
ಬೆಂಗಳೂರು ಗ್ರಾಮಾಂತರ: ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳು ಹೊಸಕೋಟೆ ಮೂಲಕ ಹಾದು ಹೋಗುತ್ತವೆ. ಈ ಮೂರು ರಾಜ್ಯಗಳಿಂದ ದಿನನಿತ್ಯ ಓಡಾಡುವ ಸಾವಿರಾರು ವಾಹನ ಮತ್ತು ಪ್ರಯಾಣಿಕರಿಗೆ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸದ ರಾಶಿ ಸ್ವಾಗತ ಕೋರುತ್ತದೆ.

j3tvkannada
ನಗರದಿಂದ ಚಿಂತಾಮಣಿ ಮಾರ್ಗ, ಕೋಲಾರ ಮಾರ್ಗ, ಮಾಲೂರು ಮಾರ್ಗ ಸೂಲಿಬೆಲೆ ಮಾರ್ಗ, ಬೆಂಗಳೂರು ಮಾರ್ಗ ಪ್ರಮುಖ ರಸ್ತೆಗಳು. ನಗರದ ಒಳಭಾಗದಿಂದ ಕಣ್ಣೂರಹಳ್ಳಿ ರಸ್ತೆ, ದೊಡ್ಡಗಟ್ಟಿಗನಬ್ಬೆ ರಸ್ತೆ, ಕುಂಬಳಹಳ್ಳಿ ರಸ್ತೆ ಹಾಗೂ ಎಲ್ಲಾ ವಾರ್ಡ್ಗಳಲ್ಲಿಯೂ ಕಸದ ಸಮಸ್ಯೆ ತಾಂಡವವಾಡುತ್ತಿದೆ.
ಕಸದ ಸಮಸ್ಯೆ ನಿನ್ನೆ ಮೊನ್ನೆಯದ್ದಲ್ಲ. ಹಲವು ವರ್ಷಗಳಿಂದ ಬೇರೂರಿರುವ ಜಾಡ್ಯ. ಇದು ಇತ್ತೀಚಿನ ದಿನಗಳಲ್ಲಿ ಉಲ್ಬಣಗೊಂಡಿದ್ದು, ಎಲ್ಲಂದರಲ್ಲಿ ಕಸದ ರಾಶಿ ಕಾಣುತ್ತಿದೆ. ಈ ಸಮಸ್ಯೆ ಬಗೆಹರಿಸುವಲ್ಲಿ ಸ್ಥಳೀಯ ಆಡಳಿತಗಳು ವಿಫಲವಾಗಿದೆ. ರಸ್ತೆ ಬದಿ ಕಸ ಎಸೆಯಬಾರದು ಎಂಬ ವಿವೇಚನ ಸ್ಥಳೀಯರು, ವಿವಿಧ ಅಂಗಡಿ ಮತ್ತು ಹೋಟೆಲ್ ಮಾಲೀಕರಲ್ಲಿಯೂ ಇಲ್ಲವಾಗಿದೆ. ಹೀಗಾಗಿ ಕಸದ ಸಮಸ್ಯೆ ಬೆಳೆಯುತ್ತಲೇ ಸಾಗಿದೆ.
ರಸ್ತೆಗಳ ಅಂಚಿನಲ್ಲಿ ಅಪಾಯಕಾರಿ ತ್ಯಾಜ್ಯವನ್ನು ಬೀಸಾಡುವುದಲ್ಲದೆ ಅದಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ರಸ್ತೆಗೆ ದಟ್ಟ ಹೊಗೆ ಆವರಿಸಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಹಲವು ಬಾರಿ ವಾಹನ ಸವಾರರಿಗೆ ರಸ್ತೆ ಕಾಣದೆ ಅಪಘಾತ ಆಗಿರುವ ಪ್ರಕರಣಗಳು ಉಂಟು. ಅಲ್ಲದೆ ಕಸದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಸೇರಿ ವಿಷಕಾರಕ ವಸ್ತುಗಳು ಸುಡುವುದರಿಂದ ಬರುವ ಹೊಗೆಯಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣ ಆಗುತ್ತಿದೆ. ಅಸ್ತಮಾ ಮತ್ತು ಶ್ವಾಸಕೋಶ ಕಾಯಿಲೆ ಇರುವ ರೋಗಿಗಳಿಗೆ ಕಂಟಕ ಎದುರಾಗಿದೆ.
ಚಿಂತಾಮಣಿ ರಸ್ತೆಯಲ್ಲಿ ತಾಲ್ಲೂಕಿನ ಗಡಿಯುದ್ದಕ್ಕೂ ಕಸದ ಸಮಸ್ಯೆ ದಿನೇದಿನೇ ಹಚ್ಚಾಗುತ್ತಿದೆ. ಮುಖ್ಯವಾಗಿ ತಾಲ್ಲೂಕಿನ ಪ್ರಮುಖ ಕೈಗಾರಿಕಾ ಪ್ರದೇಶವಾದ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ಬದಿ ಕಸ ಸುರಿಯುವ ಜಾಗವಾಗಿ ಪರಿಣಮಿಸಿದೆ. ಅಲ್ಲದೆ ತಾಲ್ಲೂಕಿನಾದ್ಯಂತ ಇರುವ ಕೈಗಾರಿಕಾ ಪ್ರದೇಶಗಳಲ್ಲಿ ಸೂಕ್ತವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಕೈಗಾರಿಕೆಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸೂಲಿಬೆಲೆ ರಸ್ತೆಯ ಚಿಕ್ಕ ಕೆರೆ ಕಟ್ಟೆ, ಕುಂಬಳಹಳ್ಳಿಗೆ ಹಾದು ಹೋಗುವ ಚಿಕ್ಕಕೆರೆ ಮದ್ಯದ ರಸ್ತೆಗಳು ಕಸವನ್ನು ಸುರಿಯುವವರಿಗೆ ಹಾಟ್ ಪೇವರೀಟ್ ಸ್ಥಳ. ಅಲ್ಲದೆ ಬೆಂಗಳೂರಿಗೆ ಹಾದು ಹೋಗುವ ರಸ್ತೆಯನ್ನೂ ಬಿಟ್ಟಿಲ್ಲ. ವಿವಿಧ ಭಾಗಗಳಿಂದ ಬೆಂಗಳೂರು ನಗರಕ್ಕೆ ಬರುವ ಜನರಿಗೆ ಸ್ವಾಗತ ಕೋರುವಂತಿದೆ. ಈ ಸಮಸ್ಯೆ ನಗರಕ್ಕೆ ಬರುವ ಪ್ರವಾಸಿಗರಿಗೆ ಕೆಟ್ಟ ಅನುಭವ ನೀಡುತ್ತಿದೆ. ಹೊರರಾಜ್ಯದಿಂದ ಬೆಂಗಳೂರಿಗೆ ಬರುವವರಿಗೆ ಹೊಸಕೋಟೆ ಹೆಬ್ಬಾಗಿಲಿನಂತೆ.ಆದ್ದರಿಂದ ಹೊಸಕೋಟೆ ಮತ್ತು ಹೆದ್ದಾರಿ ಇಕ್ಕೆಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.