
ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನೇತೃತ್ವದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆ.ಸಿ ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ನೀರಾವರಿ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ತೀವ್ರ ಚರ್ಚೆಗಳು ನಡೆದವು. ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಯೋಜನೆ ನೀರು ತುಂಬಿರುವ ಕೆರೆಗಳ ಸುತ್ತ ಬೆಳೆಯುವ ಹಣ್ಣು, ತರಕಾರಿಗಳ ಗುಣಮಟ್ಟ ಪರೀಕ್ಷಿಸಬೇಕು. ನೀರಿನ ಬಗ್ಗೆ ಎದುರಾಗಿರುವ ಅನುಮಾನಗಳ ಬಗ್ಗೆ ಖಚಿತ ಕಂಡುಕೊಳ್ಳಬೇಕು ಎಂದು ಡಾ.ಎಂ.ಸಿ.ಸುಧಾಕರ್ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

j3tvkannada
ಕೋಲಾರ ಸಂಸದ ಮಲ್ಲೇಶ್ ಬಾಬು, ಶಿಡ್ಲಘಟ್ಟ ಶಾಸಕ ರವಿಕುಮಾರ್ ಮತ್ತಿತರರು ಈ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗಿಯಾದರು.ಮೂರನೇ ಹಂತದ ಶುದ್ದೀಕರಣದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮೂರನೇ ಹಂತದ ಶುದ್ದೀಕರಣ ಮಾತನಾಡುವಷ್ಟು ಸುಲಭವಲ್ಲ. ಎಚ್.ಎನ್.ವ್ಯಾಲಿಗೆ ಸುಮಾರು ₹ 800 ಕೋಟಿ. ಕೆ.ಸಿ. ವ್ಯಾಲಿಗೆ ₹ 1 ಸಾವಿರ ಕೋಟಿ ನೀಡಲಾಗಿದೆ. ಮೂರನೇ ಹಂತದ ಶುದ್ದೀಕರಣ ಎಂದರೆ ಯಾವ ರೀತಿ, ಏಕೆ ಎನ್ನುವುದು ಚರ್ಚೆಯಲ್ಲಿದೆ. ಆದರೆ ಈ ನೀರು ಯಾವುದೇ ರೀತಿಯ ಕೃಷಿ ಚಟುವಟಿಕೆಗಳಿಗೆ ಬಳಸುವುದಿಲ್ಲ. ಮೂರನೇ ಹಂತದ ಶುದ್ದೀಕರಣವು ದುಬಾರಿ ಎಂದರು. ಕೇವಲ ಅಂತರ್ಜಲ ವೃದ್ಧಿಗೆ ಮಾತ್ರ ಬಳಸಲಾಗುತ್ತದೆ. ನೇರವಾಗಿ ಕೃಷಿಗೆ ಬಳಸುವಂತಿಲ್ಲ. ಅಂತರ್ಜಲ ಮರುಪೂರಣವಾದರೆ ಕೊಳವೆಬಾವಿಗಳಲ್ಲಿ ನೀರು ಉತ್ತಮಗೊಳ್ಳುತ್ತದೆ. ಈ ಹಿಂದೆ ಕೆರೆಗಳಲ್ಲಿ ಅಥವಾ ಕೆರೆಗಳ ಸಮೀಪ ಕುಡಿಯುವ ನೀರು ಪೂರೈಕೆಗೆ ಕೊಳವೆ ಬಾವಿಗಳನ್ನ ಕೊರೆಸಲಾಗುತ್ತಿತ್ತು. ಅಂತಹ ಕಡೆಗಳಲ್ಲಿ ಸಮಸ್ಯೆಗಳು ಆಗುತ್ತದೆ ಎಂದರು. ವೈಜ್ಞಾನಿಕವಾಗಿ ಈ ವಿಚಾರಗಳನ್ನು ಗಮನಿಸಬೇಕು. ನಿರಂತವಾಗಿ ಭಾರತೀಯ ವಿಜ್ಞಾನ ಸಂಸ್ಥೆಯವರೇ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದರು.
