
ಚಾಮರಾಜನಗರ: ಈ ಬಾರಿ ವರುಣ ಕೃಪೆ ತೋರಿ ಮಳೆ ಸುರಿಸಿದ್ದರಿಂದ ಬಂಡೀಪುರದಲ್ಲಿ ಕಾಡ್ಗಿಚ್ಚಿನ ಭಯ ದೂರವಾಗಿದೆ. ಹಾಗೆಯೇ ಬಿಸಿಲಿಗೆ ಒಣಗಿದ್ದ ಅರಣ್ಯ ನಿಧಾನವಾಗಿ ಹಸಿರಿಗೆ ಮರಳುತ್ತಿದೆ. ಹೀಗಾಗಿ ನಿಸರ್ಗ ಪ್ರೇಮಿಗಳು ಬಂಡೀಪುರದ ಕಡೆಗೆ ಮುಖ ಮಾಡಿದ್ದು, ಸಫಾರಿಗೆ ಮುಗಿ ಬೀಳುತ್ತಿದ್ದಾರೆ. ಸಕಾಲದಲ್ಲಿ ಮಳೆ ಸುರಿದ ಕಾರಣದಿಂದಾಗಿ ನೀರು ಮತ್ತು ಮೇವನ್ನು ಅರಸಿಕೊಂಡು ವನ್ಯಪ್ರಾಣಿಗಳು ದೂರ ಸರಿಯದ ಕಾರಣದಿಂದಾಗಿ ಒಂದಷ್ಟು ಪ್ರಾಣಿಗಳು ಸಫಾರಿಗೆ ತೆರಳುವವರ ಮೊಬೈಲ್ ಮತ್ತು ಕ್ಯಾಮರಾಗಳಲ್ಲಿ ಸೆರೆಯಾಗುತ್ತಿವೆ.
ಇನ್ನೊಂದಷ್ಟು ದಿನ ಕಳೆದರೆ ಮುಂಗಾರು ಆರಂಭವಾಗಲಿದ್ದು, ಈ ಬಾರಿ ಪೂರ್ವ ಮುಂಗಾರು ಚೆನ್ನಾಗಿಯೇ ಸುರಿದಿದೆ. ಪರಿಣಾಮ ನೀರು ಮತ್ತು ಮೇವಿಗೆ ವನ್ಯಪ್ರಾಣಿಗಳಿಗೆ ತೊಂದರೆಯಾಗಲಿಲ್ಲ. ಜತೆಗೆ ಕಾಡ್ಗಿಚ್ಚಿನ ಭಯದಲ್ಲಿದ್ದ ಅರಣ್ಯ ಇಲಾಖೆ ಸ್ವಲ್ಪ ಮಟ್ಟಿಗೆ ನಿರಾಳವಾಗಿದೆ. ಈಗೀಗ ಮಳೆ ಸುರಿದ ಮಾರನೆಯ ದಿನ ಬಂಡೀಪುರ ಅರಣ್ಯದಲ್ಲಿ ಸಫಾರಿ ಮಾಡುವುದು ಪ್ರಾಣಿ ಪ್ರಿಯರಿಗೆ ಮಜಾ ನೀಡುತ್ತಿದೆ. ಏಕೆಂದರೆ ಇಲ್ಲಿನ ಸುಂದರತೆಯೇ ಹಾಗಿದೆ. ವನಸಿರಿಯಲ್ಲಿ ವಿಹರಿಸಿದರೆ ನಮ್ಮೆಲ್ಲರ ನೋವು ಮರೆಯಾಗುವುದಲ್ಲದೆ ಮನಸ್ಸಿಗೆ ಉಲ್ಲಾಸ ತುಂಬುತ್ತದೆ.

j3tvkannada
ಇಲ್ಲಿನ ಅರಣ್ಯದತ್ತ ಕಣ್ಣು ಹಾಯಿಸುತ್ತಾ ಹೋದರೆ ಹಸಿರು ತುಂಬಿದ ನಿಸರ್ಗ. ಅದರೊಳಗೆ ಓಡಾಡುವ ಕಾಡಾನೆಗಳು, ಬೇಟೆಯ ಮೂಡ್ ನಲ್ಲಿರುವ ಹುಲಿಗಳು, ಜಿಂಕೆ, ಸಾರಂಗಗಳು, ಹಕ್ಕಿಗಳ ಕಲರವ, ಜೇನಿನ ಝೇಂಕಾರ ಎಲ್ಲವೂ ಕಣ್ಮುಂದೆ ಹಾದು ಹೋಗುತ್ತವೆ. ಈ ಬಾರಿ ಸುರಿದ ಮಳೆ ಅರಣ್ಯಕ್ಕೆ ಜೀವ ತಂದಿದೆ. ಜತೆಗೆ ಬಂಡೀಪುರದ ನಡುವೆಯಿರುವ ನೀರಿನ ಸೆಲೆಗಳಾದ ಕೆರೆಕಟ್ಟೆಗಳು ಆರದಂತೆ ನೋಡಿಕೊಂಡಿವೆ. ಹೀಗಾಗಿ ಕಾಡು ಪ್ರಾಣಿಗಳು ನೆಮ್ಮದಿಯಾಗಿವೆ ಅವುಗಳು ಎಲ್ಲೆಂದರಲ್ಲಿ ಸಿಗುತ್ತಿರುವುದರಿಂದ ಸಫಾರಿಗೆ ತೆರಳುವವರಿಗೂ ಖುಷಿ ಕೊಡುತ್ತಿವೆ.
