
ಬೆಂಗಳೂರು ಗ್ರಾಮಾಂತರ: ಸುಮಾರು 6 ತಿಂಗಳ ಬಳಿಕ ಬೆಂಗಳೂರು ನಗರವನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯೊಂದರ ವಿಸ್ತರಣೆ ಕಾರ್ಯ ಮತ್ತೆ ಆರಂಭವಾಗಿದೆ. ಸುಮಾರು 2 ಸಾವಿರ ಕೋಟಿ ರೂ.ಗಳ ಕಾಮಗಾರಿ ಇದಾಗಿದ್ದು, 2025ರ ಡಿಸೆಂಬರ್ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಈ ಕಾಮಗಾರಿ ಬಳಿಕ ಬೆಂಗಳೂರು ನಗರಕಕ್ಕೆ ಬರುವ ಮತ್ತು ಹೊರ ಹೋಗುವ ವಾಹನಗಳಿಂದ ಉಂಟಾಗುವ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ. ಬೆಂಗಳೂರು ನಗರದ ಹೊರವಲಯದ ನೆಲಮಂಗಲದಿಂದ ತುಮಕೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥದಿಂದ 10 ಪಥಕ್ಕೆ ವಿಸ್ತರಿಸುವ ಯೋಜನೆಯಾಗಿದೆ.

ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ (ಎನ್ಹೆಚ್-48) ಇದಾಗಿದ್ದು, ಸದಾಕಾಲ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ವಾರಾಂತ್ಯ ಮತ್ತು ಸಾಲು ಸಾಲು ರಜೆಗಳ ಸಂದರ್ಭದಲ್ಲಿ ಬೆಂಗಳೂರು ನಗರದಿಂದ ತುಮಕೂರು ತಲುಪುವುದು ಬಹಳ ಕಷ್ಟಕರವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಹೆಚ್ಎಐ) 2022ರಲ್ಲಿ ನೆಲಮಂಗಲ-ತುಮಕೂರು ನಡುವಿನ 44 ಕಿ. ಮೀ. ರಸ್ತೆ ವಿಸ್ತರಣೆ ಕಾರ್ಯ ಕೈಗೊಂಡಿತು. ಸರ್ವೀಸ್ ರಸ್ತೆಗಳನ್ನು ನಿರ್ಮಾಣ ಮಾಡುವ ಮೂಲಕ ಈ ಹೆದ್ದಾರಿಯನ್ನು ಆಕ್ಸೆಸ್ ಕಂಟ್ರೋಲ್ ಹೆದ್ದಾರಿಯಾಗಿ ಪರಿವರ್ತಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನೆಲಮಂಗಲ-ತುಮಕೂರು ರಸ್ತೆ ವಿಸ್ತರಣೆ ಕಾಮಗಾರಿ ಅಂದುಕೊಂಡ ವೇಗದಲ್ಲಿ ಸಾಗಲಿಲ್ಲ. ಅದಕ್ಕೆ ಪ್ರಮುಖ ಕಾರಣ ಭೂ ಸ್ವಾಧೀನ. 35 ಕಡೆಗಳಲ್ಲಿ ಭೂಮಿ ಗುರುತು ಮಾಡಿರಲಿಲ್ಲ.
ಹಲವು ಕಡೆ ಭೂ ಮಾಲೀಕರಿಗೆ ಪರಿಹಾರ ನೀಡಿರಲಿಲ್ಲ. ಹಲವು ಕಡೆ ಭೂಮಿಯನ್ನು ಗುರುತಿಸಿ ಮಾಲೀಕರಿಗೆ ನೋಟಿಸ್ ನೀಡಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಕಳೆದ ಆರು ತಿಂಗಳಿನಿಂದ ರಸ್ತೆ ವಿಸ್ತರಣೆ ಕಾರ್ಯ ಸ್ಥಗಿತಗೊಂಡಿತ್ತು. ನೆಲಮಂಗಲ-ತುಮಕೂರು ನಡುವೆ ಈಗ ಇರುವ 4 ಪಥದ ರಸ್ತೆಯನ್ನು 6 ಪಥವಾಗಿ ವಿಸ್ತರಣೆ ಮಾಡುವುದು, ಎರಡು ಬದಿಯಲ್ಲಿ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಿ ಒಟ್ಟು 10 ಪಥದ ರಸ್ತೆ ಮಾಡುವುದು ಯೋಜನೆಯಾಗಿದೆ. ಆದರೆ ಭೂ ಸ್ವಾಧೀನ ವಿಳಂಬವಾಯಿತು. ಈಗ ರಾಜ್ಯ ಸರ್ಕಾರ, ಎನ್.ಹೆಚ್.ಎ.ಐ ಮಧ್ಯ ಪ್ರವೇಶದ ಕಾರಣ 25 ಸ್ಥಳಗಳ ಸ್ವಾಧೀನ ಕಾರ್ಯ ಪೂರ್ಣಗೊಂಡಿದೆ.

