
ಉತ್ತರಕನ್ನಡ: ಇನ್ನೊಂದು ತಿಂಗಳಲ್ಲಿ ಬೇಸಿಗೆ ರಜೆ ಮುಗಿದು ಶಾಲೆಗಳು ಪುನರಾರಂಭ ಆಗಲಿವೆ. ಆದರೆ ಹಾನಿಯಾಗಿರುವ ಸರ್ಕಾರಿ ಶಾಲೆಗಳ ದುರಸ್ತಿ ಕಾರ್ಯ ಅಷ್ಟರೊಳಗೆ ಮುಗಿಯಲಿದೆಯೇ ಎಂಬ ಪ್ರಶ್ನೆ ಪಾಲಕರ ವಲಯದಲ್ಲಿ ಮೂಡಿದೆ.

j3tvkannada
ತಾಲ್ಲೂಕಿನ 79 ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ, ಕೆಲವು ಕೊಠಡಿಗಳು ಹಾನಿಯಾಗಿದ್ದರೇ, ಇನ್ನೂ ಕೆಲವು ಕೊಠಡಿಗಳ ಚಾವಣಿ ಹಾರಿ ಹೋಗಿವೆ. ಮತ್ತೆ ಕೆಲವು ಕೊಠಡಿಗಳ ಗೋಡೆಗಳ ಬಿರುಕು ಬಿಟ್ಟಿವೆ. ಇವುಗಳ ದುರಸ್ತಿ ಕೆಲಸ ನಿರೀಕ್ಷೆಯಂತೆ ಆರಂಭಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪ. ಗಾಳಿ ಮಳೆಗೆ ಇಲ್ಲವೇ, ತೀರಾ ಹಳೆಯ ಶಾಲೆಗಳಾಗಿರುವುದರಿಂದ ಕೆಲವು ಶಾಲೆಗಳ ತರಗತಿ ಕೊಠಡಿಗಳು ಹಾನಿಯಾಗಿವೆ. ಪ್ರತಿ ವರ್ಷ ದುರಸ್ತಿಗಾಗಿ ಅನುದಾನ ಬಿಡುಗಡೆ ಆಗುತ್ತಿದ್ದರೂ, ಪೂರ್ಣ ಪ್ರಮಾಣದ ದುರಸ್ತಿಗೆ ಅನುದಾನ ಸಾಕಾಗುತ್ತಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯರೇ ದೂರುತ್ತಿದ್ದಾರೆ.
ಒಂದು ಕೊಠಡಿಗೆ ಬಣ್ಣ ಬಳಿದು ಸರಿ ಮಾಡುವುದರಲ್ಲಿ, ಮತ್ತೊಂದು ಕೊಠಡಿಯ ಗೋಡೆ ಬಿರುಕು ಬಿಟ್ಟಿರುತ್ತದೆ. ಹೆಚ್ಚುವರಿ ಕೊಠಡಿಗಳ ನಿರ್ಮಾಣ ಮಂಜೂರಿಯಾದರೂ, ಕಾಮಗಾರಿ ಮುಗಿಸಲು ನಿಗದಿತ ಸಮಯಕ್ಕಿಂತ ಎರಡು ಪಟ್ಟು ಹೆಚ್ಚು ದಿನಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ. ಸಾಮಾಜಿಕ ಕಾರ್ಯಕರ್ತ ಸಂತೋಷ ಆಲದಕಟ್ಟಿ. 2024-25 ನೇ ಸಾಲಿನ ಪ್ರಕೃತಿ ವಿಕೋಪದಿಂದ ತಾಲ್ಲೂಕಿನಲ್ಲಿ 79 ಶಾಲೆಗಳ ಕೊಠಡಿ, ಚಾವಣಿ ದುರಸ್ತಿಯಾಗುವುದು ಬಾಕಿಯಿದೆ. ಅಂದಾಜು ₹2 ಕೋಟಿ ಅನುದಾನದ ಅಗತ್ಯವಿದೆ. ಈ ಕುರಿತು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ನಂತರ ದುರಸ್ತಿ ಕೆಲಸ ಕೈಗೊಳ್ಳಲಾಗುವುದು ಎಂದು ಪಂಚಾಯತ್ ರಾಜ್ ಎ.ಇ.ಇ ಪ್ರದೀಪ್ ಭಟ್ ಹೇಳಿದರು
ಯಾವೆಲ್ಲ ಶಾಲೆಗಳಲ್ಲಿ ಹಾನಿ:-
ಉಮ್ಮಚಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜ್ಜಳ್ಳಿಯ ಹಿರಿಯ ಪ್ರಾಥಮಿಕ ಶಾಲೆ, ಸಂಜಯನಗರದ ಪ್ರಾಥಮಿಕ ಶಾಲೆ, ಅಂದಲಗಿಯ ಹಿರಿಯ ಪ್ರಾಥಮಿಕ ಶಾಲೆ, ಹುಲಿಹೊಂಡ ಶಾಲೆ ಚವಡಳ್ಳಿ ಶಾಲೆ, ಇಂದಿರಾನಗರದ ಉರ್ದು ಶಾಲೆ, ಗುಂಜಾವತಿ ಶಾಲೆ, ಇಂದೂರ ಶಾಲೆ, ದೊಡ್ಡಹಾರವಳ್ಳಿ ಶಾಲೆ, ಅಟ್ಟಣಗಿ ಶಾಲೆ, ಅರಿಶಿಣಗೇರಿ ಶಾಲೆ, ಓರಲಗಿ ಉರ್ದು ಶಾಲೆ, ಲಕ್ಕೊಳ್ಳಿ ಶಾಲೆ, ಕಾತೂರ ಉರ್ದು ಶಾಲೆ, ಮಳಗಿಯ ಇಂದಿರಾನಗರ ಶಾಲೆ, ಅತ್ತಿವೇರಿ ಶಾಲೆ, ಪಟ್ಟಣದ ಮಾರಿಕಾಂಬಾನಗರ ಶಾಲೆ, ಹುನಗುಂದ ಉರ್ದು ಶಾಲೆ, ಬಾಚಣಕಿ ಉರ್ದು ಶಾಲೆ, ಸಾಲಗಾಂವ ಕಿರಿಯ ಪ್ರಾಥಮಿಕ ಶಾಲೆಗಳು ದುರಸ್ತಿಗೆ ಕಾದಿವೆ ಎಂಬುದಾಗಿ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.