ಬಂಡೀಪುರ ಹುಲಿಗಳ ವಾಸ ಸ್ಥಾನ. ಇವುಗಳನ್ನು ಹೊರತು ಪಡಿಸಿದರೆ ಕಾಡಾನೆ, ಕಾಡು ಕೋಣ, ಜಿಂಕೆ, ಸಾರಂಗಗಳು, ಕರಡಿ ಸೇರಿದಂತೆ ಹಲವು ಪ್ರಾಣಿಗಳು, ಪಕ್ಷಿಗಳು ಇಲ್ಲಿ ಕಾಣಲು ಸಿಗುತ್ತವೆ. ಅಷ್ಟೇ ಅಲ್ಲದೆ ಅವು ಸ್ವಚ್ಚಂದವಾಗಿ ಓಡಾಡುತ್ತಾ ನೋಡುಗರನ್ನು ರೋಮಾಂಚನಗೊಳಿಸುತ್ತವೆ. ಸಾಮಾನ್ಯವಾಗಿ ಮಳೆಗಾಲದ ನಂತರ ಇಲ್ಲಿ ಹಲವು ಬಗೆಯ ಪ್ರಾಣಿಗಳು ಕಾಣಸಿಗುತ್ತವೆ. ಸಸ್ಯಹಾರಿಗಳಿಂದ ಹಿಡಿದು ಮಾಂಸ ಹಾರಿ ಪ್ರಾಣಿಗಳ ತನಕ ಎಲ್ಲ ರೀತಿಯ ಪ್ರಾಣಿ ಪಕ್ಷಿಗಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುತ್ತವೆ. ಮುಂಜಾನೆಯ ಚುಮುಚುಮು ಚಳಿಯಲ್ಲಿ ಹಿಮದ ಹಾದಿಯಲ್ಲಿ ಸಾಗುವಾಗ ಗಿಡಮರಗಳ ನಡುವೆ ಹಾದು ಹೋಗುವ ಪ್ರಾಣಿಗಳನ್ನು ನೋಡುವುದೇ ಒಂದು ರೀತಿಯ ಮಜಾ. ಅದರಲ್ಲೂ ಪಕ್ಷಿಗಳ ಕಲರವ, ಜೇನಿನ ಝೇಂಕಾರ, ಮೂಗಿಗೆ ರಾಚುವ ಕಾನನದ ಕುಸುಮಗಳ ಸುವಾಸನೆ ಹೊಸದಾದ ಲೋಕವೊಂದನ್ನು ತಮ್ಮ ಮುಂದೆ ತೆರೆದಿಡುತ್ತದೆ.

j3tvkannada
ಇಷ್ಟೇ ಅಲ್ಲದೆ ಅರಣ್ಯದ ನಡುವೆ ಮತ್ತು ಅರಣ್ಯಕ್ಕೆ ಒತ್ತಿಕೊಂಡಂತೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಜಿನ ಪರದೆಯನ್ನು ಸರಿಸಿಕೊಂಡು ಸಾಗುವಾಗ ಆಗುವ ಆನಂದ ಹೇಳತೀರದ್ದಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವು ದೇಶದ ಪ್ರತಿಷ್ಠಿತ ತಾಣಗಳಲ್ಲೊಂದಾಗಿದ್ದು, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳಿಗೆ ಹೊಂದಿಕೊಂಡಂತಿದ್ದು, ಹುಲಿ ಸಂರಕ್ಷಿತ ಅಭಯಾರಣ್ಯವಾಗಿರುವುದರಿಂದ ಹುಲಿಗಳನ್ನು ನೋಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹಾಗೆ ಬರುವ ಪ್ರವಾಸಿಗರು ಸಫಾರಿಯಲ್ಲಿ ತೆರಳಿ ಹುಲಿಗಳನ್ನು ಹತ್ತಿರದಿಂದ ನೋಡಿ ಖುಷಿಪಡುತ್ತಾರೆ. ಬಂಡೀಪುರವು ರಾಜ್ಯದ ಸಂಪರ್ಕ ಸೇತುವಾಗಿದ್ದು, ದಕ್ಷಿಣಕ್ಕೆ ತಮಿಳುನಾಡು ಮತ್ತು ಪಶ್ಚಿಮಕ್ಕೆ ಕೇರಳದ ಅರಣ್ಯ ಪ್ರದೇಶಗಳೊಂದಿಗೆ ವಿಲೀನಗೊಂಡಿದೆ.