ಕಂದವಾರ, ಮುನ್ನೂರು ಮತ್ತು ಅಮಾನಿಗೋಪಾಲಕೃಷ್ಣ ಕೆರೆಗೆ ಯುಜಿಡಿ ನೀರು ಸೇರುತ್ತಿರುವ ಕಾರಣ ಕಲುಷಿತವಾಗುತ್ತಿದೆ. ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ನೀರಿನ ಗುಣಮಟ್ಟ ಪರಿಶೀಲಿಸಬೇಕು ಎಂದರು.
ಜಿಲ್ಲೆಯಲ್ಲಿ ವಿತರಕರು ಇಲ್ಲದ ತಾಲ್ಲೂಕುಗಳಲ್ಲಿ 30 ಸಹಕಾರ ಸಂಘಗಳ ಮೂಲಕ ರಸಗೊಬ್ಬರ ವಿತರಿಸಲು ಕ್ರಮವಹಿಸಲಾಗುತ್ತದೆ. ಈ ಸಂಘಗಳ ಸಿಬ್ಬಂದಿಗೆ ಈಗಾಗಲೇ ತರಬೇತಿ ಸಹ ನೀಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸಭೆಗೆ ಮಾಹಿತಿ ನೀಡಿದರು. ಹನಿ ನೀರಾವರಿಗೆ ಬಳಸುವ ಪೈಪ್ಲೈನ್ಗಳ ಗುಣಮಟ್ಟದ ಬಗ್ಗೆ ಸಚಿವರು ಪ್ರಶ್ನಿಸಿದರು. ಕೃಷಿ ಹೊಂಡದ ಸುತ್ತ ಬೇಲಿ ನಿರ್ಮಿಸುವ ವಿಚಾರ ಚರ್ಚೆಗೆ ಬಂದಿತು. ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹ 2 ಲಕ್ಷ ಪರಿಹಾರ ನೀಡಲಾಗುತ್ತದೆ. ಯಾರಾದರೂ ಅವಘಡದಿಂದ ಮೃತಪಟ್ಟಿದ್ದರೆ ಈ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪರಿಹಾರ ಕೊಡಿಸಲಾಗುವುದು ಎಂದು ಸಚಿವರು ಹೇಳಿದರು.

j3tvkannada
ಕೃಷಿ ಹೊಂಡದ ಸುತ್ತ ತಂತಿ ಬೇಲಿ ಹಾಕದಿರುವವರ ವಿರುದ್ಧ ಗಂಭೀರ ಕ್ರಮಕೈಗೊಳ್ಳಬೇಕು ಎಂದರು. ಆಗ ಅಧಿಕಾರಿ, ಕೃಷಿ ಹೊಂಡದ ಸುತ್ತ ಬೇಲಿ ನಿರ್ಮಿಸಲು ಈ ಹಿಂದೆ ಸಬ್ಸಿಡಿ ಇರಲಿಲ್ಲ. ಈಗ ಸಾಮಾನ್ಯ ವರ್ಗಕ್ಕೆ ಶೇ 40ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೆ 50ರಷ್ಟು ಸಬ್ಸಿಡಿ ಕೊಡಲಾಗುತ್ತದೆ ಎಂದು ವಿವರಿಸಿದರು. ರೈತರ ಜಮೀನುಗಳಲ್ಲಿ ಮಣ್ಣು ಪರೀಕ್ಷೆಯ ಬಗ್ಗೆಯೂ ಸಚಿವರು ಮಾಹಿತಿ ಪಡೆದರು. ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ಆವಕ ತೀರಾ ಕಡಿಮೆ ಆಗುತ್ತಿದೆ. ಒಂದೂವರೆಯಿಂದ ಎರಡು ಸಾವಿರ ಲಾಟ್ ರೇಷ್ಮೆಗೂಡು ಬರುತ್ತಿದ್ದ ಕಡೆ ಈಗ ನಿತ್ಯ 400 ಲಾಟ್ ಗೂಡು ಬರುತ್ತಿದೆ. ಅಲ್ಲಿನ ಸಮಸ್ಯೆಗಳ ಕಾರಣದಿಂದಲೇ ಗೂಡು ಕಡಿಮೆ ಆಗಿದೆ. ರೈತರು, ರೀಲರ್ಗಳ ಸಭೆ ನಡೆಸಿ ಸಮಸ್ಯೆ ತಿಳಿಯಿರಿ ಎಂದು ಶಾಸಕ ಬಿ.ಎನ್.