
ತುಮಕೂರು: ನೆಲಮಂಗಲ ಮೂಲದ ಉದ್ಯಮಿ ದಿಲೀಪ್ಕುಮಾರ್ (32) ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು ಕೊಲೆಯಾದ 24 ಗಂಟೆಯ ಒಳಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ನೆಲಮಂಗಲ, ತುಮಕೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.

j3tvkannada
ನಗರದ ಜಯಪುರದ ವರುಣ್ (23), ದಿಟ್ಟೂರಿನ ಅರುಣ್ (21) ಮತ್ತು ಶ್ರೀನಿವಾಸ್ (20) ಬಂಧಿತರು. ಏ. 27ರಂದು ರಾತ್ರಿ ನೆಲಮಂಗಲದಲ್ಲಿ ದಿಲೀಪ್ಕುಮಾರ್ ಅವರನ್ನು ಅಪಹರಿಸಲಾಗಿತ್ತು. ಮಾರನೇ ದಿನ ಏ. 28ರಂದು ಬೆಳಿಗ್ಗೆ ಜಯಪುರದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು.ಜಯಪುರ ಮೂಲದ ಅಮೃತ ಅವರನ್ನು ಎರಡನೇ ಮದುವೆಯಾಗಿದ್ದರು. ಅಮೃತ ಅವರಿಗೆ ಈ ಹಿಂದೆ ದಿನೇಶ್ ಎಂಬವರ ಜತೆ ಮದುವೆಯಾಗಿತ್ತು. ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಬೇರೆಯಾಗಿದ್ದರು. ನಂತರ ದಿಲೀಪ್ರನ್ನು ಮದುವೆಯಾಗಿದ್ದರು.
ಅಮೃತ ಸೋದರ ಸಂಬಂಧಿ ವರುಣ್ಗೆ ಇದು ಇಷ್ಟವಿರಲಿಲ್ಲ. ಇದೇ ವಿಚಾರವಾಗಿ ಸ್ನೇಹಿತರ ಮಧ್ಯೆ ಆಗಾಗ ಗಲಾಟೆಯಾಗುತ್ತಿತ್ತು. ಅಮೃತ ಮತ್ತು ದಿಲೀಪ್ರಿಂದ ಮರ್ಯಾದೆ ಇಲ್ಲದಂತಾಗಿದೆ. ಏನಾದರೂ ಒಂದು ಗತಿ ಕಾಣಿಸಬೇಕು ಎಂದು ನಿರ್ಧರಿಸಿದ್ದರು. ಕಳೆದ ಕೆಲ ದಿನಗಳಿಂದ ದಿಲೀಪ್ ಮೇಲೆ ಕಣ್ಣಿಟ್ಟಿದ್ದರು. ಭಾನುವಾರ ಸಂಜೆ ಸ್ನೇಹಿತರ ಜತೆ ಸೇರಿ ದಿಲೀಪ್ರನ್ನು ಅಪಹರಣ ಮಾಡಿದ್ದರು.
ನೆಲಮಂಗಲದಿಂದ ತುಮಕೂರಿಗೆ ಬರುವ ದಾರಿ ಮಧ್ಯೆಯೇ ದಿಲೀಪ್ರನ್ನು ಕೊಲೆ ಮಾಡಿದ್ದರು. ಡ್ರಾಗರ್ನಿಂದ ತಲೆ, ಕುತ್ತಿಗೆ ಭಾಗಕ್ಕೆ ಚುಚ್ಚಿ ಹತ್ಯೆ ಮಾಡಿದ್ದರು. ಮೃತದೇಹವನ್ನು ಎಸೆದು ಪರಾರಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.