
ಚಿತ್ರದುರ್ಗ: ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಾದ್ಯಂತ ಸುರಿದ ಭಾರಿ ಮಳೆಯಿಂದ ಅಪಾರ ನಷ್ಟ ಅನುಭವಿಸಿದ್ದರೂ ಬೆಳೆ ವಿಮೆ ಯೋಜನೆಯಡಿ ವಿಮೆ ಕಟ್ಟಿದ್ದ ಅನೇಕ ರೈತರಿಗೆ ಅನ್ಯಾಯ ಮರುಕಳಿಸಿದೆ ಎಂದು ರೈತರು ದೂರಿದ್ದಾರೆ. ವಿಮೆ ಯೋಜನೆ ಜಾರಿ ಆದಾನಿಗಿನಿಂದಲೂ ಒಂದಲ್ಲ ಒಂದು ರೀತಿ ರೈತರಿಗೆ ಅನ್ಯಾಯವಾಗುತ್ತಿದೆ. ಕಳೆದ ವರ್ಷ ಮಾತ್ರ ತುಸು ವಿಮೆ ಸಿಕ್ಕಿದ್ದು, ಈ ವರ್ಷವೂ ಸಿಗಬಹುದು ಎಂಬ ಭರವಸೆಯಿಂದ ಹೆಚ್ಚಿನ ರೈತರು ವಿಮೆ ಪಾವತಿಸಿದ್ದರು. ಶೇ 90ಕ್ಕೂ ಹೆಚ್ಚು ರೈತರು ವಿಮಾ ಹಣದಿಂದ ವಂಚಿತರಾಗಿದ್ದಾರೆ ಎಂದು ದೂರಲಾಗಿದೆ.

j3tvkannada
ಮೊಳಕಾಲ್ಮೂರು ತಾಲ್ಲೂಕು ಮಳೆಯಾಶ್ರಿತ ಕೃಷಿ ಅವಲಂಬಿಸಿದೆ. ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿ ಶೇಂಗಾ ಗುರುತಿಸಿಕೊಂಡಿದೆ. ನಂತರದ ಬೆಳೆಗಳಾಗಿ ತೊಗರಿ, ಸಜ್ಜೆ, ನವಣೆ ಬಿತ್ತನೆ ಮಾಡಲಾಗುತ್ತದೆ. ತಾಲ್ಲೂಕಿನಲ್ಲಿ 16 ಗ್ರಾಮ ಪಂಚಾಯಿತಿಗಳಿದ್ದು, ಕೋನಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಮಾತ್ರ ವಿಮೆಗೆ ಅರ್ಹರಾಗಿದ್ದಾರೆ. ಈ ವ್ಯಾಪ್ತಿಯಲ್ಲಿ ಪ್ರತಿ ಹೆಕ್ಟೇರ್ಗೆ 614.56 ಕೆ.ಜಿ.ಯಷ್ಟು ಕನಿಷ್ಠ ಇಳುವರಿ ನಿಗದಿ ಮಾಡಲಾಗಿತ್ತು. ಆದರೆ, ಪ್ರಸಕ್ತ ವರ್ಷ 520.36 ಕೆ.ಜಿ. ಇಳುವರಿ ಬರುವ ಮೂಲಕ ನಿರೀಕ್ಷೆಗೂ ಮೀರಿ ಕಡಿಮೆ ಬಂದಿದೆ. ಉಳಿದ ಎಲ್ಲ ಪಂಚಾಯಿತಿಗಳಲ್ಲೂ ಕನಿಷ್ಠ ಇಳುವರಿಗಿಂತ ಹೆಚ್ಚು ಇಳುವರಿ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

j3tvkannada
ಚಿಕ್ಕೇರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶೇ 85.52 ಇಳುವರಿ ಬರುವ ಮೂಲಕ ಪ್ರಥಮ ಸ್ಥಾನ, ಬಿ.ಜಿ.ಕೆರೆ ಶೇ 74.13 ಇಳುವರಿ ಪಡೆಯುವ ಮೂಲಕ ದ್ವಿತೀಯ ಸ್ಥಾನ, ಜೆ.ಬಿ.ಹಳ್ಳಿ ಶೇ 73.56ರಷ್ಟು ಇಳುವರಿ ಪಡೆಯುವ ಮೂಲಕ ತೃತೀಯ ಸ್ಥಾನದಲ್ಲಿದೆ. ಓರಿಯಂಟಲ್ ವಿಮಾ ಕಂಪನಿ ಗುತ್ತಿಗೆ ಪಡೆದಿದೆ ಎಂದು ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಪ್ರಕಾಶ್ ಮಾಹಿತಿ ನೀಡಿದರು. ದೇವಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1,294 ರೈತರು, ಕೋನಸಾಗರ ವ್ಯಾಪ್ತಿಯಲ್ಲಿ 1,260, ರಾಯಾಪುರದಲ್ಲಿ 1,239 ಮಂದಿ ವಿಮಾ ಪಾವತಿಸಿದ್ದಾರೆ. ಸಂತೇಗುಡ್ಡ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇವಲ 102 ರೈತರು ಶೇಂಗಾಕ್ಕೆ ವಿಮೆ ಕಟ್ಟುವ ಮೂಲಕ ಕೊನೆ ಸ್ಥಾನದಲ್ಲಿದೆ.
ಒಟ್ಟು 34,940 ಹೆಕ್ಟೇರ್ಗೆ ₹1.65 ಕೋಟಿ ಮೊತ್ತದ ವಿಮೆ ಹಣವನ್ನು ಈ ವರ್ಷ ಪಾವತಿ ಮಾಡಲಾಗಿದೆ. ತೊಗರಿಗೆ ಸಂಬಂಧಪಟ್ಟ ವಿಮೆ ಮಾಹಿತಿ ಇನ್ನೂ ಬಿಡುಗಡೆ ಆಗಬೇಕಿದೆ ಎಂದು ಹೇಳಿದರು. ಕಳೆದ 7 ವರ್ಷಗಳ ಸರಾಸರಿಯನ್ನು ಅವಲೋಕಿಸಿ ವಿಮೆ ನೀಡುವುದು ಅವೈಜ್ಞಾನಿಕವಾಗಿದೆ. ಇದರಿಂದ ಪ್ರತಿವರ್ಷ ನಷ್ಟವಾಗುತ್ತಿದೆ. ಬೆಳೆ ನಷ್ಟ ಸಂಭವಿಸಿದರೆ ನೆರವಿಗಿರಲಿ ಎಂಬ ಆಸೆಯಿಂದ ಸಾಲ ಮಾಡಿ ವಿಮೆ ಹಣ ಕಟ್ಟುತ್ತೇವೆ. ಆಯ್ಕೆಯಾಗದೆ ನಷ್ಟಕ್ಕೀಡಾಗುತ್ತಿದ್ದೇವೆ. ಈ ಬಗ್ಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.