
ಕೋಲಾರ: ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಹಾಗೂ ರಾಷ್ಟ್ರೀಯ ವಕೀಲರ ಪರಿಷತ್ ಉಪಾಧ್ಯಕ್ಷ ವೈ.ಆರ್.ಸದಾಶಿವರೆಡ್ಡಿ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಖಂಡಿಸಿ ನಗರದಲ್ಲಿ ವಕೀಲರು ಪ್ರತಿಭಟನೆ ನಡೆಸಿದರು.

j3tvkannada
ನಗರದ ವಕೀಲರ ಸಂಘದ ಮುಂಭಾಗ ಜಮಾಯಿಸಿದ ವಕೀಲರು ಆರೋಪಿಗಳನ್ನು ಬಂಧಿಸಬೇಕು. ವಕೀಲರಿಗೆ ರಕ್ಷಣೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಹಲ್ಲೆಗೆ ಒಳಗಾಗಿರುವ ಸದಾಶಿವರೆಡ್ಡಿ ಅವರನ್ನು ಕೆಲವು ವ್ಯಕ್ತಿಗಳು, ಪ್ರಕರಣವೊಂದರ ವಕಾಲತ್ತು ವಹಿಸುವ ಸಂಬಂಧ ದೂರವಾಣಿ ಕರೆ ಮಾಡಿ ಕರೆದಿದ್ದು. ಈ ಹಿನ್ನೆಲೆಯಲ್ಲಿ ತಮ್ಮ ಕಚೇರಿಗೆ ಆಗಮಿಸಿದ ಸದಾಶಿವರೆಡ್ಡಿ ಅವರ ಮೇಲೆ ಕಚೇರಿ ಮುಂಭಾಗದಲ್ಲೇ ಹಲ್ಲೆ ಮಾಡಿದ್ದಾರೆ ಎಂದರು.
ಕಾನೂನು ರಕ್ಷಣೆಯ ಹೊಣೆ ಹೊತ್ತ ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು, ಇಂತಹ ಪ್ರಕರಣಗಳು ಮರುಕಳಿದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದರು. ಪ್ರತಿಭಟನೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ಉಪಾಧ್ಯಕ್ಷ ರವೀಂದ್ರಬಾಬು, ಖಜಾಂಚಿ ನವೀನ್, ಜಂಟಿ ಕಾರ್ಯದರ್ಶಿ ರೆಡ್ಡಪ್ಪ ಪದಾಧಿಕಾರಿಗಳು, ಹಿರಿಯ ವಕೀಲರಾದ ಕೆ.ವಿ.ಶಂಕರಪ್ಪ, ಬಿಸಪ್ಪಗೌಡ, ಟಿ.ಎಂ.ಶಿವಣ್ಣ, ಕೃಷ್ಣಾರೆಡ್ಡಿ, ಸಿ.ರಾಮಕೃಷ್ಣ, ರಘುಪತಿಗೌಡ, ವಕೀಲ ಹಾಗೂ ನೋಟರಿ ರಾಮಲಿಂಗೇಗೌಡ, ಶ್ಯಾಮ್, ರಾಜಕುಮಾರ್, ಲೋಕೇಶ್, ಸೋಮಶೇಖರ್, ರವಿ, ಸತೀಶ್, ಪ್ರಶಾಂತ್, ಶಂಕರ್, ಮಲ್ಲಿಕಾರ್ಜುನ್, ನಾರಾಯಣಸ್ವಾಮಿ, ನಾಗರಾಜ್ ಭಾಗವಹಿಸಿದ್ದರು.