
ಬೆಂಗಳೂರು: ಈ ಬಾರಿ ಪೂರ್ವ ಮುಂಗಾರು ತುಸು ಬಿರುಸಾಗಿದ್ದು, ಮಳೆ-ಗಾಳಿಯ ಅಬ್ಬರಕ್ಕೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ (ಬೆಸ್ಕಾಂ) ಏಪ್ರಿಲ್ ಒಂದೇ ತಿಂಗಳಲ್ಲಿ ₹2.99 ಕೋಟಿ ನಷ್ಟವಾಗಿದೆ.

j3tvkannada
ಈ ಬಾರಿ ಮಾರ್ಚ್ ತಿಂಗಳಿಂದ ಪೂರ್ವ ಮುಂಗಾರು ಆರಂಭವಾಯಿತು. ಮಧ್ಯೆ ಮಧ್ಯೆ ವಾಯುಭಾರ ಕುಸಿತವೂ ಸೇರಿಕೊಂಡು, ಮಳೆಗಿಂತ ಹೆಚ್ಚಾಗಿ ಬಿರುಸಾದ ಗಾಳಿ ಬೀಸಿದೆ. ಬಿರುಗಾಳಿಯಿಂದಲೇ ನೂರಾರು ಕಂಬಗಳು ಧರೆಗುರುಳಿವೆ. ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. 4.41 ಕಿ.ಮೀ ಉದ್ದದಷ್ಟು ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಕೆಲವು ಕಡೆ ವಿದ್ಯುತ್ ಅವಘಡಗಳು ಸಂಭವಿಸಿವೆ.
ಮಳೆ ಗಾಳಿಯಿಂದಾಗಿ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ 1,880 ವಿದ್ಯುತ್ ಕಂಬಗಳು ಧರೆಗುರುಳಿವೆ. ತುಮಕೂರು ಜಿಲ್ಲೆಯಲ್ಲಿ 650 ಕಂಬಗಳಿಗೆ ಹಾನಿಯಗಿದ್ದು, ಇದು ಎಂಟು ಜಿಲ್ಲೆಗಳ ಪೈಕಿ ಅತಿ ಹೆಚ್ಚು ಹಾನಿ ಸಂಭವಿಸಿದ ಜಿಲ್ಲೆಯಾಗಿದೆ. ಜಿಲ್ಲೆಯ ತುಮಕೂರು, ಗುಬ್ಬಿ ಮತ್ತು ತುರುವೇಕರೆ ತಾಲ್ಲೂಕುಗಳಲ್ಲಿ ಹೆಚ್ಚು ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ದಾವಣಗೆರೆ ಜಿಲ್ಲೆಯಲ್ಲಿ ಮಳೆಗಿಂತ ಹೆಚ್ಚು ಗಾಳಿ ಬೀಸಿದೆ. ಇದರಿಂದ 542 ಕಂಬಗಳಿಗೆ ಹಾನಿಯಾಗಿದೆ. ರಾಮನಗರದಲ್ಲಿ ಗಾಳಿ ಮತ್ತು ಮಳೆ ಎರಡೂ ಸೇರಿಕೊಂಡು, 256 ಕಂಬಗಳಿಗೆ ಹಾನಿ ಮಾಡಿದೆ. ಬೆಂಗಳೂರು ನಗರ ಜಿಲ್ಲೆ, ದಾವಣಗೆರೆ ಮತ್ತು ರಾಮನಗರ ಜಿಲ್ಲೆಗಳಲ್ಲಿ ₹50 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹಾನಿ ಪ್ರಮಾಣ ಕಡಿಮೆ ಎಂದು ಬೆಸ್ಕಾಂ ನೀಡಿರುವ ದಾಖಲೆಗಳಲ್ಲಿ ಉಲ್ಲೇಖವಾಗಿದೆ.
ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 51 ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿವೆ. ಇದರೊಂದಿಗೆ ಎಂಟು ಜಿಲ್ಲೆಗಳಲ್ಲಿ ₹1.50 ಕೋಟಿ ವೆಚ್ಚದ 150ಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳು ಹಾನಿಗೊಳಗಾಗಿವೆ. 84 ಡಿಪಿ ಸ್ಟ್ರಕ್ಟರ್ಗಳು ಹಾಳಾಗಿವೆ. ಪರಿಕರಗಳ ಬದಲಾವಣೆಗಾಗಿ ₹2.54 ಕೋಟಿ ಹಾಗೂ ದುರಸ್ತಿಗಾಗಿ (ಕಾರ್ಮಿಕರ ವೆಚ್ಚ) ₹44 ಲಕ್ಷದಷ್ಟು ವೆಚ್ಚ ಮಾಡಲಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಹಾನಿಗೊಳಗಾದ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಪರಿವರ್ತಕಗಳನ್ನು ಆಗಾಗ್ಗೆ ಬದಲಿಸಲಾಗಿದೆ. ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.