
ಬಳ್ಳಾರಿ: ಕನಿಷ್ಠ ಬೆಂಬಲ ಬೆಲೆಯಡಿ ಹಿಂಗಾರು ಜೋಳ ನೋಂದಣಿಗೆ ರಾಜ್ಯದಲ್ಲಿ 2 ದಿನಗಳಿಂದ ಎದುರಾಗಿದ್ದ ಸರ್ವರ್ ಕಾಟ ಸೋಮವಾರ ಮಧ್ಯಾಹ್ನದ ಹೊತ್ತಿಗೆ ನಿವಾರಣೆಯಾಯಿತು. ರಾಜ್ಯಕ್ಕೆ ನಿಗದಿಯಾಗಿದ್ದ ಕೋಟಾ ಮುಗಿದಿದ್ದರಿಂದ ನೋಂದಣಿ ಸ್ಥಗಿತಗೊಂಡಿದೆ. ರೈತರು ಕಂಗಾಲಾಗಿದ್ದಾರೆ. ರಾಜ್ಯದಾದ್ಯಂತ 10 ಲಕ್ಷ ಕ್ವಿಂಟಲ್ ಜೋಳ ಖರೀದಿಸುವುದಾಗಿ ಸರ್ಕಾರ ಹೇಳಿತ್ತಾದರೂ, ಖರೀದಿಯಲ್ಲಿ ಜಿಲ್ಲೆಗಳಿಗೆ ಮಿತಿ ವಿಧಿಸಿತ್ತು. ಇದರ ವಿರುದ್ಧ ರೈತರು ಹೋರಾಟ ನಡೆಸಿ, ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸಿ ಜಿಲ್ಲೆಗಳ ಮಿತಿ ತೆರವು ಮಾಡಿಸಿಕೊಂಡು ಬಂದಿದ್ದರು.

j3tvkananda
ಸರ್ಕಾರ ಏ. 22ರಂದು ಮಿತಿ ತೆರುವುಗೊಳಿಸಿತ್ತು. 24ರ ಗುರುವಾರದಿಂದ ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳೂ ಸೇರಿ ರಾಜ್ಯದಾದ್ಯಂತ ನೋಂದಣಿ ಆರಂಭವಾಗಿತ್ತು. ಆದರೆ, 25ರ ಸಂಜೆ ಹೊತ್ತಿಗೆ ಸರ್ವರ್ನ ಸಮಸ್ಯೆ ಕಾಣಿಸಿಕೊಂಡು, ನೋಂದಣಿ ಸ್ಥಗಿತಗೊಂಡಿತ್ತು. ಅಷ್ಟು ಹೊತ್ತಿಗಾಗಲೇ ರಾಜ್ಯದಾದ್ಯಂತ 9.40 ಲಕ್ಷ ಕ್ವಿಂಟಲ್ನಷ್ಟು ನೋಂದಣಿ ಪೂರ್ಣ ಗೊಂಡಿತ್ತು. 60 ಸಾವಿರ ಕ್ವಿಂಟಾಲ್ ಖರೀದಿಗೆ ಮಾತ್ರ ಅವಕಾಶವಿತ್ತು. ಜೋಳ ನೋಂದಣಿ ಶೀಘ್ರವೇ ಅಂತ್ಯಗೊಳ್ಳುತ್ತದೆ ಎಂಬುದನ್ನು ತಿಳಿದಿದ್ದ ರೈತರು ಶುಕ್ರವಾರ ರಾತ್ರಿಯಿಂದಲೂ ಖರೀದಿ ಕೇಂದ್ರಗಳ ಬಳಿ ಬೀಡು ಬಿಟ್ಟಿದ್ದರು.

