನುಗ್ಗತ್ತಾರೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನಲೆ, ನಿನ್ನೆ ಸಚಿವ ಡಾ. ಎಂ.ಸಿ.ಸುಧಾಕರ್ ಭೇಟಿ ನೀಡಿ, ಪ್ರವಾಸಿಗರ ಜೊತೆ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದ್ದಾರೆ.

j3tvkannada
ಮುಗಿಲೇತ್ತರಕ್ಕೆ ಬೆಳೆದು ನಿಂತ ಬೆಟ್ಟ. ಬೆಟ್ಟಕ್ಕೆ ಮುತ್ತಿಕ್ಕುವ ಬೆಳ್ಳಿ ಮೋಡಗಳು. ಒಂದೆಡೆ ತಂಗಾಳಿಯೊಂದಿಗೆ ತೇಲಿ ಬರುವ ಬೆಳ್ಳಿ ಮೋಡಗಳ ಚೆಲ್ಲಾಟ, ಮತ್ತೊಂದೆಡೆ ಚುಮು ಚುಮು ಚಳಿಯ ನಾದಲೀಲೆ, ಇಂಥ ರಮಣೀಯ ಪ್ರಕೃತಿ ಸೊಬಗುನ್ನು ಕಾಣಲು ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಹೋಗಬೇಕು. ಹೌದು! ಪ್ರಕೃತಿ ಸೊಬಗಿಗೆ ಖ್ಯಾತಿಯಾಗಿರುವ ನಂದಿಬೆಟ್ಟಕ್ಕೂ ರಾಜಧಾನಿ ಬೆಂಗಳೂರಿನ ಪ್ರವಾಸಿಗಳಿಗೂ ಅದೇನೊ ಒಂಥರಾ ನಂಟು. ಇನ್ನೂ ವೀಕೆಂಡ್ ಬಂದರೆ ಸಾಕು, ಗಿರಿಧಾಮ ಜನರಿಂದ ತುಂಬಿ ತುಳುಕುತ್ತೆ.

j3tvkannada
ಇನ್ನೂ ಬೆಂಗಳೂರಿನ ಯುವಕ ಯುವತಿಯರ ಹಾಟ್ ಸ್ಪಾಟ್ ಆಗಿರುವ ಗಿರಿಧಾಮದಲ್ಲಿ ರೋಪ್ ವೇ ನಿರ್ಮಾಣ ಮಾಡಲು ಸರ್ಕಸ್ ನಡೆದಿದ್ದು, ಒಂದೊಂದು ಸರ್ಕಾರಗಳು ಒಂದೊಂದು ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿವೆ. ಆದರೆ ಅಧಿಕೃತ ಕಾಮಗಾರಿಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ತಂಡವನ್ನು ನಿನ್ನೆ ಗಿರಿಧಾಮಕ್ಕೆ ಕರೆ ತಂದು, ರೋಪ್ ವೇ ಕಾಮಗಾರಿ ಆರಂಭಿಸುವ ಕುರಿತು ಚರ್ಚೆ ಮಾಡಿದರು.
ನಂದಿಗಿರಿ ಧಾಮದಲ್ಲಿ ಪ್ಯಾಸೇಂಜರ್ ರೋಪ್ ವೇ ಈಗ ಆಗುತ್ತೆ, ಆಗ ಆಗುತ್ತೆ ಅಂತ ಕಳೆದ ಹತ್ತು ವರ್ಷಗಳಿಂದ ಪ್ರಚಾರ ಮಾಡಲಾಗುತ್ತಿದೆ. ಆದರೆ ಇದುವರೆಗೂ ಅಧಿಕೃತವಾಗಿ ರೋಪ್ ವೇ ಕಾಮಗಾರಿ ಮಾತ್ರ ಆರಂಭವಾಗಿಲ್ಲ, ಈಗ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ರೋಪ್ ವೇ ನಿರ್ಮಾಣ ಮಾಡಲು ಆಸಕ್ತಿ ತೋರಿದ್ದು, ಸಾಕಾರವಾಗುತ್ತಾ ಕಾದು ನೋಡಬೇಕು.