
ಉಡುಪಿ:’ಯಕ್ಷಗಾನಕ್ಕೆ ಸರ್ಕಾರದಿಂದ ಸಿಗುವ ಅನುದಾನದ ಜೊತೆಗೆ ಈ ಭಾಗದ ಜನಪ್ರತಿನಿಧಿಗಳಾಗಿ ನಮ್ಮಿಂದ ಮಾಡಬಹುದಾದ ಹೆಚ್ಚಿನ ನೆರವನ್ನು ನೀಡುವಲ್ಲಿ ನಾವು ಸದಾ ಸಿದ್ಧರಿದ್ದೇವೆ’ ಎಂದು ಶಾಸಕ ಕಿರಣಕುಮಾರ ಕೊಡ್ಲಿ ಹೇಳಿದರು.

j3tvkannada
ಕೋಟ ಮೂರೈಯ ಹಂದೆ ಮಹಾವಿಷ್ಣು ವಿನಾಯಕ ದೇವಸ್ಥಾನದಲ್ಲಿ ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವದ ಸರಣಿ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಎರಡು ದಿನಗಳ ಆಹ್ವಾನಿತ ತಂಡಗಳ ಯಕ್ಷ ತ್ರಿವಳಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀಧರ ಹಂದೆ ಮತ್ತು ಕಾರ್ಕಡ ಶ್ರೀನಿವಾಸ ಉಡುಪ ಮಾತನಾಡಿ, ‘ಸಾಲಿಗ್ರಾಮ ಮಕ್ಕಳ ಮೇಳ 50 ವರ್ಷ ಪೂರೈಸಿರುವುದು ಅಭಿನಂದನೀಯ. ಯಕ್ಷಗಾನ ಕಲೆಯ ಏಳಿಗೆಗಾಗಿ ಶ್ರಮಿಸುತ್ತಿರುವ ಯಕ್ಷಗಾನ ಅಕಾಡೆಮಿ, ಉಡುಪಿ ಕಲಾರಂಗದ ಚಟುವಟಿಕೆಗಳು ಸ್ಮರಣೀಯ’ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ‘ಯಕ್ಷಗಾನದ ಪೌರಾಣಿಕ ಜ್ಞಾನವು ಮಕ್ಕಳಿಗೆ ಬದುಕಿನ ಸಂಸ್ಕಾರವನ್ನು ಕಲಿಸಿಕೊಡುತ್ತದೆ.
ಸಾಲಿಗ್ರಾಮ ಮಕ್ಕಳ ಮೇಳ, ಯಕ್ಷ ಶಿಕ್ಷಣ ಟ್ರಸ್ಟ್ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿಕೊಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡುತ್ತಿದ್ದಾರೆ ಎಂದರು. ಕೋಟ ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ ಸಿ ಕುಂದರ್, ಉಡುಪಿ ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಬಾರಿಕೆರೆ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಅಧ್ಯಕ್ಷ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆ, ಟ್ರಸ್ಟಿ ಶ್ರೀಕಾಂತ ಉಡುಪ ಇದ್ದರು.