
ಶಿವಮೊಗ್ಗ: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಅದನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

j3tvkannada
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಪ್ರತಿಭಟನಾ ಸಭೆ ಆಯೋಜಿಸಿದ್ದು, ಬಾಲರಾಜ್ ಅರಸ್ ರಸ್ತೆಯ ಮಹಾವೀರ ಸರ್ಕಲ್ ನಿಂದ ಶಿವಮೂರ್ತಿ ರಸ್ತೆಯವರೆಗೆ ಭಾರೀ ಸಂಖ್ಯೆಯಲ್ಲಿ ಸಮುದಾಯದವರು ಜಮಾಯಿಸಿದ್ದಾರೆ.ತ್ರಿವರ್ಣ ಧ್ವಜ ಹಿಡಿದು ನೆರೆದಿರುವ ಮುಸ್ಲಿಂ ಸಮಾಜದವರು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ್ ಕಾಯ್ದೆ ಲೋಪದೋಷಗಳಿಂದ ಕೂಡಿದೆ. ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೂ ಅವಕಾಶ ಕೊಡುವುದಕ್ಕೆ ನಮ್ಮ ಪ್ರಬಲ ವಿರೋಧವಿದೆ. ನಮ್ಮ ಆಸ್ತಿ ಲೂಟಿಗೆ ಬಿಜೆಪಿ ಸಂಚು ಮಾಡಿದೆ. ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಲಾಗಿದೆ ಎಂದು ಕೇಂದ್ರ ಘೋಷಣೆ ಮಾಡುವ ತನಕ ಹೋರಾಟ ಮುಂದುವರೆಸಲಿದ್ದೇವೆ ಎಂದರು.
ಪ್ರತಿಭಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸರ ನಿಯೋಜಿಸಿದ್ದು, ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಗೋಪಿ ವೃತ್ತದಿಂದ ಬಾಲರಾಜ ಅರಸ್ ರಸ್ತೆ, ಆರ್.ಟಿ.ಒ ಕಚೇರಿ ರಸ್ತೆ, ದುರ್ಗಿಗುಡಿಯ ರಾಘವೇಂದ್ರ ಮಠದ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಪೊಲೀಸರು ವಾಹನ ಸಂಚಾರ ಬಂದ್ ಮಾಡಿದ್ದಾರೆ.
ಹೆಣ್ಣು ಮಕ್ಕಳು, ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮ್ ಸಮುದಾಯದವರು ಪ್ರತಿಭಟನಾ ಸ್ಥಳದಲ್ಲಿ ನೆರೆದಿದ್ದಾರೆ.