
ಹಾಸನ: ಎಳನೀರು, ಕೊಬ್ಬರಿಯ ಬೆಲೆ ಮಾರುಕಟ್ಟೆಯಲ್ಲಿ ಹಠಾತ್ ಏರಿಕೆಯಾಗಿದ್ದು, ಸ್ಥಳೀಯ ರಸ್ತೆಬದಿ ವ್ಯಾಪಾರಿಗಳಿಗೆ ಗುಣಮಟ್ಟದ ಎಳನೀರು ಕಾಯಿ, ತೆಂಗಿನ ಕಾಯಿ ಸಿಗದೆ ಕಂಗಾಲಾಗಿದ್ದಾರೆ.

j3tvkannada
ಇಲ್ಲಿನ ರಸ್ತೆ ಬದಿಯ ವ್ಯಾಪಾರಿಗಳು ಹತ್ತಾರು ವರ್ಷಗಳಿಂದ ಅನೇಕ ರೀತಿಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಪ್ರವಾಹದಂತೆ ಒಂದೇ ಸಮನೆ ಕಲ್ಪವೃಕ್ಷದ ಫಲಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿದ್ದು, ಮಾರುಕಟ್ಟೆಯಲ್ಲಿ ದಾಖಲೆಯ ಧಾರಣೆ ಸಿಕ್ಕಿದೆ. ಇದರಿಂದ ಬೆಳೆಗಾರರು ಸಂತಸಗೊಂಡಿದ್ದಾರೆ. ಆದರೆ, ನಮಗೆ ಮಾತ್ರ ಗುಣಮಟ್ಟದ ಎಳೆನೀರು, ತೆಂಗಿನ ಕಾಯಿ ಸಿಗದೇ ಪರದಾಡುವಂತಾಗಿದೆ. ದೀಪದ ಕೆಳಗೆ ಕತ್ತಲು ಎನ್ನುವಂತಾಗಿದೆ ನಮ್ಮ ಸ್ಥಿತಿ’ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
‘ಕೋವಿಡ್-19 ನಂತರ ಬೇಡಿಕೆ ಹೆಚ್ಚಾಗಿದ್ದರಿಂದ ಎಳೆನೀರನ್ನು ಹೊರ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಸ್ಥಳೀಯ ವ್ಯಾಪಾರಿಗಳನ್ನು ನಿರ್ಲಕ್ಷಿಸಿದ ಸ್ಥಳೀಯ ತೆಂಗು ಬೆಳೆಗಾರರು, ಹೊರ ರಾಜ್ಯಕ್ಕೆ ನಿತ್ಯ ಸರಬರಾಜು ಮಾಡುತ್ತಿದ್ದಾರೆ’ ಎಂದು ರಸ್ತೆ ಬದಿ ವ್ಯಾಪಾರಿಗಳಾದ ಲಕ್ಷ್ಮಣ್, ಶಂಕರ್, ಬ್ರಹ್ಮಪಾಲ್ ಅಳಲು ತೋಡಿಕೊಂಡರು.
‘ಹೊರ ರಾಜ್ಯಗಳಿಗೆ ಎಗ್ಗಿಲ್ಲದೇ 30 ರಿಂದ 40 ಲಾರಿಗಳಲ್ಲಿ ಗುಣಮಟ್ಟದ ತಾಜಾ ಎಳನೀರನ್ನು ಮಾರಾಟ ಮಾಡಲಾಗುತ್ತಿದೆ. ಅವುಗಳಿಗೆ ಹೆಚ್ಚಿನ ಮಾರುಕಟ್ಟೆ ಶುಲ್ಕ ವಿಧಿಸಬೇಕು’ ಎಂಬುದು ವ್ಯಾಪಾರಿಗಳ ಒತ್ತಾಯ.
‘ಭಕ್ತರು ದಿನ ಭಗವಂತರಿಗೆ ತೆಂಗಿನಕಾಯಿ ಕೊಬ್ಬರಿ ಅರ್ಪಿಸಿ ದರ್ಶನ ಮಾಡುವುದು ವಾಡಿಕೆ. ಬೆಲೆಗಳ ಏರಿಕೆಯಿಂದಾಗಿ ತಂದ ಕಾಯಿಗಳು ವೇಳೆಗೆ ಸರಿಯಾಗಿ ವ್ಯಾಪಾರ ಆಗದೇ ಇದ್ದರೆ ಬಿಸಿಲಿನ ತಾಪಕ್ಕೆ ಒಡೆದು ಹೋಗುತ್ತವೆ. ಹಾಗಾಗಿ ವ್ಯಾಪಾರದಲ್ಲಿ ಲಾಭ ಕಡಿಮೆಯಾಗಿದ್ದು, ಖರೀದಿದಾರರ ನಿರಾಸಕ್ತಿಯಿಂದಾಗಿ ತೆಂಗಿನ ಕಾಯಿಗಳ ವ್ಯಾಪಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ’ ಎನ್ನುತ್ತಾರೆ ವಜ್ರಕುಮಾರ್, ಶ್ರೀನಿವಾಸ್ ಮತ್ತು ಬ್ರಹ್ಮಣ್ಣ.