
ಗದಗ: ಕಡಿಮೆ ನೀರಿನ ಲಭ್ಯತೆ ಮತ್ತು ಒಣಹವೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವ ರೋಣ ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆಯ ಪ್ರಮಾಣ ಅತ್ಯಂತ ಕಡಿಮೆ ಇದೆ. ಇಂತಹ ಪರಿಸ್ಥಿತಿಯಲ್ಲಿಯೂ ವೈಜ್ಞಾನಿಕ ಪದ್ಧತಿಯಲ್ಲಿ ದಾಳಿಂಬೆ ಕೃಷಿ ಮಾಡುವ ಮೂಲಕ ರೋಣ ಪಟ್ಟಣದ ರೈತ ಶಿವಾನಂದಪ್ಪ ಗಡಗಿ ಗಮನ ಸೆಳೆದಿದ್ದಾರೆ. ದಾಳಿಂಬೆ ಎಂದಾಕ್ಷಣ ಬೆಳೆಗಾರರಲ್ಲಿ ಅಧಿಕ ರೋಗ ಮತ್ತು ಕೀಟ ಬಾಧೆಯ ಭೀತಿ ಶುರುವಾಗುತ್ತದೆ. ಶಿವಾನಂದಪ್ಪ ಅವರು ಅವೆಲ್ಲವನ್ನೂ ಮೀರಿ ಐದು ಎಕರೆ ಜಮೀನಿನಲ್ಲಿ ವಿಜಯಪುರ ಜಿಲ್ಲೆಯ ತಿಕೋಟಾದಿಂದ 2,000 ದಾಳಿಂಬೆ ಸಸಿಗಳನ್ನು ತಂದು ನಾಟಿ ಮಾಡಿ ಉತ್ತಮ ಬೆಳೆ ಬೆಳೆದಿದ್ದಾರೆ.

j3tvkannada
ಪ್ರಮುಖವಾಗಿ ಅಕಾಲಿಕವಾಗಿ ಸುರಿಯುವ ಮಳೆಯಿಂದ ದಾಳಿಂಬೆ ಗಿಡಗಳಲ್ಲಿ ಕಂಡು ಬರುವ ನಂಜು ರೋಗ ನಿರ್ಮೂಲನೆಗೆ ಇವರು ಗಿಡಗಳ ಬುಡದಲ್ಲಿ ಎರಡು ಅಡಿ ಎತ್ತರ, ಮೂರು ಅಗಲ ಅಡಿ ಬೆಡ್ ನಿರ್ಮಿಸಿ ಮಲ್ಟಿಂಗ್ ಹೊದಿಕೆ ಹಾಕುವ ಮೂಲಕ ಅಧಿಕ ತೇವಾಂಶ ತಡೆಗಟ್ಟಿದ್ದಾರೆ. ಜತೆಗೆ ಗಿಡಗಳಿಗೆ ಬೇಕಾಗುಷ್ಟು ತೇವಾಂಶ ಬಹಳ ಸಮಯದವರೆಗೆ ಇರುವಂತೆ ವ್ಯವಸ್ಥೆ ಕಲ್ಪಿಸಿ ನಂಜು ರೋಗ ಬಾಧಿಸದಂತೆ ಗಿಡಗಳ ಆರೈಕೆ ಮಾಡಿದ್ದಾರೆ. ಇದರಿಂದಾಗಿ ಗಿಡಗಳು ಸಮೃದ್ಧವಾಗಿ ಬೆಳೆದು ಸಾಕಷ್ಟು ಹೂ ಮತ್ತು ಕಾಯಿ ಕಚ್ಚಿವೆ. ತೋಟಗಾರಿಕೆ ಬೆಳೆಗಳಿಗೆ ಪಕ್ಷಿಗಳ ಕಾಟ ಸಾಮಾನ್ಯ.
ಪಕ್ಷಿಗಳ ಕುಕ್ಕುವಿಕೆಯಿಂದ ಹಣ್ಣು ಕೆಡುವ ಸಾಧ್ಯತೆಯಿದ್ದು ಬೆಲೆ ಕಳೆದುಕೊಳ್ಳುತ್ತದೆ. ಹಾಗಾಗಿ ಇದನ್ನು ನಿಯಂತ್ರಣ ಮಾಡಲು ಎಂಟು ಅಡಿ ಎತ್ತರದಲ್ಲಿ ತೋಟದಾದ್ಯಂತ ಪಕ್ಷಿ ಬಲೆ ಹಾಕಿಸಿ, ದಾಳಿಂಬೆ ಬೆಳೆ ರಕ್ಷಿಸಲಾಗುತ್ತಿದೆ. ಜತೆಗೆ ಬೇಸಿಗೆ ಸಂದರ್ಭದಲ್ಲಿ ಸೂರ್ಯನ ಶಾಖ ನೇರವಾಗಿ ಗಿಡದ ಮೇಲೆ ಬೀಳುವುದರಿಂದ ಅಧಿಕ ತಾಪಮಾನ ಉಂಟಾಗಿ ಹಣ್ಣಿನ ಬಣ್ಣ ಕಡುಗೆಂಪಿನಿಂದ ಬಿಳಿ ವರ್ಣಕ್ಕೆ ಬದಲಾಗುವ ಸಾಧ್ಯತೆ ಹಾಗೂ ಹಣ್ಣಿನ ತೊಗಟೆಯ ಮೇಲೆ ಬಿರುಕು ಉಂಟಾಗುವ ಸಾಧ್ಯತೆ ಹೆಚ್ಚು.
ಇದರಿಂದಲೂ ಹಣ್ಣಿನ ಮೌಲ್ಯ ಹಾಗೂ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದರಿಂದ ರಕ್ಷಣೆ ಪಡೆಯಲು ಗ್ಲಕವರ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಹಣ್ಣುಗಳ ಗುಣಮಟ್ಟ ಚೆನ್ನಾಗಿದ್ದು ಪ್ರತಿ ಹಣ್ಣು 300 ರಿಂದ 400 ಗ್ರಾಂ ತೂಗುತ್ತಿವೆ. ಈ ವರ್ಷ 70 ಟನ್ ಇಳುವರಿ ಪಡೆಯುವ ನಿರೀಕ್ಷೆ ಇದ್ದು, ₹50 ಲಕ್ಷ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ರೋಣ ತಾಲ್ಲೂಕಿನ ಜಮೀನುಗಳು ತೋಟಗಾರಿಕೆ ಬೆಳೆಗಳಿಗೆ ಸೂಕ್ತವಾಗಿದ್ದು ಇಲಾಖೆ ಕೂಡ ತೋಟಗಾರಿಕಾ ಕ್ಷೇತ್ರ ವಿಸ್ತರಣೆಗೆ ಎಲ್ಲ ರೀತಿಯಲ್ಲಿ ಬೆಂಬಲ ನೀಡುತ್ತಿದೆ. ರೈತರು ಇದರ ಸದುಪಯೋಗ ಪಡೆಯಬೇಕು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.