j3tvkannada
ಇಲ್ಲಿ ಎಲೆ ಉದುರುವ ಹಾಗೂ ಕುರುಚಲು ಸಸ್ಯ ಪ್ರಭೇದಗಳು ಹೆಚ್ಚಾಗಿರುವುದರಿಂದ ಎಲ್ಲ ಸಮಯದಲ್ಲಿಯೂ ಇಲ್ಲಿ ಹಸಿರನ್ನು ನಿರೀಕ್ಷೆ ಮಾಡುವಂತಿಲ್ಲ. ಆದರೆ ಇದೀಗ ಮಳೆಗಾಲ ಕಳೆದಿದ್ದರಿಂದಾಗಿ ಎಲ್ಲಿ ನೋಡಿದರಲ್ಲಿ ಹಸಿರ ರಾಶಿ ಕಂಗೊಳಿಸುತ್ತಿದೆ. ಹಾಗಾಗಿ ಈ ಸಮಯವನ್ನು ಕಳೆದುಕೊಂಡರೆ ಮತ್ತೆ ಸದ್ಯಕ್ಕೆ ಇಂತಹ ಸುಂದರ ವಾತಾವರಣ, ನಿಸರ್ಗದ ಚೆಲುವು, ವನ್ಯಪ್ರಾಣಿಗಳ ದರ್ಶನವನ್ನು ಇಷ್ಟು ಸುಲಭವಾಗಿ ಪಡೆಯುವುದು ಕಷ್ಟವೇ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಉತ್ತಮ ಮಳೆಯಾಗದೆ ಗಿಡಮರಗಳು ಒಣಗುವುದು, ನೀರಿನ ಸೆಲೆ ಬರಿದಾಗುವುದು, ಪ್ರಾಣಿಗಳು ನೀರು ಅರಸಿಕೊಂಡು ದೂರ ಹೋಗುವುದು ಹೀಗೆ ಸಮಸ್ಯೆಗಳಾಗುತ್ತಿದ್ದವು. ಆದರೆ ದೇವರ ದಯೆಯಿಂದ ಕಳೆದ ಕೆಲವು ವರ್ಷಗಳಿಂದ ಬಂಡೀಪುರದಲ್ಲಿ ಕಾಡ್ಗಿಚ್ಚು ಕಡಿಮೆಯಾಗಿದೆ.
ಮೊದಲೆಲ್ಲ ಸಮರ್ಪಕವಾಗಿ ಮಳೆಯಾಗದ ಕಾರಣದಿಂದಾಗಿ ಕೆರೆಕಟ್ಟೆಗಳು ಭರ್ತಿಯಾಗುತ್ತಿರಲಿಲ್ಲ. ಪ್ರಾಣಿಗಳಿಗೆ ಹಸಿರು ಮೇವಿಗೂ ತೊಂದರೆಯಾಗಿತ್ತು. ಜತೆಗೆ ಬೇಸಿಗೆಯಲ್ಲಿ ಬಿದ್ದ ಕಾಡ್ಗಿಚ್ಚು ವನ್ಯ ಪ್ರಾಣಿಗಳನ್ನು ಇನ್ನಿಲ್ಲದಂತೆ ಕಾಡಿತ್ತು. ಆದರೆ ಇತ್ತೀಚೆಗೆ ವರುಣ ಕೃಪೆ ತೋರಿರುವುದರಿಂದ ಅರಣ್ಯ ಹಸಿರಾಗಿದೆ. ಮುಂದಿನ ದಿನಗಳಲ್ಲಿ ಮಳೆ ಸಮರ್ಪಕವಾಗಿ ಆಗಿದ್ದೇ ಆದರೆ ಬಂಡೀಪುರದ ಸುಂದರತೆ ಇನ್ನಷ್ಟು ಹೆಚ್ಚಲಿದ್ದು, ಇಲ್ಲಿನ ಸುಂದರ ದೃಶ್ಯಗಳನ್ನು ನೋಡಿದವರು ಮತ್ತು ಅರಣ್ಯದಲ್ಲಿ ರಸಮಯ ಕ್ಷಣಗಳನ್ನು ಕಳೆದವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿರುವುದರಿಂದಾಗಿ ಜನ ಆಕರ್ಷಣೆಗೊಂಡು ಇತ್ತ ಬರುತ್ತಿದ್ದಾರೆ. ಇವರ ಪೈಕಿ ವಿದೇಶಿಗರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿರುವುದು ಖುಷಿ ಕೊಡುವ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದೆ.