
ಚಿಕ್ಕಬಳ್ಳಾಪುರ: ಭಾರತೀಯ ವಕೀಲರ ಪರಿಷತ್ನ ಸದಸ್ಯ ವೈ.ಆರ್.ಸದಾಶಿವರೆಡ್ಡಿ ಅವರಿಗೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದನ್ನು ಖಂಡಿಸಿ ಶಿಡ್ಲಘಟ್ಟದಲ್ಲಿ ವಕೀಲರು ಶನಿವಾರ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಮಾತನಾಡಿ, ಬೆಂಗಳೂರಿನ ಹಿರಿಯ ವಕೀಲ, ಭಾರತೀಯ ವಕೀಲರ ಪರಿಷತ್ ಸದಸ್ಯ ವೈ.ಆರ್.ಸದಾಶಿವರೆಡ್ಡಿ ಮೇಲೆ ಅವರ ಕಚೇರಿಯಲ್ಲಿಯೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ ಘಟನೆಯನ್ನು ಖಂಡಿಸಿದರು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

j3tvkannada
ವಕೀಲರಿಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕು. ವಕೀಲರ ರಕ್ಷಣೆಗಾಗಿ ಸರ್ಕಾರ ಕಾನೂನು ಜಾರಿ ಮಾಡಿದ್ದರೂ ಅದು ಹಲ್ಲುಕಿತ್ತ ಹಾವಿನಂತೆ ವಕೀಲರ ನೆರವಿಗೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಕೀಲರಿಗೆ ರಕ್ಷಣೆ ಇಲ್ಲವಾದರೆ ಇನ್ನು ಜನ ಸಾಮಾನ್ಯರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ ಅವರು, ವಕೀಲರ ರಕ್ಷಣೆಗೆ ರೂಪಿಸಿರುವ ಕಾನೂನನ್ನು ಇನ್ನಷ್ಟು ಕಠಿಣವಾಗಿಸಬೇಕು, ವಕೀಲರಿಗೆ ಕರ್ತವ್ಯದ ವೇಳೆ ಸೂಕ್ತ ರಕ್ಷಣೆ ಸಿಗುವಂತಾಗಬೇಕು ಎಂದು ಆಗ್ರಹಿಸಿದರು. ವಕೀಲ ಎಂ.ಪಾಪಿರೆಡ್ಡಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಲಕ್ಷ್ಮಿ, ಕೃಷ್ಣ, ವೆಂಕಟೇಶ್ ಭಾಗವಹಿಸಿದ್ದರು.