
ಬೆಂಗಳೂರು: ಬೆಳಗಾವಿಯಲ್ಲಿ ನಿನ್ನೆ ಕಾಂಗ್ರೆಸ್ ಸಮಾವೇಶದಲ್ಲಿ ಸಿ.ಎಂ ಸಿದ್ದರಾಮಯ್ಯ ಅವರು ಪೊಲೀಸ್ ಮೇಲೆ ತೋರಿದ ಪ್ರತಾಪವನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಅವರ ಮೇಲೆ ವಾಗ್ದಾಳಿ ಮುಂದುವರೆಸಿದೆ. ಎಎಸ್ಪಿ ಮೇಲೆ ಹಲ್ಲೆ ಮಾಡಲು ಮುಂದಾದ ನಿಮ್ಮ ಮೇಲೆ ರೌಡಿ ಶೀಟರ್ ಏಕೆ ತೆರೆಯಬಾರದು? ಎಂದು ಸಿದ್ದರಾಮಯ್ಯ ಅವರನ್ನು ನೇರವಾಗಿ ಕೆಣಕಿದೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಮುಖ್ಯಮಂತ್ರಿ ಕುರ್ಚಿಯ ವ್ಯಾಲಿಡಿಟಿ ಅಂತ್ಯವಾಗುವ ಸಮಯ ಸಮೀಪಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಅವರಿಗೆ ಹತಾಶೆ ಬಹುವಾಗಿ ಕಾಡುತ್ತಿದೆ.

ಸಾರ್ವಜನಿಕ ಜೀವನದಲ್ಲಿದ್ದೇನೆ ಎಂಬ ಪರಿಜ್ಞಾನವೂ ಇಲ್ಲವೆಂಬಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.ಮನೆಮಂದಿಯ ಮೇಲೆ ರೇಗಾಡುವ ಹಾಗೆ ಸರ್ಕಾರಿ ಅಧಿಕಾರಿಗಳ ಮೇಲೆ ರೇಗಾಡುತ್ತಿದ್ದಾರೆ, ಪೊಲೀಸ್ ಅಧಿಕಾರಿಯ ಮೇಲೆ ಕೈ ಎತ್ತುತ್ತಿದ್ದಾರೆ, ಮಹಿಳೆಯರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದೆ. ದರ್ಪದಿಂದ ಸರ್ಕಾರಿ ಅಧಿಕಾರಿಗಳೊಂದಿಗೆ ನಡೆದುಕೊಳ್ಳುತ್ತಿರುವುದು ಮುಖ್ಯಮಂತ್ರಿ ಕುರ್ಚಿಗೆ ಮಾಡುತ್ತಿರುವ ಅವಮಾನವಾಗಿದೆ. ಸಿಎಂ ಅವರೇ, ನಿಮ್ಮ ಗೂಂಡಾಗಿರಿಗೆ ಕೊನೆಯೆಂದು? ನಿಮ್ಮ ಮೇಲೆ ರೌಡಿ ಶೀಟರ್ ಏಕೆ ತೆರೆಯಬಾರದು? ಎಂದು ಪ್ರಶ್ನಿಸಿದೆ.