
ಹುಬ್ಬಳ್ಳಿ: ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ಪ್ರಮುಖ ಪರೀಕ್ಷೆಗಳಿಗೆ ಹಾಜರಾಗುವ ಸಂದರ್ಭದಲ್ಲಿ ಜನಿವಾರ ಧರಿಸುವುದು ಹಾಗೂ ಮಂಗಳ ಸೂತ್ರಕ್ಕೆ ಸಂಬಂಧಿಸಿದಂತೆ ವಿಧಿಸಲಾಗುತ್ತಿರುವ ನಿರ್ಬಂಧಗಳು ಭಾರೀ ವಿರೋಧಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ನಡೆದ ಸಿ.ಇ.ಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿರುವುದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೇ ರಾಜ್ಯದಾದ್ಯಂತ ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರೀ ಪ್ರತಿಭಟನೆಗಳು ನಡೆದಿದ್ದವು. ಕೆಲವು ಕಡೆಗಳಲ್ಲಿ ಜನಿವಾರ ಕತ್ತರಿಸಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿ ಬಂದಿದ್ದವು. ಇದೀಗ ರೈಲ್ವೇ ನೇಮಕಾತಿ ಮಂಡಳಿ ಪರೀಕ್ಷಾ ಕೇಂದ್ರಗಳಲ್ಲಿ ನಿಷಿದ್ಧ ವಸ್ತುಗಳಿಗೆ ಸಂಬಂಧಿಸಿದಂತೆ ವಿವಾದ ಶುರುವಾಗಿದೆ. ಈ ಸಂಬಂಧ ರೈಲ್ವೇ ನೇಮಕಾತಿ ಮಂಡಳಿ (RRB) ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

j3tvkannada
ರೈಲ್ವೇ ನೇಮಕಾತಿ ಮಂಡಳಿ ಪರೀಕ್ಷಾ ಕೇಂದ್ರಗಳಲ್ಲಿ ನಿಷಿದ್ಧ ವಸ್ತುಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದೆ. ರೈಲ್ವೇ ನೇಮಕಾತಿ ಮಂಡಳಿ (RRB) ನಡೆಸುವ ಪರೀಕ್ಷಾ ಕೇಂದ್ರಗಳಲ್ಲಿ ಕೆಲವು ವಸ್ತುಗಳನ್ನು ಕೊಂಡೊಯ್ಯುವುದರ ಮೇಲಿನ ನಿರ್ಬಂಧಗಳ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ, ಮಂಡಳಿಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ರೈಲ್ವೇ ಮಂಡಳಿಯು ದಿನಾಂಕ 28.04.2025 ರಂದು ಪತ್ರ ಸಂಖ್ಯೆ 2025/E(RRB)/25/08 ರ ಮೂಲಕ ಸ್ಪಷ್ಟನೆಯನ್ನು ನೀಡಿದೆ. RRB ನಡೆಸುವ ಪರೀಕ್ಷೆಗಳಲ್ಲಿ ಕೆಲವು ನಿಯಮಾವಳಿಗಳಿವೆ. ಅವುಗಳನ್ವಯ ಕೆಲವು ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದೆ. ಆದಾಗ್ಯೂ, ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ, ಸಕ್ಷಮ ಪ್ರಾಧಿಕಾರವು ಇದೀಗ ಕೆಲವೊಂದು ನಿರ್ದಿಷ್ಟ ಬದಲಾವಣೆಗಳನ್ನು ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಹೇಳಿದೆ. ಇದರ ಭಾಗವಾಗಿ ಸೂಚನೆಗಳ ಪ್ಯಾರಾ 7 ಅನ್ನು ಈ ಕೆಳಗಿನಂತೆ ಬದಲಾಯಿಸಲಾಗಿದೆ.

7(i) ಮೊಬೈಲ್ ಫೋನ್ಗಳು, ಪೇಜರ್, ವಾಚ್ಗಳು, ಇಯರ್ಫೋನ್, ಬ್ಲೂಟೂತ್ ಸಾಧನಗಳು, ಮೈಕ್ರೊಫೋನ್, ಹೆಲ್ತ್ ಬ್ಯಾಂಡ್ಗಳು, ಕ್ಯಾಲ್ಕುಲೇಟರ್ಗಳು, ಪುಸ್ತಕ, ಪೆನ್, ಪೇಪರ್, ಪೆನ್ಸಿಲ್, ಎರೇಸರ್, ಪೌಚ್, ಸ್ಕೇಲ್, ರೈಟಿಂಗ್-ಪ್ಯಾಡ್, ಬೆಲ್ಟ್ಗಳು, ಹ್ಯಾಂಡ್ಬ್ಯಾಗ್, ಕ್ಯಾಪ್, ಪರ್ಸ್, ಕ್ಯಾಮೆರಾ, ನೀರಿನ ಬಾಟಲ್, ಪ್ಯಾಕ್ ಮಾಡಿದ/ತೆರೆದ ಆಹಾರ ಪದಾರ್ಥಗಳು ಮುಂತಾದ ನಿಷಿದ್ಧ ವಸ್ತುಗಳು/ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತೆಗೆದುಕೊಂಡು ಹೋಗಲು ಅನುಮತಿಸುವುದಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ಕೇವಲ ಇ-ಕರೆ ಪತ್ರವನ್ನು ಮಾತ್ರ ಅನುಮತಿಸಲಾಗುವುದು. ಅಭ್ಯರ್ಥಿಗಳು ಯಾವುದೇ ಪೆನ್/ಪೆನ್ಸಿಲ್ ಅನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯಬಾರದು. ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಪೆನ್ ಅನ್ನು ಒದಗಿಸಲಾಗುವುದು ಎಂದು ಹೇಳಲಾಗಿದೆ.
ಇನ್ನು ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿಗಳು ತಮ್ಮ ಕೈ/ಕಾಲುಗಳಿಗೆ ಮೆಹಂದಿ ಹಾಕಿಕೊಳ್ಳದಂತೆ ಸೂಚಿಸಲಾಗಿದೆ. ಏಕೆಂದರೆ ಇದು ಬಯೋಮೆಟ್ರಿಕ್ಸ್ ಸೆರೆ ಹಿಡಿಯುವಿಕೆಗೆ ಅಡ್ಡಿಯುಂಟು ಮಾಡುತ್ತದೆ ಎಂದು ಹೇಳಲಾಗಿದೆ. 7(ii) ತಪಾಸಣೆಯ ಸಮಯದಲ್ಲಿ, ಲೋಹದ ವಸ್ತುಗಳು, ಧಾರ್ಮಿಕ ಚಿಹ್ನೆಗಳು, ಬಳೆಗಳು, ಆಭರಣಗಳು, ಮಂಗಳ ಸೂತ್ರ, ಕಡಗಗಳನ್ನು ಧರಿಸಿರುವ ಅಭ್ಯರ್ಥಿಗಳನ್ನು ಅವರ ಕರೆ ಪತ್ರದಲ್ಲಿ ಸೂಕ್ತವಾದ ಅನುಮೋದನೆಯೊಂದಿಗೆ ಪರೀಕ್ಷಾ ಹಾಲ್ನೊಳಗೆ ಅನುಮತಿಸಲಾಗುವುದು. ಅಂತಹ ಅಭ್ಯರ್ಥಿಗಳ ಮೇಲೆ ಮೇಲ್ವಿಚಾರಕರು ಹೆಚ್ಚಿನ ನಿಗಾ ಇಡತಕ್ಕದ್ದು ಎಂದು ಸೂಚನೆ ನೀಡಲಾಗಿದೆ.