
ನೆಲವಾಡ(ಜನವಾಡ): ಬೀದರ್ ತಾಲ್ಲೂಕಿನ ನೆಲವಾಡ ಗ್ರಾಮದ ರೈತ ಸಂತೋಷ ದೇಗಲಮಡಿ ಬೇಸಿಗೆಯಲ್ಲಿ ಚಿಯಾ ಬೆಳೆ ಸಮೃದ್ಧವಾಗಿ ಬೆಳೆದು ಗಮನ ಸೆಳೆದಿದ್ದಾರೆ.

j3tvkannada
ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿ ಮೆಕ್ಸಿಕೋದ ಅಲ್ಪಾವಧಿ ಸಿರಿಧಾನ್ಯದ ಬೆಳೆ ಚಿಯಾ ಬೆಳೆದಿದ್ದಾರೆ. ಒಂದು ವಾರದಲ್ಲಿ ಬೆಳೆ ಕಟಾವಿಗೆ ಬರಲಿದೆ. ರೈತ ₹1.40 ಲಕ್ಷ ಆದಾಯದ ನಿರೀಕ್ಷೆಯಲ್ಲಿ ಇದ್ದಾರೆ.
ನನಗೆ ಆರೂವರೆ ಎಕರೆ ಜಮೀನಿದೆ. ಈ ಪೈಕಿ ಒಂದೂವರೆ ಎಕರೆಯಲ್ಲಿ ಜನವರಿ 15ಕ್ಕೆ ಚಿಯಾ ಬಿತ್ತನೆ ಮಾಡಿದ್ದೇನೆ. ಹನಿ ನೀರಾವರಿ ಪದ್ಧತಿ ಮೂಲಕ ಬೆಳೆಗೆ ನೀರುಣಿಸಿದ್ದೇನೆ. ಬಂಪರ್ ಬೆಳೆ ಬಂದಿದೆ ಎಂದು ತಿಳಿಸಿದ್ದಾರೆ. ಬಿತ್ತನೆ ಬೀಜ, ಗೊಬ್ಬರ ಹಾಗೂ ಇತರ ಖರ್ಚು ಸೇರಿ ಬೆಳೆಗೆ ₹20 ಸಾವಿರ ಖರ್ಚಾಗಿದೆ. ಎಂಟು ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆ ಇದೆ. ಸದ್ಯ ಮಾರುಕಟ್ಟೆಯಲ್ಲಿ ಚಿಯಾ ಬೆಲೆ ಪ್ರತಿ ಕ್ವಿಂಟಾಲ್ಗೆ ₹20 ಸಾವಿರ ಇದೆ. ಎಲ್ಲ ಖರ್ಚು ಹೊರತುಪಡಿಸಿ ₹1.40 ಲಕ್ಷ ಗಳಿಕೆ ಆಗಲಿದೆ ಎಂದು ಅವರು ಹೇಳಿದರು.
ಚಿಯಾ 90 ರಿಂದ 100 ದಿನಗಳ ಬೆಳೆಯಾಗಿದ್ದು ಹೆಚ್ಚು ನಿರ್ವಹಣೆ ಬೇಕಿಲ್ಲ. ಯಂತ್ರದಿಂದ ಕಟಾವು ಮಾಡಬಹುದಾಗಿದೆ. ಹೀಗಾಗಿ ಕೂಲಿ ಕಾರ್ಮಿಕರ ಸಮಸ್ಯೆಯೂ ಇರುವುದಿಲ್ಲ. ಯಥೇಚ್ಛ ಪೋಷಕಾಂಶಗಳನ್ನು ಹೊಂದಿದ್ದರಿಂದ ಚಿಯಾ ಬೆಳೆಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದೆ ಎಂದು ಬಿ.ಎ. ಪದವೀಧರರಾಗಿರುವ 40 ವರ್ಷದ ಸಂತೋಷ್ ಅವರು ಹೇಳುತ್ತಾರೆ.
ಚಿಯಾ ಬೆಳೆಯಲ್ಲಿದೆ ಔಷಧೀಯ ಗುಣ: ಚಿಯಾ ಬೆಳೆಗೆ ಔಷಧೀಯ ಗುಣ ಇದೆ. ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ಮಧುಮೇಹ ನಿಯಂತ್ರಣ ಹಾಗೂ ತೂಕ ಕಡಿಮೆ ಮಾಡಲು ಸಹಕಾರಿ ಆಗಿದೆ. ದೇಹವನ್ನು ತಂಪಾಗಿ ಇರಿಸುತ್ತದೆ. ದೇಶದಲ್ಲಿ ಮೇಘಾಲಯದಲ್ಲಿ ಹೆಚ್ಚಾಗಿ ಬೆಳೆಯುವ ಚಿಯಾದಲ್ಲಿ ಒಮೆಗಾ 3, ಮೆಗ್ನಿಷಿಯಂ, ಪೊಟ್ಯಾಷಿಯಂ ಪ್ರಮಾಣ ಅಧಿಕವಾಗಿದೆ.