ಬೆಂಗಳೂರು ಗ್ರಾಮಾಂತರ: ಇದೀಗ ಬೇಸಿಗೆ ದಗೆ ಆರಂಭವಾಗಿದ್ದು ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಮುಂದಿನ ಬೇಸಿಗೆ ದಿನಗಳಲ್ಲಿ ಜಿಲ್ಲೆಯ 98 ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಕಾಡಲಿದೆ. 54 ಗ್ರಾ .ಪಂಚಾಯತ್ಗಳ ಪೈಕಿ ಹೊಸಕೋಟೆ ತಾಲೂಕಿನ ಅತಿ ಹೆಚ್ಚು ಗ್ರಾಮಗಳು ನೀರಿನ ಸಮಸ್ಯೆಗೆ ತತ್ತರಿಸಲಿವೆ. ರಾಜ್ಯದಲ್ಲಿಈ ಬಾರಿ ಬೇಸಿಗೆ ತಾಪಮಾನ ಏರಿಕೆಯಾಗಲಿದೆ ಎಂಬ ವರದಿಗಳು ಜನರನ್ನು ಬೆಚ್ಚಿ ಬೇಳಿಸುತ್ತಿವೆ. ಗ್ರಾಮಾಂತರ ಜಿಲ್ಲೆಯಲ್ಲೂ ದಿನದಿಂದ ದಿನಕ್ಕೆ ಬಿಸಿ ತಾಪ ಹೆಚ್ಚುತ್ತಿದ್ದು, ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂಬ ಸಮೀಕ್ಷೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ.

ಇವರ ಪ್ರಕಾರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯ 98 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಲಿದೆ ಎಂದು ಜಿಲ್ಲಾಡಳಿತಕ್ಕೆ ವರದಿ ನೀಡಿದ್ದಾರೆ. ಇದರನ್ವಯ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಜೆ.ಜೆ.ಎಂ ನೀರಿನ ವ್ಯವಸ್ಥೆಯನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಕೊಳವೆ ಬಾವಿಗಳನ್ನು ಕೊರೆಯಿಸಲು ಕ್ರಿಯಾ ಯೋಜನೆ ತಯಾರಿಸಿದೆ. ಜಿಲ್ಲೆಯ ನಾಲ್ಕು ತಾಲೂಕುಗಳ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಕಳೆದ 3 ರಿಂದ 5 ವರ್ಷಗಳಿಂದ ಹೆಚ್ಚಾಗಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರುವ ಗ್ರಾಮಗಳ ಆಧಾರದಲ್ಲಿಈ ವರ್ಷ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಉದ್ಬವಿಸಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ.
ಈ ಗ್ರಾಮಗಳಲ್ಲಿ ಹೆಚ್ಚುವರಿ ಕೊಳವೆ ಬಾವಿ ಕೊರೆಯಿಸಲು, ಪಂಪು ಮೋಟಾರ್ ಅಳವಡಿಸಲು ಹಾಗೂ 238 ಖಾಸಗಿ, ರೈತರ ಕೊಳವೆ ಬಾವಿಗಳನ್ನು ಗುರುತಿಸಿ ಕುಡಿಯುವ ನೀರು ಪೂರೈಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಸಾಕಷ್ಟು ಗ್ರಾಮಗಳಲ್ಲಿ ಜಲ ಜೀವನ್ ಮಿಷನ್(ಜೆ.ಜೆ.ಎಂ)ಯೋಜನೆಯಡಿ ಪ್ರತಿ ಮನೆಗೆ ನಳ್ಳಿ ಮೂಲಕ ನೀರು ಪೂರೈಕೆ ಮಾಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ಈ ಬಾರಿ ಬೇಸಿಗೆ ವೇಳೆಗೆ ಜೆ.ಜೆ.ಎಂ ಜನರ ಕೈಗೆಟುಕದಂತಾಗಿದೆ.
ಜೆ.ಜೆ.ಎಂ ಯೋಜನೆಯಡಿ ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸಿದ್ದು, ಅದಕ್ಕೆ ಪಂಪು ಮೋಟಾರ್ ಆಳವಡಿಸಿಲ್ಲ. ಅಲ್ಲದೇ, ಕಾಮಗಾರಿ ಕೆಲವಡೆ ಸ್ಥಗಿತವಾಗಿರುವುದರಿಂದ ಕೊರೆಯಿಸಿರುವ ಕೊಳವೆ ಬಾವಿಗಳು ನಿಷ್ಕ್ರಿಯೆಗೊಳ್ಳುತ್ತಿವೆ. ಕೋಟ್ಯಾಂತರ ರೂ ಖರ್ಚು ಮಾಡಿ ಅನುಷ್ಠಾನಗೊಳ್ಳುತ್ತಿರುವ ಜೆ.ಜೆ.ಎಂ ಯೋಜನೆ ಕಾಮಗಾರಿಗಳು ನಿಗದಿತ ಗಡುವಿನೊಳಗೆ ಮುಗಿಯದೆ ಇರುವುದು ನೀರಿನ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎನ್ನಲಾಗುತ್ತದೆ.
ಈ ಕುರಿತಂತೆ ಕುಡಿಯುವ ನೀರು ಹಾಗೂ ನೈರ್ಮಲ್ಯೀಕರಣ ಅಧಿಕಾರಿಗಳು ವರದಿ ಸಿದ್ದಪಡಿಸಿ ಅದನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎಲ್ಲಿಲ್ಲಿ ಎದುರಾಗಬಹುದು ಎಂದು ಹೇಳಲಾಗಿದೆ.