
ಚಿತ್ರದುರ್ಗ: ಇಲ್ಲಿನ ಮುರುಘಾಮಠದಲ್ಲಿ ಸೋಮವಾರ ಮೂರು ದಿನದ ಬಸವ ಜಯಂತಿ ಉತ್ಸವಕ್ಕೆ ವೈಭವದ ಚಾಲನೆ ದೊರೆಯಿತು. ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಮಠದ ಅಂಗಳದಲ್ಲಿ ಸಂಭ್ರಮ ಮನೆ ಮಾಡಿತ್ತು. ರಂಗೋಲಿ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ವಚನ ಕಂಠಪಾಠ ಸ್ಪರ್ಧೆಗಳು ನಡೆದವು. ಸ್ಪರ್ಧೆಯಲ್ಲಿ ಚಿಣ್ಣರು, ಯುವಕರು, ಯುವತಿಯರು ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜಯಂತಿಗಳು ಅರ್ಥಪೂರ್ಣವಾಗಿರಬೇಕು. ಮಹಾತ್ಮರ ಆದರ್ಶಗಳು ಅನುಕರಿಣೀಯವಾಗಿರಬೇಕು. ನಮ್ಮ ಮಕ್ಕಳಿಗೆ ಸಿನಿಮಾ ನಟ ನಟಿಯರೇ ಆದರ್ಶವಾಗಬಾರದು ಎಂದು ಎಸ್.ಜೆ.ಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವ ಕುಮಾರ ಸ್ವಾಮೀಜಿ ತಿಳಿಸಿದರು.
ಸತ್ಯ, ತ್ಯಾಗ, ಕರುಣೆ, ಅಹಿಂಸೆಗಳನ್ನು ಬದುಕಿನ ಉಸಿರಾಗಿಸಿಕೊಂಡ ಶಿವಶರಣರ ನಡೆ ಆದರ್ಶಪ್ರಾಯವಾಗಬೇಕು. ಅಂತಹ ಮಹಾ ಶರಣರ, ಮಹಾ ಪುರುಷರ ಆದರ್ಶಗಳನ್ನು ನೆನಪಿಸುವ ನಿಟ್ಟಿನಲ್ಲಿ ಶ್ರೀಮಠದಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು. ಬಸವ ಜಯಂತಿ ಅಂಗವಾಗಿ ಮಠದಲ್ಲಿ ವಿವಿಧ ಸ್ಪರ್ಧೆ ಆಯೋಜಿಸಿರುವುದು ಜಯಂತಿಗೆ ಒಂದು ಬಣ್ಣ ಬಂದಿದೆ. ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ.

j3tvkannada
ಬಸವ ಜಯಂತಿಯನ್ನು ಪ್ರಪ್ರಥಮವಾಗಿ ಆಚರಿಸಿದ ಕೀರ್ತಿ ದಾವಣಗೆರೆಯ ವಿರಕ್ತ ಮಠಕ್ಕೆ ಸಲ್ಲುತ್ತದೆ ಎಂದು ಬಸವಲಿಂಗದೇವರು ತಿಳಿಸಿದರು. ವಚನ ಕಂಠಪಾಠ ಸ್ಪರ್ಧೆಯಲ್ಲಿ 85, ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆಯಲ್ಲಿ 42 ಹಾಗೂ ರಂಗೋಲಿ ಸ್ಪರ್ಧೆಯಲ್ಲಿ 45 ಸ್ಪರ್ಧಿಗಳು ಭಾಗವಹಿಸಿದ್ದರು. ಶ್ರೀಮಠದ ಉಮೇಶ್ ಪತ್ತಾರ್, ಸಿದ್ದೇಶ್, ಜ್ಞಾನಮೂರ್ತಿ ಇದ್ದರು. ವೀರಶೈವ ಸಮಾಜದ ಯುವ ಸಂಘಟನೆಯಿಂದ ಏ.29 ರಂದು ಮಧ್ಯಾಹ್ನ 3.30ಕ್ಕೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ನಗರದ ಹೊಳಲ್ಕೆರೆ ರಸ್ತೆಯ ಬಸವ ಪುತ್ಥಳಿಯಿಂದ ರ್ಯಾಲಿ ಪ್ರಾರಂಭವಾಗಲಿದೆ.

j3tvkannada
ಚಿತ್ರದುರ್ಗದ ಬಸವ ಮಂಟಪದಲ್ಲಿ ಏ.30 ರಂದು ಬಸವ ಜಯಂತಿ ಅಂಗವಾಗಿ ಗುರುಬಸವ ಪೂಜೆ ಧ್ವಜಾರೋಹಣ ತೊಟ್ಟಿಲು ಕ್ರಾರ್ಯಕ್ರಮ, ವಚನ ಚಿಂತನೆ, ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಳವಿಯ ಅಕ್ಕ ನಾಗಲಾಂಬಿಕ ಯೋಗಪೀಠದ ಪೀಠಾಧ್ಯಕ್ಷೆ ಮಾತೆ ದಾನೇಶ್ವರಿ ಮಾತಾಜಿ ತಿಳಿಸಿದರು. ಅಂದು ಬೆಳಿಗ್ಗೆ 9 ಗಂಟೆಯಿಂದ ಸಾಸಲಹಟ್ಟಿಯ ಅಕ್ಕಮಹಾದೇವಿ ಮಠದ ಸದ್ಗುರು ಬಸವೇಶ್ವರಿ ಮಾತಾಜಿ ಸಮ್ಮುಖದಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನಗರಸಭೆ ಅಧ್ಯಕ್ಷೆ ಸುಮಿತಾ ಜಿಲ್ಲಾ ಆಸ್ಪತ್ರೆಯ ಡಾ.ರೂಪ ಕೆ.ಡಿ.ಪಿ ಸದಸ್ಯ ಕೆ.ಸಿ.ರಾಜಣ್ಣ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ವಿವಿಧ ಕ್ಷೇತ್ರದ ಸಾಧಕರಿಗೆ ಬಸವಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಇನ್ನು ತೊಟ್ಟಿಲು ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು. ಮುಖಂಡರಾದ ವೀರೇಶ್ ಕುಮಾರ್ ಶಂಕರಪ್ಪ ಆರ್. ಶ್ರೀನಿವಾಸ್ ಕಲ್ವೇಶ್ ಇದ್ದರು.