ರವಿಕುಮಾರ್ ಅಧಿಕಾರಿಗೆ ತಿಳಿಸಿದರು. ಆಗ ಸಚಿವರು ₹200 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಿಸುತ್ತಿದ್ದೇವೆ. ಆವಕ ಕಡಿಮೆ ಆದರೆ ಮಾರುಕಟ್ಟೆ ನಿರ್ಮಿಸಿ ಪ್ರಯೋಜನವೇನು. ಮೇ ನಲ್ಲಿ ಮುಖ್ಯಮಂತ್ರಿ ಅವರಿಂದ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ಸಂಸದ ಎಂ. ಮಲ್ಲೇಶ್ ಬಾಬು, ‘ರಸಗೊಬ್ಬರ, ಕ್ರಿಮಿನಾಶಕ ಮಾರಾಟ ಮಳಿಗೆಗಳಲ್ಲಿ ದರ ಪಟ್ಟಿ ನಮೂದಿಸುವುದಿಲ್ಲ. ಈ ಬಗ್ಗೆ ಯಾವ ಕ್ರಮವಹಿಸಿದ್ದೀರಿ ಎಂದು ಪ್ರಶ್ನಿಸಿದರು. ಆಗ ಕೃಷಿ ಇಲಾಖೆ ಜಂಟಿ ನಿರ್ದೇಶಕಿ, ಈಗಾಗಲೇ ಹಲವರಿಗೆ ಈ ಬಗ್ಗೆ ನೋಟಿಸ್ ನೀಡಲಾಗಿದೆ. ನಾವು ಆಗಾಗ್ಗೆ ಭೇಟಿ ನೀಡುತ್ತಿದ್ದೇವೆ ಎಂದರು. ಆಗ ಎಷ್ಟು ಮಂದಿಗೆ ನೋಟಿಸ್ ನೀಡಿದ್ದೀರಿ ಎನ್ನುವ ಮಾಹಿತಿ ಕೊಡಿ ಎಂದು ಸಂಸದರು ಸೂಚಿಸಿದರು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ‘ಬಿ’ ಖಾತೆ, ಕುಡಿಯುವ ನೀರಿನ ಸಮಸ್ಯೆಗಳು ಸೇರಿದಂತೆ ವಿವಿಧ ವಿಚಾರಗಳ ಕುರಿತು ಕಾವೇರಿದ ಚರ್ಚೆಗಳು ಸಭೆಯಲ್ಲಿ ನಡೆದವು. ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ, ಕೆ.ಎಚ್. ಪುಟ್ಟಸ್ವಾಮಿಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಬಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಎಚ್.ಸಿ.ಗಿರೀಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಎಚ್.ಎನ್.ವ್ಯಾಲಿ ಕೆ.ಸಿ.ವ್ಯಾಲಿ ನೀರಾವರಿ ಯೋಜನೆಯ ಅಧ್ವಾನಗಳ ಬಗ್ಗೆ ಮಾತನಾಡುತ್ತಿದ್ದ ಶಾಸಕ ಬಿ.ಎನ್.ರವಿಕುಮಾರ್ ಈ ಕೆರೆಗಳ ಸಮೀಪದ ಜಮೀನುಗಳಲ್ಲಿ ಬೆಳೆದ ಹುಲ್ಲು ಸೇವಿಸಿ ಸುಗಟೂರಿನಲ್ಲಿ ರಾಸುಗಳ ಹಾಲಿನ ಇಳುವರಿ ಕಡಿಮೆ ಆಗಿದೆ. ಈ ನೀರು ಸೇವಿಸಿದರೆ ಸಂತಾನವೂ ಆಗುವುದಿಲ್ಲ ಎನ್ನುವ ಮಾತುಗಳಿವೆ ಎಂದರು. ಆಗ ಸಚಿವರು ‘ಪಶುಸಂಗೋಪನಾ ಇಲಾಖೆ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧಿಕಾರಿಗಳಿಗೆ ಸುಗಟೂರಿಗೆ ಭೇಟಿ ನೀಡಿ ನೀರು ಮೇವಿನ ಗುಣಮಟ್ಟ ಪರೀಕ್ಷೆ ನಡೆಸಬೇಕು ಎಂದು ಸೂಚಿಸಿದರು. ಸಂತಾನ ಆಗದಿರುವುದಕ್ಕೆ ನಾನಾ ಕಾರಣಗಳು ಇರುತ್ತವೆ. ಆದರೆ ಈ ನೀರಿನಿಂದ ಆ ರೀತಿಯಲ್ಲಿ ಆಗುವುದಿಲ್ಲ. ನೀವು ಈ ರೀತಿಯಲ್ಲಿ ಹೇಳಿದರೆ ನಮ್ಮ ಜಿಲ್ಲೆಗಳಿಗೆ ಯಾರೂ ಹೆಣ್ಣು ಕೊಡುವುದಿಲ್ಲ ಎಂದು ನಗೆ ಚಟಾಕಿ ಸಿಡಿಸಿದರು.
