
ತುಮಕೂರು: ಕುರುಬರ ಸಾಂಸ್ಕೃತಿಕ ಪರಿಷತ್ತು (ಟ್ರಸ್ಟ್) ಹೊರ ತಂದಿರುವ 31 ಕೃತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದಲ್ಲಿ ಶನಿವಾರ ಲೋಕಾರ್ಪಣೆ ಮಾಡಿದರು.

j3tvkannada
ಕುರುಬ ಸಮಾಜದ ಇತಿಹಾಸ, ಸಂಸ್ಕೃತಿ, ಆಚರಣೆ, ಪರಂಪರೆ, ಧಾರ್ಮಿಕ ವಿಚಾರ, ಸಮುದಾಯದ ವಿಶೇಷತೆಗಳನ್ನು ಈ ಕೃತಿಗಳಲ್ಲಿ ದಾಖಲಿಸಲಾಗಿದೆ. ಮೊದಲ ಹಂತದಲ್ಲಿ ಹತ್ತು ಕೃತಿ ಬಿಡುಗಡೆ ಮಾಡಲಾಗಿದ್ದು, ಈಗ 31 ಕೃತಿಗಳನ್ನು ಹೊರ ತರಲಾಗಿದೆ.
ಕೃತಿ ಬಿಡುಗಡೆ ನಂತರ ನಗರದ ಶ್ರೀದೇವಿ ಕಾಲೇಜಿನಲ್ಲಿ ನಡೆದ ಹಾಲುಮತ ಸಾಹಿತಿಗಳ ಸಾಂಸ್ಕೃತಿಕ ಸಮಾವೇಶಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ, ಎಲ್ಲಾ ಶ್ರಮಿಕ ವರ್ಗಗಳ ಸಂಸ್ಕೃತಿ, ಆಚಾರ, ವಿಚಾರ ದಾಖಲಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

j3tvkannada
ನಾಲಿಗೆ ಮೇಲೆ ದೇವಿ ಅಕ್ಷರ ಬರೆದ ಕಾರಣ ಕಾಳಿದಾಸ ಸಾಹಿತಿಯಾದ. ರಾಮಾಯಣ ರಚಿಸಿದ ವಾಲ್ಮೀಕಿ ದರೋಡೆಕೋರನಾಗಿದ್ದ ಎಂಬ ಮಾತು ನಂಬಬೇಡಿ. ಶೂದ್ರರು ವಿದ್ಯಾವಂತರಾಗಿ ಮಹತ್ತರವಾದದ್ದನ್ನು ಬರೆದರೆ ಇಂತಹ ಕತೆ ಕಟ್ಟಿ ಹೇಳುತ್ತಾರೆ.
ಶೂದ್ರರು ಶಿಕ್ಷಣ ಪಡೆದರೂ ಗೌರವ ಸಿಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಜಾತಿ ವ್ಯವಸ್ಥೆ ನಿಂತ ನೀರು. ಅದಕ್ಕೆ ಶಿಕ್ಷಣದ ಮೂಲಕ ಆರ್ಥಿಕ ಬಲ ನೀಡಿದರೆ ಚಲನೆ ಪಡೆದುಕೊಳ್ಳುತ್ತದೆ. ಆಗ ಮಾತ್ರ ಜಾತ್ಯತೀತ, ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಸಮುದಾಯದ ಇತಿಹಾಸ ದಾಖಲಿಸುವ ಸಲುವಾಗಿ ಕುರುಬರ ಸಾಂಸ್ಕೃತಿಕ ಪರಿಷತ್ತು ರಚಿಸಿಕೊಂಡು ಕೃತಿಗಳನ್ನು ಪ್ರಕಟಿಸಲಾಗಿದೆ ಎಂದು ಪರಿಷತ್ತು ಅಧ್ಯಕ್ಷ ಎಚ್.ಎಂ.ರೇವಣ್ಣ ವಿವರಣೆ ನೀಡಿದರು.
ಯಾವ ಸಮುದಾಯವೂ ತಮ್ಮ ಇತಿಹಾಸ ದಾಖಲಿಸುವ ಕೆಲಸ ಮಾಡಿಲ್ಲ. ಅಂತಹ ಕೆಲಸವನ್ನು ಕುರುಬ ಸಮುದಾಯ ಮಾಡಿದ್ದು, ಇತರರಿಗೆ ಮಾದರಿಯಾಗಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಕೆ.ರವಿ ಹೇಳಿದರು. ಸಮಾವೇಶದಲ್ಲಿ ಕುರುಬ ಸಮುದಾಯದ ಸಂಸ್ಕೃತಿ, ಪರಂಪರೆ, ಸಾಹಿತ್ಯ, ರಂಗಭೂಮಿ ಮೊದಲಾದ ವಿಚಾರಗಳ ಕುರಿತು ಗೋಷ್ಠಿ, ಚರ್ಚೆ ನಡೆದವು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಡಾ.ರಮಣ್, ಪತ್ರಕರ್ತ ಎಸ್.ನಾಗಣ್ಣ, ಇನ್ಸೈಟ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿಜಯ್ ಕುಮಾರ್ ಉಪಸ್ಥಿತರಿದ್ದರು.