j3tvkannada
ಸೋಮವಾರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಸರ್ವರ್ ಸಮಸ್ಯೆ ನಿವಾರಣೆಯಾದ ಕೆಲವೇ ನಿಮಿಷಗಳಲ್ಲಿ ರಾಜ್ಯದಾದ್ಯಂತ 60 ಸಾವಿರ ಕ್ವಿಂಟಲ್ ನೋಂದಣಿಯಾಯಿತು. ಕೆಲವೇ ರೈತರಿಗಷ್ಟೇ ನೋಂದಣಿ ಅವಕಾಶ ಸಿಕ್ಕಿತು. ಇನ್ನುಳಿದ ಸಾವಿರಾರು ರೈತರು ಅವಕಾಶ ವಂಚಿತರಾಗಿದ್ದು, ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ನಾವು ಬೆಳೆ ಇಟ್ಟಾಗಲೇ ಸರ್ಕಾರಕ್ಕೆ ಮಾಹಿತಿ ನೀಡಿರುತ್ತೇವೆ. ಸರ್ಕಾರ ಹೀಗೆ ಮಿತಿ ವಿಧಿಸಿ ಖರೀದಿ ಮಾಡಿದರೆ ನಮಗೆ ಅನ್ಯಾಯವಾಗುವುದಿಲ್ಲವೇ ಎಂದು ಬಳ್ಳಾರಿ ಹೊರವಲಯದ ಹಲಕುಂದಿಯ ರೈತ ಗಾದೆಪ್ಪ ಎಂಬುವವರು ಪ್ರಶ್ನೆ ಮಾಡಿದ್ದಾರೆ. ಹೈಬ್ರಿಡ್ ಜೋಳ ಮಾರುಕಟ್ಟೆಯಲ್ಲಿ ₹1500ರಿಂದ ₹1600 ಇದೆ. ಆದರೆ, ಎಂಎಸ್ಪಿ ಅಡಿ ₹3,371 ಸಿಗುತ್ತಿದೆ. ಎಂಎಸ್ಪಿ ಅಡಿ ನೋಂದಣಿ ಮುಗಿದು ಹೋಗಿರುವುದರಿಂದ ಭಾರಿ ನಷ್ಟವಾಗುತ್ತಿದೆ ಎಂಬುದು ರೈತರ ದೂರು.
ಬಳ್ಳಾರಿಯಲ್ಲಿ ಕನಿಷ್ಠ 60 ಸಾವಿರ ಕ್ವಿಂಟಲ್, ರಾಯಚೂರಿನಲ್ಲಿ 2.50 ಲಕ್ಷದಿಂದ 3 ಲಕ್ಷ ಕ್ವಿಂಟಲ್ನಷ್ಟು ನೋಂದಣಿ ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತ ಖರೀದಿ ಕೇಂದ್ರಗಳಲ್ಲಿ ಬೀಡು ಬಿಟ್ಟಿದ್ದ ರೈತರು, ಅನ್ನ ನೀರಿಲ್ಲದೇ, ಎರಡು ದಿನಗಳಿಂದ ಬಿಸಿಲಿನಲ್ಲಿ ಒಣಗಿದ್ದಾರೆ. ಖರೀದಿ ಕೇಂದ್ರಗಳ ಮುಂದೆ ಕಲ್ಲು, ಜಪ್ಪಲಿ, ಗೋಣಿ ಚೀಲಗಳನ್ನು ಜೋಡಿಸಿಟ್ಟು ಕಾದಿದ್ದಾರೆ. ಸಮಸ್ಯೆ ಬಗೆಹರಿದ ಕೂಡಲೇ ನೋಂದಣಿ ಮಾಡಿಸುವ ಧಾವಂತದಲ್ಲಿದ್ದ ರೈತರು ಖರೀದಿ ಕೇಂದ್ರಗಳನ್ನು ಬಿಟ್ಟು ಬೇರೆಡೆಗೆ ಕದಲಿರಲಿಲ್ಲ. 40-42 ಡಿಗ್ರಿ ಉಷ್ಣಾಂಶವಿದ್ದರೂ, ಮರಗಳಡಿ ಆಶ್ರಯ ಪಡೆದರೇ ಹೊರತು ಜಾಗ ಬಿಟ್ಟಿರಲಿಲ್ಲ. ಈಗ ನೋಂದಣಿಯೇ ಸ್ಥಗಿತಗೊಂಡಿರುವುದು ರೈತರನ್ನು ತೀವ್ರ ನಿರಾಸೆಗೆ ದೂಡಿದೆ.