
ರಾಯಚೂರು: ಕನಿಷ್ಠ ಬೆಂಬಲ ಬೆಲೆ ಯೋಜನೆ (ಎಂಎಸ್ಪಿ) ಅಡಿಯಲ್ಲಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಆರಂಭವಾದ ತೊಗರಿ ಕೇಂದ್ರದಲ್ಲಿ ಸೌಲಭ್ಯದ ಕೊರತೆಯಿಂದಾಗಿ ರೈತರು ತಮ್ಮ ಧಾನ್ಯ ಮಾರಾಟ ಮಾಡಲು ಪರದಾಡುತ್ತಿದ್ದಾರೆ.

j3tvkannada
ಪಟ್ಟಣದ ಸುತ್ತಲಿನ ಪ್ರದೇಶದಲ್ಲಿ ತೊಗರಿ ಬೆಳೆದ ರೈತರು ತಮ್ಮ ಧಾನ್ಯ ಮಾರಾಟ ಮಾಡಲು ಎಪಿಎಂಸಿ ಯಲ್ಲಿರುವ ಖರೀದಿ ಕೇಂದ್ರಕ್ಕೆ ಹೋದರೆ, ಮಾರಾಟ ಮಾಡಲು ಮೂರು ದಿನಗಳಿಂದ ಪರದಾಡುತ್ತಿದ್ದಾರೆ. ರೈತ ತಮ್ಮ ಧಾನ್ಯಗಳನ್ನು ವಾಹನಗಳಲ್ಲಿ ತುಂಬಿಕೊಂಡು ನಿಂತಿದ್ದಾರೆ. ಕಳ್ಳರ ಹಾವಳಿಯಿಂದಾಗಿ ಹಗಲಿರುಳು ಧಾನ್ಯಗಳನ್ನು ಕಾಯಿಯುವಂತಾಗಿದೆ.
ಆದೇಶದಂತೆ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ತೊಗರಿ ಖರೀದಿಗೆ ನೀಡಿರುವ ಸಮಯದಲ್ಲಿ ಸರಿಯಾಗಿ ಅಧಿಕಾರಿಗಳು ನಿಗಾವಹಿಸುತ್ತಿಲ್ಲ. ದಾಸ್ತಾನುಗಳು ಹೆಚ್ಚಲು ಹೆಚ್ಚಿನ ಕೊಠಡಿಗಳ ವ್ಯವಸ್ಥೆ ಇಲ್ಲ. ಸಮರ್ಪಕ ಭದ್ರತೆ ವ್ಯವಸ್ಥೆ ಇಲ್ಲ. ಇದ್ದ ಕೊಠಡಿಗಳಿಗೆ ಸಮರ್ಪಕವಾಗಿ ಲಾಕರ್ ವ್ಯವಸ್ಥೆ ಇಲ್ಲ. ರೈತರು ಕೇಂದ್ರದ ಕಾರ್ಯದರ್ಶಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ರೈತ ವಿನೋದ ಕುಮಾರ ಆರೋಪಿಸಿದರು. ಮಾರುಕಟ್ಟೆಯಲ್ಲಿ ಸದ್ಯ ತೊಗರಿ ಸರಾಸರಿ ದರ 7,000ದಿಂದ 7,100ವರೆಗೆ ಇದೆ. ಖರೀದಿ ಕೇಂದ್ರಗಳಲ್ಲಿ ಕನಿಷ್ಠ ಬೆಂಬಲ ಬೆಲ ಯೋಜನೆಯಡಿ ಕ್ವಿಂಟಲ್ಗೆ 8 ಸಾವಿರ ಬೆಲೆ ನಿಗದಿಪಡಿಸಲಾಗಿದೆ. ಲಿಂಗಸುಗೂರು ತಾಲ್ಲೂಕಿನಲ್ಲಿ 12 ಖರೀದಿ ಕೇಂದ್ರಗಳಿದ್ದು, ಮುದಗಲ್ ಹೋಬಳಿಯಲ್ಲಿ ಮುದಗಲ್, ಬಯ್ಯಾಪುರ, ಮಾಕಾಪುರ, ನಾಗಲಾಪುರ, ಅಮದಿಹಾಳದಲ್ಲಿ ತೊಗರಿ ಖರೀದಿ ಕೇಂದ್ರಗಳಿವೆ. ‘ಸಾಲ ಮಾಡಿ ತೊಗರಿ ಕೃಷಿ ಮಾಡಿದ್ದೇವೆ. ಬೆಳೆ ಮಾರಿ, ಮಾಡಿದ ಸಾಲ ತೀರಿಸುವ ಜೊತೆಗೆ, ಮುಂದಿನ ಕೃಷಿ ಚಟುವಟಿಕೆಗೆ ತಯಾರಿ ನಡೆಸಬೇಕು. ಖರೀದಿ ಕೇಂದ್ರದಲ್ಲಿ ಮಾರಲು ಸಾಕಷ್ಟು ಸಮಯ ಹಿಡಿಯುತ್ತದೆ. ಇದರಿಂದಾಗಿ ತೊಂದರೆಯಾಗುತ್ತಿದೆ’ ಎಂದು ಕೃಷಿಕ ಹನುಮಂತ ಹೇಳಿದರು.