
ಹಾವೇರಿ: ಮೂಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ್ದು, ಆರು ಜನರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಕೋಟೆಗುಡ್ಡದ ಬಳಿಯಲ್ಲಿ ಅಪಘಾತ ಸಂಭವಿಸಿದ್ದು, ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ. ಧಾರವಾಡ ಮೂಲದ ಹಾಲಿ ವಸ್ತಿ ರಾಣೆಬೆನ್ನೂರು ನಗರದ 8 ಜನರಲ್ಲಿ ಆರು ಜನ ಸ್ಥಳದಲ್ಲಿಯೇ ಸಾವನ್ನಪಿದ್ದಾರೆ. ಸ್ಥಳಕ್ಕೆ ಬ್ಯಾಡಗಿ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

j3tvkannada
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಹಾಗೂ ಚಾಲಕನ ಬದಿಯ ಒಂದು ಸೈಡ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಗೊಂಡವರನ್ನು ತಕ್ಷಣ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹರಿಹರದ ಫರಾನ್ ಇಮಾಮವುಲ್ಲ (27), ಉಮ್ಮಿಸಿಫಾ ಅಫ್ರಾಜ್ (16), ಅಲ್ಲಿಷಾ ಅಕ್ಟರ್ ನಾರಂಗಿ (20), ಪುಲ್ಟಾನ್ ಅಕ್ಟರ್ ನಾರಂಗಿ (20), ಉಮ್ಮೇರಾ (15) ಹಾಗೂ ಆಸೀಯಾ ಖಲಂದರ ಹೊನ್ನಾಳಿ (16) ಮೃತರು. ಅಪಫಾತದಲ್ಲಿ ಗಾಯಗೊಂಡ ಮೇಹಕ್ (18) ಹಾಗೂ ತಸ್ಮಿನ್ (18) ಹುಬ್ಬಳ್ಳಿ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ಗುರುವಾರ ಮಧ್ಯಾಹ್ನ ರಾಣೆಬೆನ್ನೂರಿನಿಂದ ಹುಬ್ಬಳ್ಳಿ ಕಡೆಗೆ ಆಡಿ ಕಾರಿನಲ್ಲಿ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಹೊರಟಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಅಪಘಾತವಾಗಿದೆ ಎಂದು ಎಸ್ಪಿ ಅಂಶುಕುಮಾರ ತಿಳಿಸಿದರು.
ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ:- ದೇಶಾದ್ಯಂತ ರಸ್ತೆ ಅಪಘಾತಗಳಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ಕಲ್ಪಿಸುವ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (ಎಂ.ಒ.ಆರ್.ಟಿ.ಎಚ್) ಮಂಗಳವಾರ ಅಧಿಸೂಚನೆ ಹೊರಡಿಸಿದೆ. ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವುಗಳ ಪ್ರಮಾಣ ತಗ್ಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಯೋಜನೆಯು ಸೋಮವಾರದಿಂದ (ಮೇ 5) ಪೂರ್ವಾನ್ವಯವಾಗಿ ದೇಶಾದ್ಯಂತ ಜಾರಿಗೆ ಬಂದಿದ್ದು, ಆಸ್ಪತ್ರೆಗಳಲ್ಲಿ ಮೊದಲ ಏಳು ದಿನಗಳವರೆಗೆ 1.5 ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸೆ ಲಭಿಸಲಿದೆ.
ಯಾವುದೇ ರಸ್ತೆಯಲ್ಲಿ ಸಂಭವಿಸುವ ಮೋಟಾರು ವಾಹನದ ಬಳಕೆಯಿಂದ ಉಂಟಾಗುವ ಅಪಘಾತಕ್ಕೆ ತುತ್ತಾದವರು ನಗದು ರಹಿತ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪೊಲೀಸ್, ಆಸ್ಪತ್ರೆಗಳು ಮತ್ತು ರಾಜ್ಯ ಆರೋಗ್ಯ ಸಂಸ್ಥೆಗಳು ಇತ್ಯಾದಿಗಳ ಸಮನ್ವಯದೊಂದಿಗೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್.ಎಚ್.ಎ) ಕಾರ್ಯಕ್ರಮದ ಅನುಷ್ಠಾನ ಸಂಸ್ಥೆಯಾಗಿದೆ. ಅಪಫಾತವಾದ ದಿನಾಂಕದಿಂದ ಗರಿಷ್ಠ 7 ದಿನಗಳವರೆಗೆ ಯಾವುದೇ ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು.