
ಚಿಕ್ಕಬಳ್ಳಾಪುರ: ಬೇಸಿಗೆ ಬಿಸಿಲಿನ ತಾಪಮಾನ ದಿನೇದಿನೇ ಹೆಚ್ಚಾಗುತ್ತಿರುವುದರ ಪರಿಣಾಮ ಅಂತರ್ಜಲ ಮಟ್ಟ ಕುಸಿತವಾಗುತ್ತಿದೆ.

j3tvkannada
ಬೇಸಿಗೆ ರೈತರಿಗೆ ಹಲವು ಕಷ್ಟಗಳನ್ನು ತಂದಿಟ್ಟಿದೆ. ಬೆಳೆಗಳನ್ನು ಹಿಂಡಿ ಹಿಪ್ಪೆ ಮಾಡುವ ಇದೇ ಸಮಯದಲ್ಲಿ ನೀರಿನ ಕೊರತೆ, ವಿದ್ಯುಚ್ಛಕ್ತಿಯ ಕೊರತೆಯೂ ಎದುರಾಗಿದೆ. ಇವುಗಳೊಂದಿಗೆ ಕೊಳವೆಬಾವಿಗಳ ಮೋಟಾರ್, ಪಂಪ್ ದುರಸ್ತಿ ಕಾರ್ಯವೂ ರೈತರ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತಿವೆ.
ಬೇಸಿಗೆ ಆರಂಭದಿಂದಲೇ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಕೊಳವೆಬಾವಿಗಳಲ್ಲಿನ ನೀರಿನ ಇಳುವರಿ ಕಡಿಮೆಯಾಗುತ್ತಿದೆ. ಪಂಪ್, ಮೋಟಾರುಗಳಿಗೆ ನೀರು ಎಟುಕದ ಕಾರಣ, ಖಾಲಿ ಮೋಟಾರುಗಳು ಚಾಲನೆಯಲ್ಲಿರುವುದರಿಂದ ಪದೇ ಪದೇ ಸುಟ್ಟು ಹೋಗುತ್ತವೆ.
ಸುಟ್ಟುಹೋಗಿರುವ ಪಂಪ್, ಮೋಟಾರುಗಳನ್ನು ರಿಪೇರಿ ಮಾಡಿಸುವ ಸವಾಲನ್ನು ಎದುರಿಸುತ್ತಿರುವುದು ಒಂದೆಡೆಯಾದರೆ, ಮೇಲೆತ್ತುವ ಯಂತ್ರ ಸಿಗದೆ ಪರದಾಡಬೇಕಾದ ಸ್ಥಿತಿ ಇದೆ.
ರೈತ ಮಂಜುನಾಥ್ ಹೇಳುವಂತೆ ಬೇಸಿಗೆಯಲ್ಲಿ ಅಸಮರ್ಪಕ ವಿದ್ಯುತ್ ಮತ್ತು ಆಳಕ್ಕೆ ಹೋಗುವ ಅಂತರ್ಜಲಮಟ್ಟ ಮೋಟಾರ್ ಕೆಟ್ಟು ಹೋಗಲು ಪ್ರಮುಖ ಕಾರಣ. ಕೊಳವೆಬಾವಿ ಹೊಂದಿರುವ ರೈತರದ್ದು ನಾನಾ ಸಮಸ್ಯೆ ಪ್ರಾರಂಭವಾಗಿವೆ. ಕೆಲವರದ್ದು ಕೇಬಲ್ ಸುಟ್ಟರೆ, ಕೆಲವರದ್ದು ಮೋಟರ್ ಸುಟ್ಟಿರುತ್ತದೆ. ನೆಲದಾಳದಿಂದ ಹೊರತೆಗೆದು ದುರಸ್ತಿ ಮಾಡಿಸುವಷ್ಟರಲ್ಲಿ ಎರಡು ದಿನವಾದರೂ ಬೇಕು. ₹5ರಿಂದ ₹20 ಸಾವಿರ ಬೇಕು. ಒಂದೆಡೆ ಬೆಳೆ ನೀರಿಲ್ಲದೆ ಒಣಗುತ್ತದೆ, ಮತ್ತೊಂದೆಡೆ ರೈತರಿಗೆ ಆರ್ಥಿಕ ಮತ್ತು ಮಾನಸಿಕ ಸಂಕಷ್ಟ ಎದುರಾಗುತ್ತಿದೆ.
ತರಬೇತಿ ನೀಡಲು ಒತ್ತಾಯ:- ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಪ್, ಮೋಟಾರು ರಿಪೇರಿ ಮಾಡುವ ತರಬೇತಿ ಕೊಟ್ಟು, ತಂತ್ರಜ್ಞರನ್ನು ಸ್ಥಳೀಯವಾಗಿ ಹುಟ್ಟು ಹಾಕುವ ಕೆಲಸ ಮಾಡಬೇಕು. ಸ್ಥಳೀಯ ಪಂಚಾಯಿತಿಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಅವರೇ ಬಗೆಹರಿಸಿಕೊಳ್ಳಲು ಅನುಕೂಲವಾಗಲಿದೆ. ಎರಡು ಪಂಚಾಯಿತಿಗೊಂದರಂತೆ ಪಂಪ್, ಮೋಟಾರು ಮೇಲೆತ್ತುವಂತಹ ಯಂತ್ರೋಪಕರಣ ಖರೀದಿಸಿಕೊಡಬೇಕು ಎಂದು ರೈತ ಮಂಜುನಾಥ್ ಒತ್ತಾಯಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ 273 ಹಳ್ಳಿಗಳ ಪೈಕಿ 56 ಹಳ್ಳಿಗಳಲ್ಲಿನ ಕೊಳವೆಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆಯಾಗಿದೆ. ಉತ್ತಮವಾಗಿ ಮಳೆಯಾದರೆ ಸುಧಾರಣೆ ಮಾಡಿಕೊಳ್ಳಬಹುದು. ಮಳೆಯಾಗದಿದ್ದರೆ ಮತ್ತಷ್ಟು ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. 12 ಹಳ್ಳಿಗಳಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದು ಕುಡಿಯುವ ನೀರಿನ ವಿಭಾಗದ ಎ.ಇ.ಇ ಲೋಕೇಶ್ ತಿಳಿಸಿದರು.