j3tvkannada
ರಸ್ತೆ ವಿಸ್ತರಣೆ ಗುತ್ತಿಗೆ ಪಡೆದವರು ಯಂತ್ರಗಳ ಜೊತೆ ಕೆಲಸ ಮಾಡಲು ತಯಾರಿದ್ದಾರೆ. ಆದರೆ ಭೂ ಸ್ವಾಧೀನದ ವಿಚಾರ ಅಂತಿಮವಾಗಬೇಕಿದೆ. ಸದ್ಯ ಬಾಕಿ ಇರುವ ಭೂ ಸ್ವಾಧೀನವನ್ನು 45 ದಿನದಲ್ಲಿ ಅಂತಿಮಗೊಳಿಸಲಾಗುತ್ತದೆ ಎಂದು ಎನ್ಹೆಚ್ಎಐ ಅಧಿಕಾರಿಗಳು ಹೇಳಿದ್ದಾರೆ. 2025ರ ಡಿಸೆಂಬರ್ಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ ವಿವಿಧ ಕಾರಣಕ್ಕೆ ಈ ಕಾಮಗಾರಿ ಇನ್ನೂ ವಿಳಂಬವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನೆಲಮಂಗಲ-ತುಮಕೂರು ರಸ್ತೆ ವಿಸ್ತರಣೆಯ ಮೊದಲ ಹಂತ ಶೇ 52ರಷ್ಟು ಪೂರ್ಣಗೊಂಡಿದೆ.
ಇದರಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಪ್ರಮುಖವಾಗಿದೆ. 2ನೇ ಹಂತದಲ್ಲಿ ಮುಖ್ಯ ರಸ್ತೆಯ ನಿರ್ಮಾಣ ಕಾರ್ಯ ನಡೆಯಲಿದೆ. ಈ ಕಾಮಗಾರಿ ಕೆಲವು ದಿನಗಳ ಹಿಂದೆ ಪ್ರಾರಂಭವಾಗಿದ್ದು, ಇದಕ್ಕೆ ಸುಮಾರು 2032 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ರಸ್ತೆಯಲ್ಲಿರುವ 13 ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಇವುಗಳನ್ನು ಸರಿಪಡಿಸಬೇಕು ಎಂದು ಕರ್ನಾಟಕ ಸರ್ಕಾರ ಎನ್.ಹೆಚ್.ಎಐಗೆ ಸೂಚನೆ ನೀಡಿದೆ.

j3tvkananda
ಕೆಲವು ದಿನಗಳ ಹಿಂದೆ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣ ಅಧಿಕಾರಿಗಳ ಜೊತೆಗ ರಸ್ತೆ ವಿಸ್ತರಣೆ ಯೋಜನೆ ಪರಿಶೀಲನೆ ನಡೆಸಿದ್ದರು.
ಭೂ ಸ್ವಾಧೀನದ ಗೊಂದಲ ಬಗೆ ಹರಿಸಿ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದರು. ನೆಲಮಂಗಲ-ತುಮಕೂರು ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬವಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಒಪ್ಪಿಕೊಂಡಿದ್ದಾರೆ. ಅವರು ಮಾತನಾಡಿ, ನಾನೇ ಖುದ್ದಾಗಿ ಈ ಯೋಜನೆಯ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾಗಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದು, ಅವರು ಒಪ್ಪಿಕೊಂಡಿದ್ದಾರೆ. ಗುತ್ತಿಗೆದಾರ ಸಹ ಕೆಲಸ ಮುಂದುವರೆಸಲು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.