ಈ ಹಿಂದಿನ ಜಾನುವಾರು ಗಣತಿಗೆ ಹೋಲಿಸಿದರೆ ಈಗ ಜಿಲ್ಲೆಯಲ್ಲಿ ಶೇ 20ರಷ್ಟು ರಾಸುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಪಶುಸಂಗೋಪನಾ ಇಲಾಖೆ ನಿರ್ದೇಶಕರು ತಿಳಿಸಿದರು. ಹೋರಿಗಳು ಎತ್ತುಗಳು ಸೇರಿದಂತೆ ದೇಸಿ ತಳಿಗಳು ಕಡಿಮೆ ಆಗಿವೆ. ಇದೇ ಸಮಯದಲ್ಲಿ ಕುರಿ ಮೇಕೆ ಮತ್ತು ಕೋಳಿಗಳ ಪ್ರಮಾಣ ಜಿಲ್ಲೆಯಲ್ಲಿ ಹೆಚ್ಚಿದೆ. ಈ ಹಿಂದೆ ಕುರಿ ಮೇಕೆಗಳು 8 ಲಕ್ಷ ಇದ್ದವು. ಈಗ 10 ಲಕ್ಷಕ್ಕೆ ಹೆಚ್ಚಿದೆ. ಕೋಳಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ ಎಂದು ಹೇಳಿದರು.
ಕೈಗಾರಿಕೀಕರಣದ ವಿಚಾರವಾಗಿ ರೈತರ ಅಭಿಪ್ರಾಯವನ್ನು ನೇರವಾಗಿ ಪಡೆಯಬೇಕಾಗಿದೆ. ಆದ ಕಾರಣ ಏ.25ರಂದು ಜಂಗಮ ಕೋಟೆಯಲ್ಲಿ ರೈತರ ಸಭೆ ನಡೆಸಲಾಗುವುದು. ಬಹಳಷ್ಟು ಜನರು ಜಮೀನು ನೀಡುತ್ತೇವೆ ಎಂದಿದ್ದಾರೆ. ಕೆಲವರು ನೀಡುವುದಿಲ್ಲ ಎಂದಿದ್ದಾರೆ. ಈ ಎಲ್ಲ ಕಾರಣದಿಂದ ರೈತರ ಸಭೆ ನಡೆಸುತ್ತಿದ್ದೇವೆ ಎಂದು ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಜಮೀನಿನ ಮಾಲೀಕರನ್ನು ನೇರವಾಗಿ ಕರೆದು ಅಭಿಪ್ರಾಯ ಪಡೆಯಲಾಗುವುದು. ಹೆಚ್ಚಿನ ರೈತರು ಜಮೀನು ನೀಡಲು ಒಪ್ಪಿದರೆ ಕೈಗಾರಿಕೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. ಇಲ್ಲದಿದ್ದರೆ ಕೈ ಬಿಡಲಾಗುವುದು ಎಂದರು.