
ರಾಯಚೂರು: ಕಟಾವು ವೇಳೆ ಬಿರುಗಾಳಿ ಸಹಿತ ಅಕಾಲಿಕ ಮಳೆ ಸುರಿದ ಪರಿಣಾಮ ತಾಲ್ಲೂಕಿನ ಹಲವು ಗ್ರಾಮಗಳ ರೈತರ ಜಮೀನಿನಲ್ಲಿ ಬೆಳೆದ ಭತ್ತ ನೆಲಕಚ್ಚಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

j3tvkannada
ಪ್ರತಿ ಹಂಗಾಮಿನಲ್ಲಿ ಬೆಳೆ ಕೊಯ್ಲಿಗೆ ಬಂದಾಗ ಏನಾದರೊಂದು ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಕೆಲ ರೈತರು ಕಟಾವು ಮುಗಿಸಿ ಜಮೀನಿನಲ್ಲಿ ಭತ್ತ ರಾಶಿ ಹಾಕಿದ್ದು, ಫಸಲು ಮಾರುಕಟ್ಟೆಗೆ ಸಾಗಿಸುವಷ್ಟರಲ್ಲಿ ಇನ್ನೇನು ಕಾದಿದೆಯೋ ಎಂದು ಆತಂಕದಲ್ಲಿದ್ದಾರೆ.
ಅಕಾಲಿಕ ಮಳೆಗೆ ಗೊರೇಬಾಳ, ಗೊರೇಬಾಳಕ್ಯಾಂಪ್, ಬಸಾಪುರ.ಇ.ಜೆ, ಹೊಸಳ್ಳಿ ಕ್ಯಾಂಪ್, ಕಲ್ಲೂರು, ಮುಳ್ಳೂರು, ಎಲೆಕೂಡ್ಲಿಗಿ, ಜವಳಗೇರಾ, ಸಾಸಲಮರಿ, ತಿಡಿಗೋಳ, ನಿಡಿಗೋಳ, ದಿದ್ದಿಗಿ, ಜಂಗಮರಹಟ್ಟಿ, ಬನ್ನಿಗನೂರು, ಸುಲ್ತಾನಪುರ, ಬೂತಲದಿನ್ನಿ, ದೇವರಗುಡಿ, ಕುನ್ನಟಗಿ ಸೇರಿದಂತೆ ಹಲವು ಗ್ರಾಮಗಳ ಕೆಲ ರೈತರ ಜಮೀನಿನಲ್ಲಿ ಬೆಳೆದ ಭತ್ತ ಬಿರುಗಾಳಿ, ಮಳೆಗೆ ಧರೆಗುರುಳಿದೆ. ದಿನವೂ ರಾತ್ರಿ ಮಳೆ ಮೋಡ ಕವಿದು ಆಗಾಗ ಬಿರುಗಾಳಿ, ಗುಡುಗು-ಸಿಡಿಲಿನ ಆರ್ಭಟ ಮುಂದುವರಿದು, ತುಂತುರು ಮಳೆಯಾಗುತ್ತಿದ್ದು, ರೈತರು ಇಡೀ ಅಹೋರಾತ್ರಿ ಭತ್ತದ ರಾಶಿ ರಕ್ಷಿಸಲು ಹೆಣಗಾಡುತ್ತಿದ್ದಾರೆ. ಕೆಲವು ರೈತರು ತಾಡಪಾಲ್ ಕೊರತೆ ಅನುಭವಿಸುತ್ತಿದ್ದು, ಜೋರು ಮಳೆ ಬಂದರೆ ಭತ್ತದ ರಾಶಿ ಎಲ್ಲಿ ನೀರುಪಾಲಾಗುತ್ತದೆ ಎನ್ನುವ ಭಯ ಅವರನ್ನು ಕಾಡುತ್ತಿದೆ.
ತಾಲ್ಲೂಕಿನಲ್ಲಿ 66,662 ಹೆಕ್ಟೇರ್ ನೀರಾವರಿ ಪ್ರದೇಶವಿದ್ದು, ಮುಂಗಾರು ಹಂಗಾಮಿನಲ್ಲಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಯಾಗಿತ್ತು. ಹಿಂಗಾರು ಹಂಗಾಮಿನಲ್ಲಿ 52,036 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಕುಡಿಯುವ ನೀರು ಹಾಗೂ ನಿಂತ ಬೆಳೆ ರಕ್ಷಣೆಗೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಜನಪ್ರತಿನಿಧಿಗಳು ಸೇರಿ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ, ಭದ್ರಾ ಜಲಾಶಯದಿಂದ 2 ಟಿ.ಎಂ.ಸಿ ನೀರು ಕಾಲುವೆಗಳಿಗೆ ಏಪ್ರಿಲ್ 10ರವರೆಗೆ ಹರಿಸಲಾಯಿತು. ಆದರೆ ಅಕಾಲಿಕ ಮಳೆಯಿಂದ ಬೆಳೆ ರಕ್ಷಣೆಗೆ ಮಾಡಿದ ಪ್ರಯತ್ನವೂ ಸಾಫಲ್ಯ ಕಾಣದಂತಾಗಿದೆ ಎಂದು ಜವಳಗೇರಾ, ಜಂಗಮರ ಹಟ್ಟಿ ಹಾಗೂ ಸುಲ್ತಾನಪುರ ಗ್ರಾಮದ ರೈತರು ಅಳಲು ತೋಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಆದಷ್ಟು ಶೀಘ್ರವಾಗಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಒತ್ತಾಯಿಸಿದ್ದಾರೆ.